ಅರಸೀಕೆರೆಯಲ್ಲಿ ಇಂದಿನಿಂದ ದಂಡಿ ದುರುಗಮ್ಮನ ಜಾತ್ರಾ ಮಹೋತ್ಸವ

ಅರಸೀಕೆರೆಯಲ್ಲಿ ಇಂದಿನಿಂದ ದಂಡಿ ದುರುಗಮ್ಮನ ಜಾತ್ರಾ ಮಹೋತ್ಸವ

ಪ್ರಾಣಿ ಬಲಿ ಕೊಟ್ಟರೆ ಕಾನೂನು ಕ್ರಮ : ನಾಗರಾಜ್ ಎಚ್ಚರಿಕೆ

ಹರಪನಹಳ್ಳಿ, ಜ.4-  ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ನಾಳೆ ದಿನಾಂಕ 5ರ ಶುಕ್ರವಾರದಿಂದ  ಮೂರು ದಿನಗಳ ಕಾಲ ಜರುಗುವ ದಂಡಿ ದುರುಗಮ್ಮನ ಜಾತ್ರೆಯಲ್ಲಿ ಪ್ರಾಣಿ ಬಲಿ ಸಂಪೂರ್ಣ ನಿಷೇಧಿಸಲಾಗಿದೆ, ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲ್ಲಿಯ ಪೊಲೀಸ್‌ ವೃತ್ತ ನಿರೀಕ್ಷಕ ನಾಗರಾಜ ಎಂ.ಕಮ್ಮಾರ ತಿಳಿಸಿದ್ದಾರೆ.

ಅವರು ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಪೊಲೀಸ್‌ ಇಲಾಖೆ ಹಾಗೂ ಗ್ರಾ.ಪಂ ಸಹಯೋಗದಲ್ಲಿ ನಡೆದ ಶಾಂತಿ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಪಂಚಾಯ್ತಿ ವತಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ಜನದಟ್ಟಣೆಯಾಗಿರುವ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಶೆಡ್‌ಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಅಗತ್ಯ ತುರ್ತು ಸೇವೆಗೆ 112 ಕ್ಕೆ ಕರೆ ಮಾಡಿ ಎಂದು ತಿಳಿಸಿದ ಅವರು, ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗುವುದು, ಈ ವರ್ಷ ಬರಗಾಲ ಹಾಗೂ ಕೋವಿಡ್‌ ಇರುವುದರಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಅವರು ತಿಳಿಸಿದರು.

ಅಭಿವೃದ್ದಿ ಅಧಿಕಾರಿ ಅಂಜಿನಪ್ಪ ಮಾತನಾಡಿ ಜಾತ್ರೆಗೆ ಬರುವ ಭಕ್ತರಿಗೆ ಗ್ರಾಮ ಪಂಚಾಯ್ತಿ ವತಿಯಿಂದ   ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗುವುದು. ಆರೋಗ್ಯ ಇಲಾಖೆಯಿಂದ ರಕ್ತದಾನ ಶಿಬಿರ ನಡೆಸಲಾಗುವುದು ಎಂದರು.

ವಕೀಲ ಡಾ.ಸುರೇಶ ಮಾತನಾಡಿ, ಜಾತ್ರೆಗೆ ಬರುವ ಭಕ್ತರಿಗೆ ಬಸ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಶೌಚಾಲಯ ವ್ಯವಸ್ಥೆ ಮಾಡಿಸಿ ಎಂದು ತಿಳಿಸಿದರು.

ಜಾತ್ರಾ ಕಮಿಟಿ ಸದಸ್ಯ ಪೂಜಾರ ಮರಿಯಪ್ಪ ಮಾತನಾಡಿ, ಪ್ರತಿ ವರ್ಷದಂತೆ ಮೂರು ದಿನಗಳ ಕಾಲ ಶಾಂತಿಯುತವಾಗಿ ಜಾತ್ರೆ ನಡೆಸಲಾಗುವುದು ಎಂದು ಹೇಳಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುವುದು, ದೇವಸ್ಥಾನದ ಸುತ್ತ-ಮುತ್ತ ಸಿಸಿ ಕ್ಯಾಮರಾ ಅಳವಡಿಕೆ ಸೂಕ್ತ ಎಂದು  ಪಿಎಸ್‌ಐ ರಂಗಯ್ಯ  ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಇನಾಯತ್‌ ಉಲ್ಲಾ, ಎಎಸ್‌ಐ ಜಾತಪ್ಪ, ಸಿಬ್ಬಂದಿ ಕೂಲಹಳ್ಳಿ ಕೊಟ್ರೇಶ, ಮಂಜುನಾಥ, ಗ್ರಾ.ಪಂ ಸದಸ್ಯರಾದ ಅಡ್ಡಿ ಚೆನ್ನವೀರಪ್ಪ, ಅದಾಮ್‌ ಸಾಬ್, ಐ.ಸಲಾಂ ಸಾಬ್‌, ಹಾಲೇಶ, ವೆಂಕಟೇಶ, ಕೆ.ಡಿ.ಅಂಜಿನಪ್ಪ, ಲಕ್ಷ್ಮಣ, ಷಣ್ಮುಖಪ್ಪ, ನವೀನ, ಕಾರ್ಯದರ್ಶಿ ನಾಗರಾಜ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!