ವಾಲ್ಮೀಕಿ ಜಾತ್ರೆ ಅರಿವಿನ ಜಾತ್ರೆ ಅಷ್ಟೇ ಅಲ್ಲ, ಭಾವೈಕ್ಯತೆಯ ಸಂಗಮ

ವಾಲ್ಮೀಕಿ ಜಾತ್ರೆ ಅರಿವಿನ ಜಾತ್ರೆ ಅಷ್ಟೇ ಅಲ್ಲ, ಭಾವೈಕ್ಯತೆಯ ಸಂಗಮ

ವಾಲ್ಮೀಕಿ ಜಾತ್ರೆಯ ಧರ್ಮಸಭೆಯಲ್ಲಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮೆಚ್ಚುಗೆ

ಮಲೇಬೆನ್ನೂರು, ಫೆ. 9- ವಾಲ್ಮೀಕಿ ಜಾತ್ರೆ ಅರಿವಿನ ಜಾತ್ರೆ ಅಷ್ಟೇ ಅಲ್ಲ, ವಾಲ್ಮೀಕಿ ಜಾತ್ರೆ ಭಾವೈಕ್ಯತೆಯ ಸಂಗಮವಾಗಿ ಹೊರ ಹೊಮ್ಮಿದೆ ಎಂದು ಬಾಳೆಹೊಸೂರು ಹಾಗೂ ಶಿರಹಟ್ಟಿ ಮಠದ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ನಡೆದ 6ನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಹಮ್ಮಿಕೊಂಡಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಭಕ್ತರು ಮಠದ ಕಾರ್ಯಕ್ರಮಗಳಿಗೆ ಮನೆ ಮಂದಿ ಯನ್ನು ಕರೆದುಕೊಂಡು ಬರುವ  ಸಂಪ್ರದಾಯ ರೂಢಿಸಿ ಕೊಳ್ಳಬೇಕೆಂದು  ಕರೆ ನೀಡಿದ ದಿಂಗಾಲೇಶ್ವರ ಶ್ರೀಗಳು, ಯಾವ ಬಿರುಗಾಳಿ ಬೀಸಿದರೂ ಸ್ವಾಮೀಜಿ ಗುಡ್ಡದಂತೆ ಗಟ್ಟಿಯಾಗಿರಬೇಕು. 

ಯಾವುದೇ ಟೀಕೆ-ಟಿಪ್ಪಣಿಗಳಿಗೆ ಕಿವಿಕೊಡದೇ ಸಮಾಜಮುಖಿ ಕೆಲಸಗಳನ್ನು ಮತ್ತು ಶಿಕ್ಷಣ ನೀಡುವ ಕೆಲಸವನ್ನು ಮಾಡಬೇಕೆಂದು  ಹೇಳಿದರು.

ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ ಮಾತನಾಡಿ, ಬೇಡರು ಮತ್ತು ಅಂಬಿಗರು ರಾಮಾಯಣ, ಮಹಾಭಾರತ ಎಂಬ ಪವಿತ್ರ ಗ್ರಂಥಗಳನ್ನು ಈ ಜಗತ್ತಿಗೆ ಕೊಟ್ಟಿದ್ದಾರೆ.

ಹಿಂದುಳಿದ ಸಮಾಜಗಳು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪ್ರಾತಿನಿಧ್ಯ ಪಡೆಯಲು ಗುರುಪೀಠಗಳು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ವಾಲ್ಮೀಕಿ ಶ್ರೀಗಳು ಪಾದಯಾತ್ರೆ, ಸತ್ಯಾಗ್ರಹ ಮಾಡಿ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಾಲ್ಮೀಕಿ ಜಾತ್ರೆಯಿಂದಾಗಿ ಇಲ್ಲಿ ಇಷ್ಟೊಂದು ಸಂಭ್ರಮದ ಮೂಲಕ ಜನರಿಗೆ ಅರಿವಿನ ಜ್ಞಾನ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಶ್ರೀಗಳ ಹೋರಾಟದ ಫಲವಾಗಿ ಕೇವಲ ಎಸ್ಟಿ ಮೀಸಲಾತಿ ಹೆಚ್ಚಳ ಆಗಲಿಲ್ಲ, ಎಸ್ಸಿ ಮೀಸಲಾತಿಯೂ ಹೆಚ್ಚಳವಾಗಿದೆ. ಅದಕ್ಕಾಗಿ ಶ್ರೀಗಳನ್ನು ಅಭಿನಂದಿಸುತ್ತೇವೆ  ಎಂದು ಶ್ರೀಗಳು ತಿಳಿಸಿದರು.

ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ವಾಲ್ಮೀಕಿ ಜಾತ್ರೆ ಸಮಾಜದ ಪರಿವರ್ತನೆಗೆ ದಾರಿದೀಪವಾಗಿದೆ ಎಂದು ಹೇಳಿದರು.

