ದಾವಣಗೆರೆ, ನ.28- ರಾಜ್ಯಮಟ್ಟದ ಕರ್ನಾಟಕ ಎಸ್ಸಿ-ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಾಳೆ ದಿನಾಂಕ 29ರಂದು ಬೆಳಗ್ಗೆ 11.30ಕ್ಕೆ ಜಗಳೂರು ಪಟ್ಟಣದ ಬಯಲು ರಂಗಮಂದಿರ ದಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸಮಾರಂಭ ಉದ್ಘಾಟಿಸಲಿದ್ದಾರೆ. ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವರಾದ ಬಿ.ನಾಗೇಂದ್ರ, ಡಾ.ಹೆಚ್.ಸಿ. ಮಹಾದೇವಪ್ಪ, ಕೆ.ಎನ್.ರಾಜಣ್ಣ, ಕೆ.ಹೆಚ್.ಮುನಿಯಪ್ಪ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಹೆಚ್.ಆಂಜನೇಯ ಸೇರಿದಂತೆ, ಇನ್ನಿತರೆ ಪ್ರಮುಖರು ಭಾಗವಹಿಸುವರು ಎಂದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಅಬ್ದುಲ್ ವಹಾಬ್, ಎಂ.ಹೆಚ್. ಚೌಡಪ್ಪ, ಎ.ಡಿ.ನಾಗಲಿಂಗಪ್ಪ, ಸುರೇಶ್ ಬಾಬು, ಜಿ.ವೆಂಕಟೇಶ್, ರೋಶನ್, ಎಂ.ಜಿ. ಲಿಂಗರಾಜು, ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಇದೇ ವೇಳೆ ಸರಿಗಮಪ ಖ್ಯಾತಿಯ ಗಾಯಕರಾದ ಕಂಬದ ರಂಗಯ್ಯ ಹಾಗೂ ವಸುಶ್ರೀ ಹಳೇಮನೆ ಅವರಿಂದ ಸಂಗೀತ ಹಬ್ಬ ಹಾಗೂ ಇಪ್ಟಾ ಕಲಾವಿದರಿಂದ ಜಾಗೃತಿ ಗೀತೆ ನಡೆಯಲಿದೆ ಎಂದರು.
ಸಂಘಟನೆಯ ಪದಾಧಿಕಾರಿಗಳಾದ ಎಂ.ರಾಜಪ್ಪ, ಮಾದಿಹಳ್ಳಿ ಕೆ.ಮಂಜಪ್ಪ, ಎ.ಕೆ. ಮಾರಪ್ಪ, ಬಿ.ಒ. ಮಾರುತಿ ಇನ್ನಿತರರು ಇದ್ದರು.