ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ
ರಾಣೇಬೆನ್ನೂರು, ನ. 29 – ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ ಪ್ರತಿ ಶಾಸಕರಿಗೂ 5 ಕೆಪಿಎಸ್ ಶಾಲೆಗಳನ್ನು ಕೊಡುವದರೊಂದಿಗೆ ಶೈಕ್ಷಣಿಕ ಕ್ರಾಂತಿ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಅವರು ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಹಳೆ ವಿದ್ಯಾರ್ಥಿಗಳು ನಿರ್ಮಿಸಿದ ನೂತನ ಶಾಲಾ ಕಟ್ಟಡವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಮಾತನಾಡುತ್ತಿದ್ದರು.
ಸಮಸ್ಯೆಗಳೇ ಅಧಿಕವಾಗಿರುವ ನನ್ನ ಇಲಾಖೆಯಲ್ಲಿ ಹಂತ-ಹಂತವಾಗಿ ಅವುಗಳಿಗೆ ಪರಿಹಾರ ಒದಗಿಸಲು ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದ್ದು ಆ ದಿಶೆಯಲ್ಲಿ ನೇಮಕಾತಿ ಮಾಡಿದ್ದೇವೆ. ಇನ್ನೂ ಮಾಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ವಿವರಿಸಿ, ಸರ್ಕಾರಿ ಶಾಲೆಗೆ ಮಕ್ಕಳು ಧಾವಿಸಿ ಬರುವಂತೆ ಸರ್ಕಾರ ಕಾರ್ಯಕ್ರಮಗಳನ್ನ ಹಾಕುವುದಾಗಿ ಸಚಿವರು ತಿಳಿಸಿದರು.
ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಗಳಾದಾಗ ರೈತಪರ ಚಿಂತನೆಯೊಂದಿಗೆ ನೀರಾವರಿ ಹಾಗೂ ಪ್ರತಿ ಮಕ್ಕಳಿಗೂ ಒಂದು ರೂಪಾಯಿ ನೀಡುವ ಯೋಜನೆ ಹೊಂದಿವ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸುವ ಪ್ರಯತ್ನ ಮಾಡಿದ್ದರು. ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹೆಚ್ಚು ಆದ್ಯತೆ ನೀಡುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಕಾಗಿನೆಲೆ ಸಮಾರಂಭ ಮುಗಿಸಿ ಕದರಮಂಡಲಗಿ ಗ್ರಾಮಕ್ಕೆ ಆಗಮಿಸಿ ಶಾಲಾಕಟ್ಟಡ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ರಾಮಯ್ಯ ತೆರಳಿದ ನಂತರ ನಡೆದ ಸಮಾರಂಭದ ಅಧ್ಯಕ್ಷತೆಯನ್ನ ಶಾಸಕ ಬಸವರಾಜ ಶಿವಣ್ಣನವರ ವಹಿಸಿದ್ದರು. ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಮತ್ತಿತರರಿದ್ದರು.
ಕರ್ನಾಟಕದ ತಿರುಪತಿ ಎಂದು ಪ್ರಸಿದ್ದಿ ಪಡೆದ ಕದರಮಂಡಲಗಿ ಗ್ರಾಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು 1ಕೋಟಿ 40 ಲಕ್ಷ ವೆಚ್ಚದಲ್ಲಿ ಎರಡು ಅಂತಸ್ತಿನ ಸರ್ಕಾರಿ ಕನ್ನಡ ಶಾಲೆಯ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.