ಜೇವರ್ಗಿಯ ಮರುಳಶಂಕರ ದೇವರಮಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಮಾತನಾಡಿ, ಬೇಡರು ಶೂರರು-ಧೀರರು ಅಷ್ಟೇ ಅಲ್ಲ. ಉದಾರಿಗಳು-ದಾನಿಗಳೂ ಕೂಡಾ ಆಗಿದ್ದಾರೆ. ಮೀಸಲಾತಿ ಹೆಚ್ಚಳ ವಿಷಯದಲ್ಲಿ ಶ್ರೀಗಳು ನಡೆಸಿದ ಪಾದಯಾತ್ರೆ-ಸತ್ಯಾಗ್ರಹ ಇತಿಹಾಸ ಸೇರಿದ್ದು, ಮಹಾತ್ಮ ಗಾಂಧೀಜಿ ನಂತರ ಅತಿ ಹೆಚ್ಚು ದಿನ ಸತ್ಯಾಗ್ರಹ ನಡೆಸಿದ ಕೀರ್ತಿ ವಾಲ್ಮೀಕಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಿಂ. ಶ್ರೀ ಪುಣ್ಯಾನಂದ ಪುರಿ ಶ್ರೀಗಳವರ ತಾಯಿ ಶ್ರೀಮತಿ ಮಹಾದೇವಮ್ಮ ರಂಗಸ್ವಾಮಿ ಅವರನ್ನು ಈ ವೇಳೆ ಎಲ್ಲಾ ಮಠಾಧೀಶರು ಸೇರಿ ಗೌರವಿಸಿದರು.

ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಯೋಗಿ ವೇಮನ ಗುರುಪೀಠದ ಶ್ರೀ ವೇಮಾನಂದ ಸ್ವಾಮೀಜಿ, ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ವನಶ್ರೀ ಸಂಸ್ಥಾನದ ಡಾ. ಬಸವಕುಮಾರ ಸ್ವಾಮೀಜಿ, ಯಾದವ ಗುರುಪೀಠದ ಶ್ರೀ ಬಸವ ಯಾದವಾನಂದ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಹಡಪದ ಮಠದ ಶ್ರೀ ಹಡಪದ ಅಪ್ಪಣ್ಣ ಸ್ವಾಮೀಜಿ, ಬ್ರಹ್ಮಶ್ರೀ ನಾರಾಯಣ ಗುರುಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀ ಬಸವಪ್ರಭು ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ಗೊಲ್ಲಪಲ್ಲಿ ವಾಲ್ಮೀಕಿ ಆಶ್ರಮದ ಶ್ರೀ ವರದಾನೇಶ್ವರ ಸ್ವಾಮೀಜಿ, ಶಿಡ್ಲೇಕೋಣ ವಾಲ್ಮೀಕಿ ಆಶ್ರಮದ ಶ್ರೀ ಸಂಜಯ ಕುಮಾರ ಸ್ವಾಮೀಜಿ, ನೇಗಿನಾಳ ಮಠದ ಶ್ರೀ ಬಸವ ಪ್ರಕಾಶ ಸ್ವಾಮೀಜಿ, ಕೊಪ್ಪಳದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಗಂಗಾಪುರ ಸಿದ್ಧಾರೂಢಾಶ್ರಮದ ಶ್ರೀ ಮರುಳಶಂಕರ ಸ್ವಾಮೀಜಿ, ಯರಗಟ್ಟಿ ಸಿದ್ಧಾರೂಢ ಮಠದ ಶ್ರೀ ಜಯದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕರಾದ ಯು.ಬಿ.ಬಣಕಾರ, ಶ್ರೀನಿವಾಸ ಮಾನೆ, ಜಗಳೂರು ದೇವೇಂದ್ರಪ್ಪ, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಜಾತ್ರಾ ಸಮಿತಿ ಸಂಚಾಲಕ ಬಿ.ಶಿವಪ್ಪ, ಮಠದ ಧರ್ಮದರ್ಶಿಗಳಾದ ಶ್ರೀಮತಿ ಶಾಂತಲಾ, ರಾಜಣ್ಣ, ಡಾ.ಜಿ.ರಂಗಯ್ಯ, ಹರ್ತಿಕೋಟೆ ವೀರೇಂದ್ರ ಸಿಂಹ, ಶಾಂತಕುಮಾರ ಸುರಪುರ, ಹಾಸನದ ಮಹೇಶ್, ಬಿ.ವೀರಣ್ಣ, ಹೊಸಪೇಟೆಯ ಜಂಬಯ್ಯ ನಾಯಕ, ಕೋಲಾರ ವೆಂಕಟರಮಣ, ಹರಿಹರದ ಕೆ.ಬಿ.ಮಂಜುನಾಥ್, ಮುಖಂಡರಾದ ಚಿತ್ರದುರ್ಗದ ಶ್ರೀನಿವಾಸ ನಾಯಕ, ಟಿ.ಈಶ್ವರ್, ಹೊದಿಗೆರೆ ರಮೇಶ್, ಜಿಗಳಿಯ ಜಿ.ಆನಂದಪ್ಪ, ಕೆ.ಆರ್.ರಂಗಪ್ಪ, ಹರಿಹರದ ದಿನೇಶ್ ಬಾಬು, ಮಾರುತಿ ಬೇಡರ್, ಪಾರ್ವತಿ ಬೋರಯ್ಯ, ವಿಜಯಶ್ರೀ ಮಹೇಂದ್ರಕುಮಾರ್, ಗೌರಮ್ಮ ಮಂಜುನಾಥ್ ಸೇರಿದಂತೆ ಇನ್ನೂ ಅನೇಕರು ವೇದಿಕೆಯಲ್ಲಿದ್ದರು.

error: Content is protected !!