ಯಶ್ ಕಟೌಟ್ ಹಾಕುವ ವೇಳೆ ವಿದ್ಯುತ್ ತಗುಲಿ ಮೂವರ ಸಾವು

ಯಶ್ ಕಟೌಟ್ ಹಾಕುವ ವೇಳೆ ವಿದ್ಯುತ್ ತಗುಲಿ ಮೂವರ ಸಾವು

ಗದಗ, ಜ. 8 – ಚಿತ್ರನಟ ಯಶ್ ಹುಟ್ಟುಹಬ್ಬದ ಅಂಗವಾಗಿ ಲೋಹದ ಕಟೌಟ್ ಹಾಕುವಾಗ ವಿದ್ಯುತ್ ವೈರ್ ತಗುಲಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಮೃತರನ್ನು ಸೂರಣಗಿ ಗ್ರಾಮದ ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂದು ಗುರುತಿಸಲಾಗಿದೆ. ಇತರೆ ಮೂವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಸಾವಿಗೀಡಾದ ಮೂವರ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ.

ಮೃತ ಯುವಕರ ಕುಟುಂಬದವರು ಬಡವರಾಗಿದ್ದು ಕೂಲಿ ಮಾಡಿಕೊಂಡು ಜೀವನ ನಡೆಸುವವರಾಗಿದ್ದಾರೆ. ಅವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿದ ಯಶ್, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬದ ದಿನ ಕಟೌಟ್ ಕಟ್ಟುವಾಗ ಮೂವರು ಅಭಿಮಾನಿಗಳು ನಿಧನರಾದ ಘಟನೆ ತೀವ್ರ ನೋವುಂಟು ಮಾಡಿದೆ. ಇನ್ನು ಮುಂದೆ ಈ ರೀತಿ ಕಟೌಟ್‌ಗಳನ್ನು ಹಾಕಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮೃತರ ಕುಟುಂಬದವರಿಗೆ ಅಗತ್ಯವಿರುವ ನೆರವು ನೀಡುವುದಾಗಿಯೂ ಯಶ್ ಇದೇ ವೇಳೆ ತಿಳಿಸಿದ್ದಾರೆ. ನಂತರ ಆಸ್ಪತ್ರೆಗೆ ತೆರಳಿ ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿದರು.

ಮತ್ತೊಂದು ಅವಘಡ : ಗಾಯಗೊಂಡವರ ಆರೋಗ್ಯ ವಿಚಾರಿಸಲು ಯಶ್ ತೆರಳುವ ವೇಳೆ ಮತ್ತೊಂದು ಅಪಘಾತ ಸಂಭವಿಸಿ, ಇನ್ನೋರ್ವ ಅಭಿಮಾನಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ನಿಖಿಲಗೌಡ ಭೀಮನಗೌಡ್ರ ಎಂಬ 22 ವರ್ಷದ ವ್ಯಕ್ತಿ ಯಶ್ ನೋಡಲು ಸ್ಕೂಟರ್‌ನಲ್ಲಿ ವೇಗವಾಗಿ ತೆರಳುತ್ತಿದ್ದರು. ಆಗ ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

error: Content is protected !!