ಸಂತ ಸೇವಾಲಾಲ್ 285ನೇ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ
ನ್ಯಾಮತಿ, ಫೆ.14- ರಾಜ್ಯದಲ್ಲಿರುವ ಲಂಬಾಣಿ ಜನಾಂಗ ವಿಶಿಷ್ಟ ಸಂಸ್ಕೃತಿ ಹೊಂದಿದೆ. ಈ ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಅವರು ಬುಧವಾರ ನ್ಯಾಮತಿ ತಾಲ್ಲೂಕಿನ ಭಾಯಾಘಡ್-ಸೂರಗೊಂಡನಕೊಪ್ಪದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಆಡಳಿತ, ತಾಂಡಾ ಅಭಿವೃದ್ದಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಹಣಾ ಪ್ರತಿಷ್ಠಾನ, ಸಂತ ಸೇವಾಲಾಲ್ ಜನ್ಮ ಸ್ಥಾನ ಮಹಾಮಠ ಸಮಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸಂತ ಸೇವಾಲಾಲ್ ರವರು 17, 18ನೇ ಶತಮಾನದಲ್ಲಿ ಅಹಿಂಸಾ ತತ್ವ, ಶಾಂತಿ ಸಂಕೇತವನ್ನು ಪ್ರತಿಪಾದಿಸಿದವರು. ಅಲೆಮಾರಿಯಾಗಿದ್ದ ಈ ಜನರು ನೆಲೆಗೊಂಡು ಸಾಂಸ್ಕೃತಿಕ ಮತ್ತು ಆರ್ಥಿಕ ಮುನ್ನಡೆಯಲ್ಲಿ ಸಂತ ಸೇವಾಲಾಲ್ ರವರ ಪಾತ್ರ ಪ್ರಮುಖವಾಗಿದೆ.
ಬಂಜಾರ ಸಾಂಪ್ರದಾಯಿಕತೆ, ಮೌಖಿಕ ಸಾಹಿತ್ಯ, ವೇಷಭೂಷಣ, ಕಲೆ ಸಂರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಈ ಜನಾಂಗದ ಸಂಘಟನೆಯಲ್ಲಿ ಪ್ರಮುಖವಾಗಿರುವ ಸೇವಾಲಾಲರು ಸೂರಗೊಂಡನಕೊಪ್ಪದಲ್ಲಿ ಹುಟ್ಟಿರುವುದು ಪುಣ್ಯಭೂಮಿಯಾಗಿದೆ ಎಂದರು.
ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಭಾಗವಹಿಸಬೇಕಿತ್ತು, ಕಾರಣಾಂತರದಿಂದ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ತಮ್ಮ ಸಂದೇಶದಲ್ಲಿ ರಾಜ್ಯ ಸರ್ಕಾರ ಲಂಬಾಣಿ ಜನಾಂಗದ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲಾ ಕ್ರಮ ಕೈಗೊಳ್ಳಲಿದ್ದು, ನಿಮ್ಮ ಜೊತೆ ಇರಲಿದೆ ಎಂದರು.
ಸೂರಗೊಂಡನಕೊಪ್ಪದಲ್ಲಿ ಶಾಲಾ-ಕಾಲೇಜು ಸ್ಥಾಪನೆ, ಇಲ್ಲಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ನಿಮ್ಮ ಪರವಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವೆ ಎಂದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರಿಗೆ ಲಂಬಾಣಿ ಜನಾಂಗದೊಂದಿಗೆ ನಿಕಟ ಸಂಪರ್ಕವಿತ್ತು ಮತ್ತು ಈ ಜನರ ಅಭಿವೃದ್ದಿಗೆ, ಬಡತನ ನಿವಾರಣೆಗೆ ಅವರಲ್ಲಿ ತುಡಿತವಿತ್ತು ಎಂದರು.
ಮುಂದಿನ ಜಯಂತಿಗೆ ರೈಲಿನಲ್ಲಿ ಬರುವಂತಾಗುವ ವ್ಯವಸ್ಥೆ : ಬಿ.ವೈ.ರಾಘವೇಂದ್ರ
ಮೊಟ್ಟ ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2 ಕೋಟಿ ಅನುದಾನ ನೀಡಿ ಸಂತ ಸೇವಾಲಾಲರ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟಿದ್ದನ್ನು ಸಂಸದ ಬಿ.ವೈ.ರಾಘವೇಂದ್ರ ಸ್ಮರಿಸಿದರು.
