ಸಮಸ್ಯೆ ಆಲಿಸಲು ಜನರ ಮನೆ ಬಾಗಿಲಿಗೆ ಸೈಕಲ್‌ನಲ್ಲಿ ಹೋದ ಡಿಸಿ

ಸಮಸ್ಯೆ ಆಲಿಸಲು ಜನರ ಮನೆ ಬಾಗಿಲಿಗೆ ಸೈಕಲ್‌ನಲ್ಲಿ ಹೋದ ಡಿಸಿ

ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ನಡೆಗೆ ನಾಗರಿಕರ ಮೆಚ್ಚುಗೆ

ಕೊಟ್ಟೂರು, ಜ. 16 – ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಂದ ಕುಂದು ಕೊರತೆಗಳ ಅರ್ಜಿ ಸ್ವೀಕರಿಸಲೆಂದು ಇಂದು ಬೆಳಿಗ್ಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಪಟ್ಟಣಕ್ಕೆ ಆಗಮಿಸಿ, ಇಲ್ಲಿನ ಗಾಂಧಿ ವೃತ್ತ ದಿಂದ ಸೈಕಲ್ ಸಂಚಾರ ಕೈಗೊಂಡು ಪಟ್ಟಣದೆಲ್ಲೆಡೆ ವೀಕ್ಷಣೆ ನಡೆಸಿದ್ದು ನಾಗರಿಕರ ಮೆಚ್ಚುಗೆಗೆ ಪಾತ್ರವಾಯಿತು.

ಗಾಂಧಿ ವೃತ್ತದಿಂದ ತಾಲ್ಲೂಕು ಆಡಳಿತದ ಅಧಿಕಾರಿಗಳೊಂದಿಗೆ ಸೈಕಲ್ ಸಂಚಾರ ಕೈಗೊಂಡ ಜಿಲ್ಲಾಧಿಕಾರಿಗಳ ಯಾತ್ರೆ ಕೊಟ್ಟೂರೇಶ್ವರ ದೇವಸ್ಥಾನದ ರಸ್ತೆ ಗಚ್ಚಿನ ಮಠ, ಊರಮ್ಮ ಗುಡಿ ಪ್ರದೇಶ, ತೇರು ಬಯಲು, ಬಳ್ಳಾರಿ ಕ್ಯಾಂಪ್, ಬಸ್‌ನಿಲ್ದಾಣ, ಬಾಲಾಜಿ ಕಲ್ಯಾಣ ಮಂಟಪ ರಸ್ತೆ ಮೂಲಕ ಸಾಗಿ ಸಮುದಾಯ ಆರೋಗ್ಯ ಕೇಂದ್ರ, ಎಪಿಎಂಸಿ ಪ್ರದೇಶಗಳನ್ನು ಸಂಚರಿಸಿದರು.

ಜಿಲ್ಲಾಧಿಕಾರಿಗಳು ತಮ್ಮ ಮನೆ ಬಾಗಿಲ ಬಳಿ ಸೈಕಲ್ ಮೂಲಕ ಬರುತ್ತಿದ್ದಂತೆ ಮನೆಯ ಹೆಣ್ಣುಮಕ್ಕಳು ಮತ್ತು ಇತರರು ಕುಡಿಯುವ ನೀರು ಸರಿಯಾಗಿ ಪೂರೈಕೆ ಯಾಗುತ್ತಿಲ್ಲ ಎಂದು ದೂರಿದರಲ್ಲದೇ, ಮನೆಗಳ ಮುಂದೆ ಇರುವ ಚರಂಡಿ ನೀರು ಹರಿಯದಂತೆ ಕಸ ಕಡ್ಡಿ ಗಳಿಂದ ತುಂಬಿಹೋಗಿವೆ, ಇದರ ಪರಿಣಾಮ ಸೊಳ್ಳೆ ಗಳ ಆರ್ಭಟದಿಂದ ನಿದ್ದೆಯಿಲ್ಲದೆ ರಾತ್ರಿ ಇಡೀ ಜಾಗ ರಣೆ ಮಾಡುವಂತಾಗಿದೆ ಎಂದು ಅಲವತ್ತು ಕೊಂಡರು.

ಸ್ಥಳದಲ್ಲಿಯೇ ಇದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ ಅವರಿಗೆ ಕೂಡಲೇ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು. ನೀರನ್ನು ಸಮರ್ಪಕವಾಗಿ ಪೂರೈಸಲು ಮುಂದಾಗಿ ಎಂದು ತಾಕೀತು ಮಾಡಿದರು. ಬಸ್ ನಿಲ್ದಾಣದ ಶೌಚಾಲಯವನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಬಸ್‌ ನಿಲ್ದಾಣದಲ್ಲಿಯೇ ಇದ್ದ ಕಸದ ರಾಶಿಯನ್ನು ತೆಗೆಯದೇ ಅಸ್ವಚ್ಛತೆ ವಾತಾವರಣ ನಿರ್ಮಾಣವಾಗಿರುವುದಕ್ಕೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡರು.

ಬೀದಿ ಬದಿಯ ಹೋಟೆಲ್‌ಗಳತ್ತ ಜಿಲ್ಲಾಧಿಕಾರಿ ಗಳು ಸಾಗಿ ಮಿರ್ಚಿಯನ್ನು ಸವಿದು ರುಚಿ ಅನುಭವಿಸಿ ದರಲ್ಲದೆ, ಸರಿಯಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಂದು ಎಚ್ಚರಿಸಿದರು. ಬಸ್‌ ನಿಲ್ದಾಣ ಸಮುದಾಯ ಆರೋಗ್ಯ ಕೇಂದ್ರ ಎಪಿಎಂಸಿಗಳಲ್ಲಿ ಉತ್ತಮ ಸಾರ್ವಜನಿಕ ಕಾರ್ಯನಿರ್ವಹಣೆಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಪಟ್ಟಣ ಪಂಚಾಯಿತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಮಂಗಳವಾರದಂದು ಆಯೋಜಿಸಲಾಗಿತ್ತು. ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮರಾಜ ನಾಯ್ಕ ಮತ್ತು ಅಧಿಕಾರಿಗಳೊಂದಿಗೆ ತಾಲ್ಲೂಕಿನ ಸಾರ್ವಜನಿಕರಿಗೆ ಸಂಬಂಧಪಟ್ಟಂತೆ ಅಹವಾಲುಗಳನ್ನು ಆಯಾಯ ಕಚೇರಿ ಅಧಿಕಾರಿಗಳಿಗೆ ತಾಕೀತು ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಸೈಕಲ್ ಸವಾರಿಯಲ್ಲಿ ತಹಶೀಲ್ದಾರ್ ಅಮರೇಶ್ ಜಿ.ಕೆ., ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿಕುಮಾರ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ, ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟಸ್ವಾಮಿ, ಸಬ್‌ಇನ್‌ಸ್ಪೆಕ್ಟರ್ ಗೀತಾಂಜಲಿ ಶಿಂಧೆ ಪಾಲ್ಗೊಂಡಿದ್ದರು.

error: Content is protected !!