ಮುಖ್ಯಶಿಕ್ಷಕಿ ವಿರುದ್ದ ವಿದ್ಯಾರ್ಥಿಗಳು ರಸ್ತೆ ತಡೆದು  ಪ್ರತಿಭಟನೆ

ಜಗಳೂರು, ಜ.28- ತಾಲ್ಲೂಕಿನ ದೇವಿಕೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ  ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪೋಷಕರು ಹಾಗೂ ಗ್ರಾಮಸ್ಥರೊಂದಿಗೆ  ರಸ್ತೆ ತಡೆದು ಮುಖ್ಯಶಿಕ್ಷಕಿ ಪ್ರತಿಭಟನೆ ವಿರುದ್ಧ ನಡೆಸಿದರು.

ಮುಖ್ಯಶಿಕ್ಷಕಿ ವಿದ್ಯಾರ್ಥಿಗಳಿಗೆ ಸರ್ಕಾರಿ ಸೌಲಭ್ಯಗಳಾದ ಶೂ, ಸಮವಸ್ತ್ರಗಳನ್ನು ಸಮರ್ಪಕವಾಗಿ ವಿತರಿಸುವುದಿಲ್ಲ. ಕಳೆದ ವರ್ಷದಲ್ಲಿನ ಶೂಗಳನ್ನೇ ವಿತರಿಸಿದ್ದಾರೆ, ಅಲ್ಲದೆ ಮೂಲಸೌಕರ್ಯಗಳಾದ ಕುಡಿಯುವ ನೀರು ಹಾಗೂ ಶೌಚಾಲಯಗಳ ಸೌಲಭ್ಯ ಇಲ್ಲ. ವಿದ್ಯಾರ್ಥಿಗಳಿಂದ ಅನಧಿಕೃತವಾಗಿ 500ರೂ ವರೆಗೆ ವಸೂಲಿ ಮಾಡುತ್ತಿದ್ದಾರೆ. ಪ್ರಶ್ನಿಸಿದರೆ ಭಯಪಡಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಎಸ್. ಡಿ. ಎಂ. ಸಿ. ಅಧ್ಯಕ್ಷ ಎಂ. ಎಲ್. ನಾಗರಾಜ್ ಮಾತನಾಡಿ, ನಾನು ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಎರಡು ವರ್ಷ ಕಳೆದರೂ ಅಭಿವೃದ್ದಿ ಬಗ್ಗೆ ಮಾಹಿತಿಯಿಲ್ಲ. ಸಭೆಗಳಲ್ಲಿ ಸಹಿಯನ್ನೂ ಮಾಡಿಸಿಲ್ಲ. ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆ. ಅಲ್ಲದೆ ಅನಧಿಕೃತವಾಗಿ ನಿರಂತರ ಗೈರಾಗುತ್ತಾರೆ ಎಂದು ಆರೋಪಿಸಿದರು.

ಈ ಬಗ್ಗೆ ಹಲವು ಬಾರಿ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇಂದು ಸ್ವಯಂ ಪ್ರೇರಿತವಾಗಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೋರಾಟಕ್ಕೆ  ರಸ್ತೆಗಿಳಿದಿದ್ದಾರೆ. ಯಾವುದೇ ಕ್ರಮಕೈಗೊಳ್ಳದೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.

ಸ್ಥಳಕ್ಕೆ ಬಿಆರ್‌ಸಿ ಭೇಟಿ  : ಪ್ರತಿಭಟನಾ ಸ್ಥಳಕ್ಕೆ ಬಿಆರ್ ಸಿ ಡಿ ಡಿ ಹಾಲಪ್ಪ ಭೇಟಿ ನೀಡಿ ಪ್ರತಿಭಟನೆ ತಿಳಿಗೊಳಿಸಿ ಶಾಲಾ ಆವರಣದಲ್ಲಿ ಸಭೆ ನಡೆಸಿ, ಕಳೆದ 6 ತಿಂಗಳ ಹಿಂದೆ ಮುಖ್ಯಶಿಕ್ಷಕಿ ವರ್ಗಾವಣೆಗೆ ಶಿಫಾರಸ್ಸು ಮಾಡಿ ವರದಿ ಸಲ್ಲಿಸಲಾಗಿದೆ, ಆಯುಕ್ತರ ಹಂತದಲ್ಲಿದೆ. ಶಿಕ್ಷಣ ಇಲಾಖೆ ಅನ್ವಯ ತನಿಖೆ ನಡೆಯುತ್ತಿದೆ.ಇದೀಗ ಡಿಡಿಪಿಐ ಅವರ ನಿರ್ದೇಶನದಂತೆ ಶಾಲೆಯ ಹಿರಿಯ ಶಿಕ್ಷಕರಿಗೆ ಮುಖ್ಯಶಿಕ್ಷಕರ ಜವಾಬ್ದಾರಿ ಕಾರ್ಯಭಾರ ವಹಿಸಲಾಗಿದೆ. 

ಮುಖ್ಯಶಿಕ್ಷಕಿ ಅರ್ಜುಮನ್‌ ಬಾನು ಅವರಿಗೆ ಕಡ್ಡಾಯ ರಜೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡ ಬಸವಾಪುರ ರವಿಚಂದ್ರ, ಗ್ರಾ.ಪಂ ಅಧ್ಯಕ್ಷೆ ರಣದಮ್ಮ, ಚಂದ್ರಪ್ಪ, ಗ್ರಾ. ಪಂ. ಸದಸ್ಯ  ಗುರುಸ್ವಾಮಿ, ನಾಗರಾಜ್ ,ಮುಖಂಡರಾದ ಶೃಂಗೇಶ್, ಸ್ವಾಮಿ, ಭಾಗವಹಿಸಿದ್ದರು.

error: Content is protected !!