ಶಾಂತಿ, ಸಾಮರಸ್ಯ ಜೀವನಕ್ಕೆ ಹೆಚ್ಚಿನ ಆದ್ಯತೆ

ಶಾಂತಿ, ಸಾಮರಸ್ಯ ಜೀವನಕ್ಕೆ ಹೆಚ್ಚಿನ ಆದ್ಯತೆ

ಜಗಳೂರು ಶಾಸಕ ಬಿ. ದೇವೇಂದ್ರಪ್ಪ

ಜಗಳೂರು, ಜ.24- ವಿಧಾನಸಭಾ ಕ್ಷೇತ್ರ ವ್ಯಾಪಿಯಲ್ಲಿ  ಶಾಂತಿ, ಸುವ್ಯವಸ್ಥೆ, ಸಾಮರಸ್ಯಕ್ಕೆ ಹೆಚ್ಚಿನ  ಆದ್ಯತೆ ನೀಡುವುದಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಠಾಣೆ ನವೀಕರಣ  ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌.

ತಾಲ್ಲೂಕಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ನಿಷ್ಠೆ, ಕರ್ತವ್ಯಪಾಲನೆಯಿಂದ ಶಾಂತಿ, ನೆಮ್ಮದಿಯಿಂದ ಸಾರ್ವಜನಿಕರು ಜೀವನ ಸಾಗಿಸುತ್ತಿದ್ದಾರೆ.

ನಾನು ಶಾಸಕನಾಗಿ ಆಯ್ಕೆಯಾಗಿ ಇದೀಗ 8 ತಿಂಗಳು ಕಳೆದಿವೆ. ತಾಲ್ಲೂಕಿನಲ್ಲಿ ಗಂಭೀರ ಸಮಸ್ಯೆಗಳನ್ನು ಹೊರತುಪಡಿಸಿದರೆ, ಚಿಕ್ಕಪುಟ್ಟ ಪ್ರಕರಣಗಳಿಗೆ ಎಫ್‌ಐಆರ್ ಗೆ ಅವಕಾಶ ನೀಡದೆ.ರಾಜೀ ಸಂಧಾನ, ಶಾಂತಿ ಸಭೆಯ ಮೂಲಕ ದೂರು ಅರ್ಜಿಗಳ ವಿಲೇವಾರಿ ಮಾಡಲು ಸೂಚಿಸಿರುವೆ ಎಂದರು.

ಕ್ಷೇತ್ರದಲ್ಲಿ ಜಾತ್ಯತೀತ, ಧರ್ಮಾತೀತ, ಪಕ್ಷಾತೀತವಾಗಿ ಸಾಮರಸ್ಯ ಜೀವನಕ್ಕೆ ಅವಕಾಶ ಕಲ್ಪಿಸುವೆ ಎಂದು ಭರವಸೆ ನೀಡಿದರು.

ಸಾರ್ವಜನಿಕರು ಸಮಾಜದಲ್ಲಿ ಅಶಾಂತಿ ಕೃತ್ಯ, ಅಪರಾಧಗಳಿಂದ ದೂರವಿದ್ದು, ಮಹಾತ್ಮ ಗಾಂಧೀಜಿ  ಕಂಡ ರಾಮರಾಜ್ಯದ ಕನಸು ನನಸು ಮಾಡಬೇಕು. ಕ್ಷೇತ್ರದ ಅಭಿವೃದ್ಧಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ 25 ಕೋಟಿ ರೂ. ಅನು ದಾನ ಬಿಡುಗಡೆ ಮಾಡಿದ್ದು, ಅದರಲ್ಲಿ ಪೊಲೀಸ್ ಇಲಾಖೆಯ ಹಳೆಯ ವಸತಿ ಗೃಹಗಳನ್ನು ದುರಸ್ತಿ ಗೊಳಿಸುವೆ ಎಂದು ಶಾಸಕರು ಭರವಸೆ ನೀಡಿದರು.

ಪೊಲೀಸ್ ಎಂದರೆ ಭಯ ಅಲ್ಲ ಭರವಸೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಪೊಲೀಸ್ ಎಂದರೆ ಭಯ ಅಲ್ಲ ಭರವಸೆ ಅನ್ನೋದು ಸಾರ್ವಜನಿಕರು ಮನಗಂಡು ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಜನಸ್ನೇಹಿ ಪೊಲೀಸ್ ಆಗಲು ಸಾಧ್ಯ. ಇದಕ್ಕೆ ಜಗಳೂರು ಒಂದು ನಿದರ್ಶನವಾಗಿದೆ ಎಂದು ಪ್ರಶಂಸಿಸಿದರು.

ಇಂದು ವಿಶ್ವ ಹೆಣ್ಣುಮಕ್ಕಳ ದಿನಾಚರಣೆಯಾಗಿದ್ದು, ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳ  ಮಧ್ಯೆ  ತಾರತಮ್ಯ ತೊರೆದು ಸಮಾನ ಶಿಕ್ಷಣಕ್ಕೆ ಒತ್ತು ಕೊಡಿ. ಹೆಚ್ಚುತ್ತಿರುವ ಫೋಕ್ಸೋ ಪ್ರಕರಣಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳು ಕೊನೆ ಯಾಗಬೇಕು.ಮಹಿಳೆಯರನ್ನು ಗೌರವಿಸಬೇಕು. ಪೊಲೀಸ್ ಇಲಾಖೆಯ ಅಧಿಕಾರಿಗಳು ದೂರು ಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಲೋಕಸ್ಪಂದನಾ, ಇಆರ್‌ಎಸ್‌ಎಸ್ ಸಹಾಯವಾಣಿಗೆ ಕರೆ ಮಾಡಿ ಎಂದು ಸಲಹೆ ನೀಡಿದರು.

ಇದೇ ವೇಳೆ ಕಳುವಾಗಿದ್ದ ಮೊಬೈಲ್‌ಗಳನ್ನು  ವಾರಸುದಾರರಿಗೆ ಮರಳಿ ಒದಗಿಸಿದರು.

ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಮಂಜುನಾಥ್, ವಿಜಯಕುಮಾರ್, ಎಂ. ಸಂತೋಷ್‌, ಡಿವೈಎಸ್ಪಿ  ಬಸವರಾಜ್, ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ, ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ರಾವ್, ಪಿಎಸ್‌ಐ ಸಾಗರ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಬಿ‌.ಮಹೇಶ್ವರಪ್ಪ, ಸಿ.ಲಕ್ಷ್ಮಣ, ಅನೂಪ್ ರೆಡ್ಡಿ, ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ಷಂಷುದ್ದೀನ್ ಸೇರಿದಂತೆ, ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. 

error: Content is protected !!