ಧರ್ಮದ ಹಾದಿಯಲ್ಲಿ ಸಾಗಲು ಸರ್ವರು ಮುಂದಾಗಬೇಕು : ಶಾಸಕ ಬಿ.ಪಿ.ಹರೀಶ್

ಧರ್ಮದ ಹಾದಿಯಲ್ಲಿ ಸಾಗಲು ಸರ್ವರು ಮುಂದಾಗಬೇಕು : ಶಾಸಕ ಬಿ.ಪಿ.ಹರೀಶ್

ನಾಡಿನ ಕಲ್ಯಾಣಕ್ಕಾಗಿ, ಧಾರ್ಮಿಕ ಕ್ರಾಂತಿಗಾಗಿ ಶರಣರು, ಸಂತರು, ಸಿದ್ದರು, ಸತ್ಪುರುಷರು ಅವತರಿಸಿದ 12ನೇ ಶತಮಾನ

ಹರಿಹರ, ಫೆ. 2 – ವೀರಗಂಟಿ ಮಡಿವಾಳ ಮಾಚಿದೇವರ ಭಾವಚಿತ್ರ ದರ್ಶನ ಮಾಡಿ ಅವರ ಕುರಿತು ಚಿಂತನೆ ಮಾಡಿದಲ್ಲಿ, ಅವರೊಬ್ಬ ಮಹಾನ್ ಜ್ಞಾನಿಗಳೆಂದು, ಸಮಾಜ ಸುಧಾರಕರೆಂದು ಕಂಡುಬರುತ್ತದೆ. ಅವರು ಹಾಕಿಕೊಟ್ಟಿರುವ ಧರ್ಮದ ಹಾದಿಯಲ್ಲಿ ಸಾಗಲು ಸರ್ವರು ಮುಂದಾಗಬೇಕೆಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾ ಯತ, ನಗರಸಭೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕಿನ ಸರ್ಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ತಾಲ್ಲೂಕು ಆಡಳಿತ ಕಛೇರಿಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಗುರು ವೀರಗಂಟಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ, ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

12ನೇ ಶತಮಾನವೆಂದರೆ ನಾಡಿನ ಕಲ್ಯಾಣಕ್ಕಾಗಿ, ಧಾರ್ಮಿಕ ಕ್ರಾಂತಿಗಾಗಿ ಶರಣರು, ಸಂತರು, ಸಿದ್ದರು, ಸತ್ಪುರುಷರು ಅವತರಿಸಿದ ಶತಮಾನವಾಗಿದೆ. ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣನವರ ಅನುಯಾಯಿಗಳಾಗಿದ್ದ, ವಚನ ಸಂರಕ್ಷಕ ಗುರು ವೀರಗಂಟಿ ಮಡಿವಾಳ ಮಾಚಿದೇವರವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಅಗ್ರಣಿಯರೆನ್ನಿಸಿಕೊಂಡಿದ್ದಾರೆ. 

ವಿಶ್ವದ ಯಾವುದೇ ದೇಶದಲ್ಲಿ ಸಂಸ್ಕೃತಿಯ ರೀತಿ, ನೀತಿ ಇಲ್ಲದ ಮಾನವರಿಗೆ ತಮ್ಮ ವಚನಗಳ ಛಾಟಿ ಏಟಿನಿಂದ ಜಾಗೃತರನ್ನಾಗಿಸಿದ್ದಾರೆ. ಮಾನವರಾದ ನಾವೆಲ್ಲಾ ಒಂದೇ. ಮಾನವ ಜನ್ಮಕ್ಕೆ ಬಂದ ಮೇಲೆ ಜ್ಞಾನವಂತರಾಗಬೇಕೆಂದು ಮಡಿವಾಳ ಮಾಚಿದೇವರು ತಿಳಿಸಿದ್ದಾರೆ. ಅವರು ಹಾಕಿಕೊಟ್ಟಿ ರುವ ಧರ್ಮದ ಹಾದಿಯಲ್ಲಿ ಸಾಗಲು ಸರ್ವರೂ ಮುಂದಾಗಬೇಕು. ಮಡಿವಾಳ ಸಮಾಜ ಯಾವಾ ಗಲು ನಮ್ಮ ಜೊತೆಯಲ್ಲಿದೆ. ನಾನು ತಮ್ಮ ಕಾರ್ಯಗಳಲ್ಲಿ ಯಾವಾಗಲೂ ಜೊತೆಯಲ್ಲಿರುತ್ತೇ ನೆಂದು ಶಾಸಕ ಬಿ.ಪಿ ಹರೀಶ್ ಭರವಸೆ ನೀಡಿದರು.

ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು, ತಹಶೀಲ್ದಾರ್‌ ಗುರುಬಸವರಾಜ ಮಾತನಾಡಿ, ಬಸವಣ್ಣನವರು `ಕಾಯಕವೇ ಕೈಲಾಸ’ ಎಂಬ ಪಾರಂಪರಿಕ ಕಾರ್ಯಗಳಿಂದ ಇಂದು ದೇವರೆನ್ನಿಸಿಕೊಂಡಿದ್ದಾರೆ. ಅವರ ಅನುಯಾಯಿಗಳಾಗಿದ್ದ ಮಡಿವಾಳ ಮಾಚಿ ದೇವರು, ಹರಳಯ್ಯ, ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಮಲ್ಲಿಕಾರ್ಜುನ, ನೀಲಾಂಬಿಕೆ, ನಾಗಲಾಂಬಿಕೆ, ಮೋಳಗಿ ಮಾರಯ್ಯ, ಆಯ್ದಕ್ಕಿ ಮಾರಯ್ಯ, ಲಕ್ಕಮ ಸೇರಿದಂತೆ ಅನೇಕರು ಕಾಯಕದಿಂದ ಕೈಲಾಸ ಕಂಡಿದ್ದಾರೆ. 

12ನೇ ಶತಮಾನದಲ್ಲಿ ಅವತರಿಸಿ ವಿಶ್ವದಲ್ಲಿಯೇ ಶ್ರೇಷ್ಠವಾದ ಚಿಂತನೆಗಳನ್ನು ಮಾಡಿ ವಚನಗಳ ಮೂಲಕ ನಮಗೆ ನೀಡಿದ್ದಾರೆ. ಅವರ ವಚನಗಳನ್ನು ಅರ್ಥೈಸಿಕೊಂಡು ಇಂದಿನ ಮಕ್ಕಳಿಗೆ ಅವರ ಕುರಿತು ಮಾಹಿತಿ ನೀಡುವುದರೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವಂತರ  ನ್ನಾಗಿಸಲು ಮುಂದಾಗಬೇಕೆಂದು ಕರೆ ನೀಡಿದರು.

ತಾಲ್ಲೂಕು ಮಡಿವಾಳ ಸಮಾಜದ ಕಾರ್ಯದರ್ಶಿ ರಂಗನಾಥ ಕೊಮಾರನಹಳ್ಳಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ಅಧ್ಯಕ್ಷ ಭೀಮಣ್ಣ ಎಂ.ಹೆಚ್, ಉಪಾಧ್ಯಕ್ಷರುಗಳಾದ ಕುಣೆಬೆಳಕೆರೆ ಮಲ್ಲೇಶಪ್ಪ, ಈಶ್ವರ, ಸಮಾಜದ ಮಹಿಳಾ ಅಧ್ಯಕ್ಷೆ ಪ್ರೇಮಾ ಮಡಿವಾಳರ, ಮುಖಂಡರುಗಳಾದ ರವಿ, ನಂದಿಗಾವಿ ಕೆಂಚಣ್ಣ, ಮಾಷ್ಠಿ ಕಾಳಪ್ಪ, ತಾ.ಪಂ ಕಾ.ನಿ ಅಧಿಕಾರಿ ರಮೇಶ್ ಸುಲ್ಪಿ, ನಗರಸಭೆ ಪೌರಾಯುಕ್ತ ಬಸವರಾಜ ಐಗೂರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೂಮೇಶ್ ಎ.ಕೆ, ಸಿಡಿಪಿಓ ಪೂರ್ಣಿಮಾ, ಮಲೇಬೆನ್ನೂರು ಪುರಸಭೆಯ ಮುಖ್ಯಾಧಿಕಾರಿ ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ ರಾಮಕೃಷ್ಣಪ್ಪ ಉಪಸ್ಥಿತರಿದ್ದರು. ಪತ್ರಕರ್ತ ಲೋಕಿಕೆರೆ ಅಣ್ಣಪ್ಪ ಸ್ವಾಗತಿಸಿ, ನಿರೂಪಿಸಿದರು. ರಘು (ಗುತ್ತೂರು) ಮಡಿವಾಳರ ವಂದಿಸಿದರು.

error: Content is protected !!