ಡಿಡಿಸಿಸಿ ಬ್ಯಾಂಕ್ : ಜೆಆರ್‌ಎಸ್, ವೇಣುಗೋಪಾಲ ರೆಡ್ಡಿ ಪುನರಾಯ್ಕೆ

ಡಿಡಿಸಿಸಿ ಬ್ಯಾಂಕ್ : ಜೆಆರ್‌ಎಸ್, ವೇಣುಗೋಪಾಲ ರೆಡ್ಡಿ ಪುನರಾಯ್ಕೆ

ದಾವಣಗೆರೆ,ಜ.19- ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಗೆ ಇದೇ ದಿನಾಂಕ 25ರಂದು ಚುನಾವಣೆ ನಡೆಯಲಿದ್ದು, ಒಟ್ಟು 13 ಸ್ಥಾನಗಳ ಪೈಕಿ ಸಹಕಾರಿ ಧುರೀಣ ಜೆ.ಆರ್. ಷಣ್ಮುಖಪ್ಪ ಮತ್ತು ಜೆ.ಎಸ್.ವೇಣುಗೋಪಾಲ ರೆಡ್ಡಿ ಇಬ್ಬರೂ ಅವಿರೋಧ ಆಯ್ಕೆಯಾಗಿದ್ದಾರೆ.

ಉಳಿದಂತೆ, 11 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಉಮೇದುವಾರಿಕೆ ಅರ್ಜಿ ಪರಿಶೀಲನೆ ಇಂದು ನಡೆದಿದ್ದು, ನಾಮಪತ್ರ ಸಲ್ಲಿಸಲ್ಪಟ್ಟ ಎಲ್ಲಾ 95 ಅರ್ಜಿಗಳೂ ಪುರಸ್ಕೃತಗೊಂಡಿವೆ. ನಾಳೆ ದಿನಾಂಕ 20ರ ಶನಿವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಹೊಂದಿರುವ `ಬಿ’ ವರ್ಗದ 1 ಸ್ಥಾನಕ್ಕೆ ಮೂವರು ಸಲ್ಲಿಸಿದ್ದ ನಾಮಪತ್ರಗಳ ಪೈಕಿ ದಾವಣಗೆರೆ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಶ್ರೀಮತಿ ರೇಖಾ ಜೆ.ಆರ್. ಷಣ್ಮುಖಪ್ಪ ಮತ್ತು ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣಾ – ಮಾರಾಟ ಸಹಕಾರ ಸಂಘದ ಬಿ.ಕೆ. ಶಿವಕುಮಾರ್ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಜೆ.ಆರ್. ಷಣ್ಮುಖಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊಂದಿರುವ `ಎ’ ವರ್ಗದ ಜಗಳೂರು ತಾಲ್ಲೂಕಿನಿಂದ 1 ಸ್ಥಾನಕ್ಕೆ ಸಲ್ಲಿಸಿದ ಉಮೇದುವಾರಿಕೆ ಅರ್ಜಿಗಳ ಪೈಕಿ ಒಬ್ಬರು ತಮ್ಮ ನಾಮಪತ್ರ ವಾಪಸ್ ಪಡೆದ ಕಾರಣ, ಸಿದ್ದಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜೆ.ಎಸ್.ವೇಣುಗೋಪಾಲ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜೆ.ಎಸ್.ವೇಣುಗೋಪಾಲ ರೆಡ್ಡಿ ಮತ್ತು ಜೆ.ಆರ್. ಷಣ್ಮುಖಪ್ಪ ಇಬ್ಬರೂ ಮತ್ತೊಂದು ಅವಧಿಗೆ ಪುನರಾಯ್ಕೆಯಾಗಿದ್ದಾರೆ.

error: Content is protected !!