ಬೀಸುತ್ತಿರುವ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಬಿರುಗಾಳಿಯಿಂದ ದೇಶ ರಕ್ಷಣೆ ಅಗತ್ಯ

ಬೀಸುತ್ತಿರುವ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಬಿರುಗಾಳಿಯಿಂದ ದೇಶ ರಕ್ಷಣೆ ಅಗತ್ಯ

ಹರಿಹರ, ಡಿ.25- ಬೀಸುತ್ತಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಬಿರುಗಾಳಿಯಿಂದ ದೇಶವನ್ನು ರಕ್ಷಿಸುವ ಅಗತ್ಯ ಈಗ ಎದುರಾಗಿದೆ ಎಂದು ಬೆಂಗಳೂರಿನ ಕವಿ, ಸಂಶೋಧಕ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದರು.

ಇಲ್ಲಿನ ಪರಸ್ಪರ ಬಳಗ, ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಬಂಡಾಯ ಸಾಹಿತ್ಯ ಸಂಘಟನೆ, ಚಿಂತನ ಬಳಗ, ನಕ್ಷತ್ರ ಟಿವಿ ಬಳಗ, ಸಾಹಿತ್ಯ ಸಂಗಮ ಮತ್ತು ಕರ್ನಾಟಕ ಜಾನಪದ ಪರಿಷತ್‌ನಿಂದ ಭಾನುವಾರ ನಗರದ ರಚನಾ ಕ್ರೀಡಾ ಟ್ರಸ್ಟ್‍ನಲ್ಲಿ ಆಯೋಜಿಸಿದ್ದ ಕರ್ನಾಟಕ, ಕನ್ನಡ, ಸಂವಿಧಾನ ಕುರಿತು ಚಿಂತನೆ, ಕನ್ನಡ ನಾಡು, ನುಡಿ ಕುರಿತು ಕವಿಗೋಷ್ಠಿ ಹಾಗೂ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತು ಗೀತ ಗಾಯನ ಕರ್ನಾಟಕ ಸುವರ್ಣ ಸಂಭ್ರಮದಲ್ಲಿ ಭಾರತೀಯ ಸಂವಿಧಾನದ ಅಂತರಂಗ ಮತ್ತು ಬಹಿರಂಗ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು. 

ಹಿಜಾಬ್ ವಿವಾದ, ಅಸ್ಪೃಶ್ಯತೆ, ದಬ್ಬಾಳಿಕೆ, ಶೋಷಣೆ, ಸಾಮಾಜಿಕ ಅಸಮಾನತೆ, ಸಿಗದ ಸಮಾನ ಅವಕಾಶ, ಶೇ. 4ರಷ್ಟು ಇರುವ ಜನಾಂಗದವರಿಗೆ ಶೇ.10 ರಷ್ಟು ಮೀಸಲಾತಿಯನ್ನು ಯಾರೂ ಕೇಳದಿದ್ದರೂ ನೀಡಿರುವುದು,  ಜಾರಿಯಾಗದ ಜಸ್ಟಿಸ್ ಸಾಚಾರ್ ಆಯೋಗದ ವರದಿ, ದುರುದ್ಧೇಶ ಪೂರಿತ ಜಾತಿ ಸಮೀಕ್ಷೆಗಳು, ಹಿಂದಿ ಭಾಷೆ ಹೇರಿಕೆ ಹೀಗೆ ವಿವಿಧ ಆಯಾಮಗಳಿಂದ ಬಿರುಗಾಳಿಯಂತೆ ದೇಶವನ್ನು ನಲುಗಿಸಲಾಗುತ್ತಿದೆ.

ಅಂಬೇಡ್ಕರ್‍ರವರು ನೀಡಿದ ಮೂರು ಮಂತ್ರಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಬಿರುಗಾಳಿಯನ್ನು ತಡೆಯಬೇಕಿದೆ. ಇಲ್ಲಿ ಶಿಕ್ಷಣ ಎಂದರೆ ಅಕ್ಷರ ಅಭ್ಯಾಸ ಮಾತ್ರ ಅಲ್ಲ, ಸಾಂಸ್ಕೃತಿಕ ಮತ್ತು ವೈಚಾರಿಕವಾಗಿಯೂ ಶಿಕ್ಷಣ ನೀಡಬೇಕು. ಆ ಮೂಲಕ ಭಾರತೀಯರು ಪ್ರಬುದ್ಧ ಶಿಕ್ಷಣವಂತರಾಗಬೇಕು. ಸಾಮಾಜಿಕವಾಗಿ ಎಲ್ಲರೂ ಪ್ರಜಾಸತ್ತಾತ್ಮಕವಾಗಿ ಸಂಘಟಿತರಾಗಬೇಕು, ಪಾಲ್ಗೊಳ್ಳಬೇಕು, ಸಂಘಟಿತವಾಗಿ ತೀವ್ರತೆಯೊಂದಿಗೆ ಹೋರಾಡಿ, ಆದರೆ ಆ ಹೋರಾಟ ಸಂವಿಧಾನಾತ್ಮಕವಾಗಿರಲಿ ಎಂದರು.

