ದಾವಣಗೆರೆ, ಜ. 24- 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಕಾರ್ಯಕ್ರಮವನ್ನು ಬರುವ ಮಾರ್ಚ್ 11ರಿಂದ 17ರವರೆಗೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗುರು ಸಾರ್ವಭೌಮ ಸಪ್ತಾಹ ಕಾರ್ಯಕ್ರಮ ಸಮಿತಿ ಸದಸ್ಯ ಸಿ.ಕೆ. ಆನಂದತೀರ್ಥಾಚಾರ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.11ರಂದು ಸಂಜೆ 5 ಗಂಟೆಗೆ ಸಮಾರಂಭದ ಉದ್ಘಾಟನೆ ನಡೆಯಲಿದ್ದು, ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಡಾ. ಶ್ರೀ ರಾಜಾ ಎಸ್.ಗಿರಿಯಾಚಾರ್ಯರು, ಆದ್ಯ ಕೇಶವಾಚಾರ್ಯರು, ಕೆ.ಅಪ್ಪಣ್ಣಾಚಾರ್ಯರು, ಡಾ.ಶ್ರೀ ಕೂರ್ಲಹಳ್ಳಿ ವೆಂಕಟೇಶಾಚಾರ್, ಡಾ.ಸದಾನಂದ ಶಾಸ್ತ್ರಿಗಳು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಾಮಾಜಿಕ ಧುರೀಣ ಅಸಗೋಡ ಜಯಸಿಂಹ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ., ಎಸ್ಪಿ ಉಮಾ ಪ್ರಶಾಂತ್, ಪಾಲಿಕೆ ಮೇಯರ್ ವಿನಾಯಕ ಬಿ.ಹೆಚ್ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಒಂದು ವಾರಗಳ ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ಬೆಳಿಗ್ಗೆ ಸುಪ್ರಭಾತ, ಪ್ರಾತಃ ಸ್ಮರಣೆ, ಗುರುರಾಯರಿಗೆ ಅಷ್ಟೋತ್ತರ ಸಹಿತ ಕ್ಷೀರಾಭಿಷೇಕ, ಪ್ರವಚನ, ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರದ ಸ್ವಾಹಾಕಾರ ಹೋಮ, ಪಾದಪೂಜೆ, ಕನಕಾಭಿಷೇಕ, ಲಕ್ಷ ಪುಷ್ಪಾರ್ಚನೆ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ ದೀಪೋತ್ಸವ, ಸ್ವಸ್ತಿ ವಾಚನ, ಮಹಾನೀರಾಜನ ಸೇರಿದಂತೆ ಹೋಮ, ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ. ದಿ.17ರ ಭಾನುವಾರ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್, ಸಹ ಕಾರ್ಯದರ್ಶಿ ಸತ್ಯಬೋಧ ಕುಲಕರ್ಣಿ, ಕೋಶಾಧ್ಯಕ್ಷ, ಡಾ.ಶಶಿಕಾಂತ್, ಖಜಾಂಚಿ ಬದರಿನಾರಾಯಣ, ಸದಸ್ಯರುಗಳಾದ ಪ್ರಕಾಶ್ ಪಿ.ಕೆ., ಶ್ರೀನಿವಾಸ ನರಗನಹಳ್ಳಿ, ಪಲ್ಲಕ್ಕಿ ವಾಸುದೇವಾಚಾರ್ ಉಪಸ್ಥಿತರಿದ್ದರು.