ತಾಂಡಾಭಿವೃದ್ಧಿ ನಿಗಮವನ್ನು ಪ್ರತ್ಯೇಕವಾಗಿ ರಚಿಸುವ ಮೂಲಕ ಸಂತ ಸೇವಾಲಾಲ್ ಜನ್ಮಸ್ಥಳ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಹರಿಹರ-ರಾಣೇಬೆನ್ನೂರು ಹಾಗೂ ಶಿಕಾರಿಪುರದ ರೈಲ್ವೆ ಮಾರ್ಗವನ್ನು ಸಂತ ಸೇವಾಲಾಲ್ ಅವರ ಜನ್ಮಸ್ಥಾನಕ್ಕೆ ಸಂಪರ್ಕಿಸುವ ಉದ್ದೇಶದಿಂದ ಭಾಯಾಘಡ್ ರೈಲ್ವೆ ನಿಲ್ದಾಣ ಮಾಡಿಸುತ್ತಿದ್ದು ಮುಂದಿನ ಜಯಂತಿ ಕಾರ್ಯಕ್ರಮದ ಒಳಗೆ ನೀವು ರೈಲಿನಲ್ಲಿ ಬರುವಂತಾಗುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿಧಾನಸಭಾ ಉಪ ಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, 1985ರಲ್ಲಿ ಸಮಾಜದ ಗಣ್ಯರು ಸೇರಿ ಕ್ಷೇತ್ರದ ಅಭಿವೃದ್ದಿಗೆ ಅಡಿಗಲ್ಲು ಹಾಕುತ್ತಾರೆ. ಸರ್ಕಾರ ಮೊಟ್ಟ ಮೊದಲು ರೂ.1 ಕೋಟಿ ಅನುದಾನ ನೀಡಿತು. 2013ರ ನಂತರ ಸರ್ಕಾರ ಈ ಕ್ಷೇತ್ರದ ಅಭಿವೃದ್ದಿಗಾಗಿ 60 ಕೋಟಿಗೂ ಹೆಚ್ಚಿನ ಅನುದಾನ ನೀಡಿತು.
ಮುಂದಿನ ದಿನಗಳಲ್ಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ರೂ. 50 ಕೋಟಿವರೆಗಿನ ವೆಚ್ಚದಲ್ಲಿ ವಸತಿ ಶಾಲೆ ನಿರ್ಮಾಣ ಮಾಡುವ ಯೋಜನೆ ಇದ್ದು ಇದಕ್ಕಾಗಿ 15 ಎಕರೆ ಜಾಗ ಮಂಜೂರು ಮಾಡಲಾಗಿದೆ. ಧಾರ್ಮಿಕ ಸಂಸ್ಥೆಯ ಜೊತೆಗೆ ಕೌಶಲ್ಯಾಭಿವೃದ್ಧಿಗಾಗಿ ಸರ್ಕಾರಿ ಐಟಿಐ ಕಾಲೇಜು ಆರಂಭಿಸಲು ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದರು.
ಪ್ರತಿಷ್ಠಾನದ ಮೂಲಕ ನೀಡಿದ 10 ಕೋಟಿಯಲ್ಲಿ ಗೋಶಾಲೆ, ಸೌರ ವಿದ್ಯುತ್ ಉತ್ಪಾದನೆ ಮಾಡುವ ಕೆಲಸ ನಡೆಯುತ್ತಿದೆ. ಇಲ್ಲಿ ಸಪ್ತಮಾತೃಕಿಯರ ಕೊಳದ ನಿರ್ಮಾಣ, ಹಳೇಜೋಗದಿಂದ ಚಿನ್ನಿಕಟ್ಟೆವರೆಗೆ ದ್ವಿಪಥ ರಸ್ತೆ ನಿರ್ಮಾಣವಾಗಬೇಕಾಗಿದೆ ಎಂದರು.
