ದಾವಣಗೆರೆ, ಡಿ.9- ನಗರದ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ವಿವಿಧ ಕಾರಣಗಳಿಂದಾಗಿ ಬೇರ್ಪಟ್ಟಿದ್ದ 8 ಜೋಡಿಗಳು ಮತ್ತೆ ಒಂದಾಗಿ, ಹೊಸ ಜೀವನ ಆರಂಭಿಸಲು ನಿರ್ಧರಿಸಿವೆ.
ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾದ ಪಿ. ದಶರಥ್ ಅವರ ನೇತೃತ್ವದಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು, ಸಂಧಾನಕಾರರು ಹಾಗೂ ವಕೀಲರ ಸಹಕಾರದಿಂದಾಗಿ ಎಂಟು ಜೋಡಿಗಳನ್ನು ಒಂದು ಮಾಡಲು ಸಾಧ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಕಮ್ಮತ್ತಹಳ್ಳಿಯ ಶೀಲಾ ಅವರೊಂದಿಗೆ ಮದುವೆಯಾಗಿ ಹದಿನಾಲ್ಕು ವರ್ಷಗಳಾಗಿತ್ತು. ಕೆಲ ಕಾರಣಗಳಿಂದಾಗಿ ವೈಮನಸ್ಸು ಉಂಟಾಗಿ ಕಳೆದ 2 ವರ್ಷಗಳಿಂದ ಬೇರೆಯಾಗಿ ದ್ದೆವು. ಇದೀಗ ನ್ಯಾಯಾ ಧೀಶರು, ಸಂಧಾನಕಾರರು ಹಾಗೂ ವಕೀಲರ ಸಲಹೆ, ಸೂಚನೆ ಮೇರೆಗೆ ಮತ್ತೆ ಒಂದಾಗಲು ನಿರ್ಧರಿಸಿದ್ದೇವೆ.
– ಗೋಪನಾಳು ಪರಮೇಶ್ವರಪ್ಪ
4233 ಜಾರಿ ಪ್ರಕರಣ ಇತ್ಯರ್ಥ
ದಾವಣಗೆರೆ, ಡಿ.9- ಜಿಲ್ಲೆಯಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 4,233 ಜಾರಿಯಲ್ಲಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಿ 11,55,32,921 ರೂ. ಪರಿಹಾರ ಕೊಡಿಸಲಾಗಿದೆ. ಹಾಗೂ 1,41,826 ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥಗಳಿಸಿ 55,69,280 ರೂ. ಪರಿಹಾರ ಕೊಡಿಸಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಪ್ರಕರಣಗಳ ರಾಜೀ ಮಾಡಿಸಲು ವಕೀಲರಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹವೀರ ಮ.ಕರಣ್ಣವರ, ಈ ಬಗ್ಗೆ ನೀಡಲಾಗಿರುವ ಪ್ರಶಂಸನಾ ಪತ್ರವನ್ನು ಸಂಘಕ್ಕೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಕೆಪಿಟಿಸಿಎಲ್ ಇಲಾಖೆಯಿಂದ ವಿದ್ಯುತ್ ಲೈನ್ ಸಂಪರ್ಕ ಕಲ್ಪಿಸುವಾಗ ರೈತರ ಜಮೀನಿಗೆ ಆದ ನಷ್ಟಕ್ಕೆ ಪರಿಹಾರ ಕಲ್ಪಿಸುವ ಕುರಿತು ಆದ ರಾಜೀ ಸಂಧಾನದಲ್ಲಿ 52 ಪ್ರಕರಣಗಳು ಇತ್ಯರ್ಥವಾಗಿದ್ದು, 16 ಲಕ್ಷ ರೂ. ಪರಿಹಾರ ಕೊಡಿಸಲಾಗಿದೆ. ಇದು ಈ ಬಾರಿಯ ಲೋಕ ಅದಾಲತ್ನ ವಿಶೇಷತೆಗಳಲ್ಲೊಂದಾಗಿದೆ ಎಂದು ಹೇಳಿದರು.
ದಾವಣಗೆರೆ ಎಸ್.ಎಸ್. ಬಡಾವಣೆಯಲ್ಲಿ ಜಮೀನು ವಶಪಡಿಸಿಕೊಂಡು ನಿವೇಶನ ನಿರ್ಮಿಸಿದ ಪ್ರಕರಣವೊಂದು 1985ರಿಂದ ಇಲ್ಲಿಯವರೆಗೆ ಬಗೆಹರಿಯದೇ ಜಾರಿ ಪ್ರಕರಣವಾಗಿತ್ತು. ಅದನ್ನು ಈ ಬಾರಿಯ ಲೋಕ ಅದಾಲತ್ನಲ್ಲಿ ಸಂಧಾನದ ಮೂಲಕ ಬಗೆಹರಿಸಲಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆಗೆ ಸಂಬಂಧಿಸಿದ ಆಸ್ತಿ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ನೀರಿನ ಕಂದಾಯ, ಬಿಎಸ್ಎನ್ಎಲ್ ಶುಲ್ಕ ಪಾವತಿ ಸೇರಿದಂತೆ ಹಲವಾರು ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದರು. ಜನರಿಗೆ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಒಲವು ಮೂಡಿದೆ ಎಂದು ಹೇಳಿದರು.
ನಾನೇ ಮೇಲು ಎಂಬ ಅಹಂ, ಹುಡುಗನ ಮನೆಯಲ್ಲಿ ತಂದೆ-ತಾಯಿಗಳು ಕಿರುಕುಳ ನೀಡುವುದು ಸೇರಿದಂತೆ ಚಿಕ್ಕ ಪುಟ್ಟ ವಿರಸಗಳಿಂದಾಗಿ ಈ ಜೋಡಿಗಳು ವಿಚ್ಛೇದನಕ್ಕೆ ನಿರ್ಧರಿಸಿದ್ದರು. ಕಳೆದ ಎರಡು ತಿಂಗಳಿನಿಂದ ರಾಜೀ ಸಂಧಾನ ಪ್ರಕ್ರಿಯೆ ನಡೆಯುತ್ತಿತ್ತು. ಬೇರ್ಪಡಿಸಲು ನಿರ್ಧರಿಸಿದ್ದ 8 ಜೋಡಿಗಳು ಇಂದು ಮತ್ತೆ ಒಂದಾಗಿದ್ದಾರೆ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ, ನ್ಯಾಯಾಧೀಶರುಗಳಾದ ಜೆ. ವಿ. ವಿಜಯಾನಂದ, ಪ್ರವೀಣ್ಕುಮಾರ್ ಆರ್.ಎನ್., ಎನ್. ಶ್ರೀಪಾದ್, ಬಿ.ದಶರಥ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ಕಾರ್ಯದರ್ಶಿ ಎಸ್.ಬಸವರಾಜ್, ಜಿ.ಕೆ. ಬಸವರಾಜು, ಎ.ಎಸ್. ಮಂಜುನಾಥ, ಸಂಧಾನಕಾರರಾದ ಭಾಗ್ಯಲಕ್ಷ್ಮಿ, ವಾಣಿ, ವಕೀಲರುಗಳಾದ ಮಹೇಶ್ ನಾಯ್ಕ, ಮಂಜಪ್ಪ ಹಲಗೇರಿ, ಕಾಕನೂರು ಮಂಜಪ್ಪ ಹಾಗೂ ಇತರರು ಲೋಕ ಅದಾಲತ್ನಲ್ಲಿ ಭಾಗವಹಿಸಿದ್ದರು.