ದಾವಣಗೆರೆ, ಫೆ.4- ಮನುಷ್ಯನೇ ಮಾಡಿದ ತಪ್ಪಿನಿಂದಾಗಿ ಈ ಏಡ್ಸ್ ರೋಗ ಉಲ್ಬಣವಾಗುತ್ತಿದೆ, ಜನರಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚಿಸುವುದರಿಂದ ಇದನ್ನು ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ವಿ. ಅಶೋಕ್ ಹೇಳಿದರು.
ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಎಚ್ಐವಿ ಮತ್ತು ಏಡ್ಸ್ ಬಗ್ಗೆ ಇರುವ ವ್ಯತ್ಯಾಸ ತಿಳಿಸಿಕೊಡಬೇಕು, ಸೋಂಕು ತಡೆಯುವಿಕೆ ಮತ್ತು ನಿವಾರಣೆಯ ಬಗ್ಗೆ ಅರಿವಿರಬೇಕು. ಅನೈತಿಕ ಸಂಬಂಧ, ಅಸುರಕ್ಷಿತ ಲೈಂಗಿಕ ಚಟುವಟಿಕೆ, ಮಾದಕ ವ್ಯಸನ ಇಂತವುಗಳಿಂದ ದೂರವಿದ್ದು, ಏಡ್ಸ್ ನಿಯಂತ್ರಿಸಲು ಸಹಕರಿಸಬೇಕು ಎಂದರು.
ಪ್ರಾಂಶುಪಾಲರಾದ ಪ್ರೊ. ಸಿದ್ದರಾಮ್ ಚನಗೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರಾಜ್ಯದಲ್ಲಿ ಹೆಚ್ಚುತ್ತಿರುವ ಏಡ್ಸ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ, ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ಸುತ್ತಮುತ್ತಲಿರುವ ಜನಸಾಮಾನ್ಯರಲ್ಲಿ ವಿಚಾರವನ್ನು ಹಂಚಿಕೊಳ್ಳಬೇಕು ಎಂದರು.
ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ ಡಾ. ರಮೇಶ್ ಮಾತನಾಡುತ್ತಾ ಏಡ್ಸ್ ಬಗ್ಗೆ ಮುಜುಗರ ತೊರೆದು ಮುಕ್ತವಾಗಿ ಮಾತನಾಡುತ್ತಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಏಡ್ಸ್ ನಿಯಂತ್ರಣದ ಬಗ್ಗೆ ಚಿತ್ರ ಬಿಡಿಸಿದ ವಿದ್ಯಾರ್ಥಿಗಳಾದ ಎಚ್. ಎಸ್. ಪ್ರೇರಣ, ಮಿಸ್ಬಾ ನಾಜ್, ರಕ್ಷಿತಾ ಅವರಿಗೆ ಬಹುಮಾನ ವಿತರಿಸಲಾಯಿತು.