ಮಹಿಳೆ ಒಬ್ಬಳೇ ರಾತ್ರಿ ನಿರ್ಭಯವಾಗಿ ಸಂಚರಿಸಿದಾಗ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸಿದಂತೆ ಎಂದಿದ್ದ ಅಂಬೇಡ್ಕರ್‍ರವರು ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು, ಮತದಾನ, ಚುನಾವಣೆಗೆ ಸ್ಪರ್ಧಿಸುವ, ಶಿಕ್ಷಣ ಪಡೆಯುವ, ಉದ್ಯೋಗ ಮಾಡುವ, ವೇತನ ಸಹಿತ ಹೆರಿಗೆ ರಜೆ, ದಲಿತರಿಗೆ, ಶೋಷಿತರಿಗೆ ಮೀಸಲಾತಿಯ ಸೌಲಭ್ಯಗಳನ್ನು ಸಂವಿಧಾನದ ಮೂಲಕ ನೀಡಿದ್ದಾರೆಂದರು.

ರಾಷ್ಟ್ರ ಧ್ವಜ ತಿರಂಗ ಅಲ್ಲ, ಅದು ಚೌರಂಗ, ಕೇಸರಿ, ಬಿಳಿ, ಹಸಿರಿನ ಜೊತೆಗೆ ಸಮಾನತೆಯನ್ನು ಸಾರುವ ನೀಲಿ ಬಣ್ಣದ ಅಶೋಕನ ಚಕ್ರವನ್ನು ಉದ್ದೇಶ ಪೂರ್ವಕವಾಗಿ ಮರೆಮಾಚಲಾಗುತ್ತಿದೆ. ತಿರಂಗದ ಬದಲು ರಾಷ್ಟ್ರ ಧ್ವಜವನ್ನು ಚೌರಂಗ ಎಂದು ಗುರುತಿಸಬೇಕಿದೆ ಎಂದರು.

ಬೀರೂರು-ಸಮ್ಮಸಗಿ ಹೆದ್ದಾರಿ ಕಾಮಗಾರಿ ನಡೆಯಲು ನಿರಂತರ ಧರಣಿ ನಡೆಸಿದ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಎಸ್.ಗೋವಿಂದ ಅವರನ್ನು ಸತ್ಕರಿಸಿದ ನಂತರ ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಮಾತನಾಡಿ, ಯಾವುದೇ ಜಾತಿ, ಪಕ್ಷ, ಆರ್ಥಿಕ ಬಲ ಇಲ್ಲದೆ, ಆಟೋ ಚಾಲಕನಾದ ಎಸ್.ಗೋವಿಂದ ಸಾರ್ವಜನಿಕ ವಿಷಯಕ್ಕಾಗಿ ಸತತ 25 ದಿನ ಧರಣಿ ಸತ್ಯಾಗ್ರಹ ನಡೆಸಿರುವುದು ಬೇರೆ ಹೋರಾಟಗಾರರಿಗೂ ಪ್ರೇರಣಾದಾಯಕ ಎಂದರು.   

ಸಾಹಿತಿ, ನಿವೃತ್ತ ಪ್ರಾಚಾರ್ಯ ಪ್ರೊ.ಎಚ್.ಎ.ಭಿಕ್ಷಾವರ್ತಿಮಠ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ನಿವೃತ್ತ ಕನ್ನಡ ಭಾಷಾ ಉಪನ್ಯಾಸಕ ಪ್ರೊ.ಸಿ.ವಿ.ಪಾಟೀಲ್ ವಿಷಯ ಪ್ರವೇಶ ಮಾಡಿದರು. ನಿವೃತ್ತ ಪೊಲೀಸ್ ವರಿಷ್ಠಾ ಧಿಕಾರಿ ಎನ್.ರುದ್ರಮುನಿ, ಹಿರಿಯ ಕ್ರೀಡಾಪಟು ಎಚ್.ನಿಜಗುಣ, ಪತ್ರಕರ್ತ ಟಿ.ಇನಾಯತ್ ಉಲ್ಲಾ, ಹರಪನಹಳ್ಳಿ ಪ್ರಾಚಾರ್ಯ ಎಚ್.ಮಲ್ಲಿಕಾರ್ಜುನ, ಎ.ರಿಯಾಜ್ ಅಹ್ಮದ್, ಎಚ್.ನಿಜಗುಣ, ಬಿ.ಬಿ.ರೇವಣನಾಯ್ಕ್, ವಿ.ಬಿ.ಕೊಟ್ರೇಶ್, ಈಶಪ್ಪ ಬೂದಿಹಾಳ್ ಮಾತನಾಡಿದರು.

ಬಂಡಾಯ ಕವಿ ಜೆ.ಕಲೀಂಬಾಷಾ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಕವಿಗಳಾದ ಎಸ್.ಎಚ್.ಹೂಗಾರ್, ಹುಲಿಕಟ್ಟಿ ಚನ್ನಬಸಪ್ಪ, ಸುಬ್ರಹ್ಮಣ್ಯ ನಾಡಿಗೇರ್, ಜೆ.ವಸುಪಾಲಪ್ಪ, ಮಲ್ಲಿಕಾರ್ಜುನ ಅಣಜಿಮಠ, ಡಾ.ವೀಣಾ ಪಿ., ರತ್ನವ್ವ ಸಾಲಿಮಠ, ಎ.ಬಿ.ಮಂಜಮ್ಮ, ವಿವೇಕಾನಂದಸ್ವಾಮಿ, ಬಿ.ಮಗ್ದುಂ, ಅಶ್ಫಾಖ್ ಅಹ್ಮದ್, ವಿ.ಬಿ.ಕೊಟ್ರೇಶ್, ಗಂಗಾಧರ ಬಿ.ಎಲ್. ನಿಟ್ಟೂರು, ಎ.ಸಿ.ಮಂಜಪ್ಪ, ಪ್ರವೀಣ ಎಂ.ಬಿ. ಕವನ ವಾಚನ ಮಾಡಿದರು.

error: Content is protected !!