ದೇಶದ ಆರ್ಥಿಕ ಉತ್ಪಾದನೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ಮಹತ್ವದ್ದು

ದೇಶದ ಆರ್ಥಿಕ ಉತ್ಪಾದನೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ಮಹತ್ವದ್ದು

ಹರಿಹರ ತಾಲ್ಲೂಕು ಎಳೆಹೊಳೆ ಗ್ರಾಮದಲ್ಲಿನ ಭಾರತ ನಮ್ಮ ಸಂಕಲ್ಪ ಯಾತ್ರೆ ಉದ್ಘಾಟನೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ

ಹರಿಹರ, ಡಿ. 10- ದೇಶದ ಆರ್ಥಿಕತೆಯಲ್ಲಿ ಅದರಲ್ಲೂ ಗ್ರಾಮೀಣ ಆರ್ಥಿಕತೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಪ್ರಮುಖ ಪಾತ್ರ ವಹಿಸು ತ್ತಿವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಹರಿಹರ ತಾಲ್ಲೂಕು ಎಳೆಹೊಳೆ ಗ್ರಾಮದಲ್ಲಿ ನಿನ್ನೆ ಏರ್ಪಾಡಾಗಿದ್ದ ಭಾರತ ನಮ್ಮ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು. 

2022-23 ರ  ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆ ವರದಿಯ ಪ್ರಕಾರ ದೇಶದಲ್ಲಿ ಸುಮಾರು 1.20 ಕೋಟಿಗೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿವೆ.  ಈ ಸ್ವಸಹಾಯ ಸಂಘಗಳನ್ನು  ಸಬಲೀಕರಣ ಮಾಡುವುದರೊಂದಿಗೆ ಕೃಷಿ ವಲಯಕ್ಕೂ ತಂತ್ರಜ್ಞಾನದ ಪ್ರಯೋಜನ ಒದಗಿಸಲು ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದೆ ಎಂದರು.  

ಮಹಿಳಾ ಸ್ವಸಹಾಯ ಗುಂಪುಗಳಿಗೆ 1,261 ಕೋಟಿ ರೂ. ವೆಚ್ಚದಲ್ಲಿ ಡ್ರೋನ್‍ಗಳನ್ನು ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನ್ಯಾನೋ ರಸಗೊಬ್ಬರ, ಕೀಟನಾಶಕಗಳ ಸಿಂಪಡಣೆ ಸೇರಿ ಕೃಷಿಯ ವಿವಿಧ ಉದ್ದೇಶಗಳಿಗಾಗಿ ರೈತರಿಗೆ ಬಾಡಿಗೆ ಒದಗಿಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಡ್ರೋನ್ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣ ಮತ್ತು ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಬಳಕೆಯೇ ಈ ಯೋಜನೆಯ ಉದ್ದೇಶವಾಗಿದೆ. ಡ್ರೋನ್ ಖರೀದಿಗೆ ಶೇಕಡ 80 ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದರು. ಈ ರೀತಿಯಾಗಿ ಮಹಿಳಾ ಸಂಘಗಳ ಸಬಲೀಕರಣ ಹಾಗೂ ಕೃಷಿ ಕ್ಷೇತ್ರದ ಸುಧಾರಣೆಯನ್ನು ಏಕಕಾಲದಲ್ಲಿ ಮಾಡುವ ಕೆಲಸಕ್ಕೆ ಸರ್ಕಾರ ಮುನ್ನುಡಿ ಬರೆದಿದೆ ಎಂದು ಹೇಳಿದರು.

ದೇಶಾದ್ಯಂತ ಸುಮಾರು 2000 ಪ್ರಚಾರದ ವಾಹನಗಳು, ಸುಮಾರು 1000 ಕೃಷಿ ವಿಜ್ಞಾನ ಕೇಂದ್ರಗಳು, ಕಾಮನ್ ಸರ್ವೀಸ್ ಸೆಂಟರ್‍ಗಳು, ನಬಾರ್ಡ್ ಹಾಗೂ ಬ್ಯಾಂಕ್‍ಗಳು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿವೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ನವೆಂಬರ್ 15 ರಿಂದ ಪ್ರಾರಂಭವಾಗಿರುವ ಈ ಕಾರ್ಯಕ್ರಮವು ಜನವರಿ 22 ರವರೆಗೆ ದೇಶಾದ್ಯಂತ ನಡೆಯಲಿದೆ. ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ.

ಈಗಾಗಲೇ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಮೂಲಕ ಈ ದೇಶದ ಸುಮಾರು 80 ಕೋಟಿ ಜನರಿಗೆ ಉಚಿತವಾಗಿ 5 ಕೆ.ಜಿ ಆಹಾರ ಧಾನ್ಯವನ್ನು  ನೀಡುತ್ತಿದೆ.  

2020 ರಲ್ಲಿ ಕೋವಿಡ್ ಸಮಯದಲ್ಲಿ ಉಚಿತ ಪಡಿತರ ನೀಡುವುದಾಗಿ ಘೋಷಣೆ ಮಾಡಿದ ಮೋದೀಜಿಯವರು, ಈ ಯೋಜನೆಯನ್ನು ಡಿಸೆಂಬರ್ 2023 ರಿಂದ ಮುಂದಿನ 5 ವರ್ಷದ ವರೆಗೆ ವಿಸ್ತರಣೆ ಮಾಡಿದ್ದಾರೆ.  ಇದಕ್ಕಾಗಿ ಕೇಂದ್ರ ಸರ್ಕಾರ 3.90 ಲಕ್ಷ ಕೋಟಿ ಹಣವನ್ನು ಒದಗಿಸಿದೆ.

ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಈಗಾಗಲೇ 10 ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ನಮ್ಮ ಕ್ಷೇತ್ರದಲ್ಲಿ 1.30 ಲಕ್ಷ ಜನರಿಗೆ ಉಚಿತ ಗ್ಯಾಸ್ ಸಂಪರ್ಕ ಒದಗಿಸಲಾಗಿದೆ.

ಈ ದೇಶದ ಸುಮಾರು 51 ಕೋಟಿ ಜನರು ಜನಧನ್ ಖಾತೆ ಮುಖಾಂತರ 2 ಸಾವಿರ ಕೋಟಿ ಹಣವನ್ನು ಖಾತೆಗಳಲ್ಲಿ ಜಮಾ ಮಾಡಿದ್ದಾರೆ. ಈ ರೀತಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಸಂಕಲ್ಪ ಯಾತ್ರೆ ನಡೆಯುತ್ತಿದೆ ಎಂದರು.  

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸರ್ಕಾರದ ಯೋಜನೆಗಳು ಕಟ್ಟ ಕಡೆಯ ವ್ಯಕ್ತಿಗೂ ಕೂಡ ತಲುಪಬೇಕು. ಇದರಲ್ಲಿ ಸಾರ್ವಜನಿಕರೂ ಕೂಡ ಭಾಗಿಯಾಗಬೇಕು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರ ಹೊಳೆಸಿರಿಗೆರೆ ಹಾಲೇಶಪ್ಪ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್, ನಬಾರ್ಡ್ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ಬಿ.ಜೆ.ಪಿ. ಮುಖಂಡರುಗಳಾದ ಚಂದ್ರಶೇಖರ್ ಪೂಜಾರ್, ತಾಲ್ಲೂಕು ಬಿ.ಜೆ.ಪಿ. ಅಧ್ಯಕ್ಷ ಹಿಂಡಸಘಟ್ಟೆ ಲಿಂಗರಾಜ್ ಸೇರಿದಂತೆ, ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!