ವಿಧಾನಪರಿಷತ್ತಿನ ಶಾಸಕ ಪ್ರಕಾಶ್ ಕೆ. ರಾಥೋಡ್ ಮಾತನಾಡಿ, ಬಂಜಾರ ಸಮುದಾಯದ ಅಭಿವೃದ್ಧಿಗೆ 390 ಕೋಟಿ ಅನುದಾನವನ್ನು ಸಿದ್ದರಾಮಯ್ಯ ನೀಡಿದ್ದಾರೆ. ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಸಂಘಟನೆ ಅನಿವಾರ್ಯ ಅಂತಹ ಸಂಘಟನೆ ನಮ್ಮ ಸಮಾಜದಲ್ಲಿದೆ ನಾವು ಯಾವುದೇ ಪಕ್ಷ ಇರಲಿ ನಾವು ಸಮಾಜಕ್ಕಾಗಿ ಒಂದಾಗುತ್ತೇವೆ ಅದಕ್ಕೆ ನಮಗೆಲ್ಲ ಹೆಮ್ಮೆ ಇದೆ ಎಂದರು.
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಾತನಾಡಿ, ಬಂಜಾರ ಸಮಾಜದ ನಾವುಗಳು ಶ್ರಮಜೀವಿಗಳಾಗಿ ಸ್ವಾಭಿಮಾನಿಗಳಾಗಿ ಜೀವನ ಸಾಗಿಸುತ್ತಿದ್ದೇವೆ ಹಾಗಾಗಿ ಇತರೆ ಸೋದರ ಸಮಾಜ ನಮ್ಮನ್ನು ಗೌರವದಿಂದ ಕಾಣುತ್ತಿದ್ದಾರೆ ಎಂದರು.
ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಿ ನಾತನಾಡಿ, 2013 ರಲ್ಲಿ ಬಂಜಾರ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಿದ್ದೇನೆ. ಬಗರ್ ಹುಕುಂ ಸಾಗುವಳಿದಾರರ ಮನವೊಲಿಸಿ 13 ಎಕರೆ ಜಾಗವನ್ನು ಕೊಡಿಸಿದ್ದೇನೆ ಎಂದರು.
ಕಲ್ಬುರ್ಗಿ ಸಂಸದ ಉಮೇಶ್ ಜಿ.ಜಾಧವ್,ಎಂ.ಪಿ.ರೇಣುಕಾಚಾರ್ಯ, ಜನ್ಮಸ್ಥಾನದ ಮಹಾಮಠ ಸಮಿತಿಯ ಪ್ರಧಾನ ಧರ್ಮದರ್ಶಿ ಬಿ.ಹೀರಾನಾಯ್ಕ್ ಮಾತನಾಡಿದರು.
ವೇದಿಕೆಯಲ್ಲಿ ಮಹಾರಾಷ್ಟ್ರದ ಬಾಬುಸಿಂಗ್ ಮಹಾರಾಜ್, ಸಿದ್ದಲಿಂಗದೇವರು, ಮಾಜಿ ಶಾಸಕರಾದ ಅಶೋಕ್ ನಾಯ್ಕ್, ಪಿ.ಟಿ.ಪರಮೇಶ್ವರನಾಯ್ಕ್, ಸಮಿತಿಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಹನುಮಂತನಾಯ್ಕ್, ಪ್ರಧಾನ ಕಾರ್ಯದರ್ಶಿ ಎನ್.ಅರುಣ್ಕುಮಾರ್, ಡಾ.ಈಶ್ವರ್ನಾಯ್ಕ್, ರಾಘವೆಂದ್ರನಾಯ್ಕ್, ಮಾರುತಿನಾಯ್ಕ್, ಸುರೇಂದ್ರನಾಯ್ಕ್, ಜಿ.ಎಸ್.ಅಮಿತ್ಕುಮಾರ್, ಜಿ.ಎಂ.ಲಿಂಗರಾಜ್, ತಾಂಡಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್.ಶಿವಶಂಕರ್ ನಾಯ್ಕ್, ಜಿಲ್ಲಾಧಿಕಾರಿ ವೆಂಕಟೇಶ್, ಎಸಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್ಗಳಾದ ಪಟ್ಟರಾಜೇಗೌಡ, ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು.