ಕಾಳು ಕಟ್ಟುವ ಹಂತದ ಭತ್ತಕ್ಕೆ ತಿಂಗಳಾಂತ್ಯದವರೆಗೆ ನೀರು ಹರಿಸಲು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಒತ್ತಾಯ

ಕಾಳು ಕಟ್ಟುವ ಹಂತದ ಭತ್ತಕ್ಕೆ ತಿಂಗಳಾಂತ್ಯದವರೆಗೆ  ನೀರು ಹರಿಸಲು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಒತ್ತಾಯ

ದಾವಣಗೆರೆ, ನ.22- ಜಿಲ್ಲೆಯಲ್ಲಿ  ಸು. 1.4 ಲಕ್ಷ ಎಕರೆಯಲ್ಲಿ ಭತ್ತ ಬೆಳೆದಿದ್ದು, ಈಗಾಗಲೇ ಶೇ. 20ರಷ್ಟು ಕೊಯ್ಲಿಗೆ ಬಂದಿದೆ.  ಶೇಕಡ 50 ರಷ್ಟು ಭತ್ತದ ಬೆಳೆ ಇನ್ನು ಎಂಟತ್ತು ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಇನ್ನುಳಿದ ಶೇಕಡ 30 ರಷ್ಟು ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದೆ.    ಕಾಳು ಕಟ್ಟುವ ಹಂತದಲ್ಲಿರುವುದರಿಂದ ಭತ್ತಕ್ಕೆ ನಿತ್ಯ ನೀರು ಬೇಕು. ಇಲ್ಲವಾದರೆ ಕಾಳು ಸಂಪೂರ್ಣ ಜಳ್ಳಾಗುತ್ತದೆ. ಹಾಗಾಗಿ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ಆದ್ದರಿಂದ ಈ ತಿಂಗಳ ಅಂತ್ಯದವರೆಗೆ ಭದ್ರಾ ನೀರು ಹರಿಸಬೇಕು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಒತ್ತಾಯಿಸಿದೆ.

ಈಗಾಗಲೇ ಭತ್ತದ ಪೈರು ಕೊಯ್ಲಿಗೆ ಬಂದಿರುವುದನ್ನು ಬಿಟ್ಟು ಕಾಳು ಕಟ್ಟುವ ಅಂತದಲ್ಲಿರುವ ಪೈರಿಗೆ ಮಾತ್ರ ನೀರು ಒದಗಿಸುವ ಕಾರ್ಯವಾಗಬೇಕು. ಪ್ರಸ್ತುತ ಈಗಾಗಲೇ ಕೊಯ್ಲಿಗೆ ಬಂದಿರುವ ಭಾಗಕ್ಕೂ ನೀರು ನಿರಂತರವಾಗಿ ಹರಿಸಲಾಗುತ್ತಿದೆ. ಇದರಿಂದ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ಆದ್ದರಿಂದ ನೀರಾವರಿ ಇಲಾಖೆ ಅಧಿಕಾರಿಗಳು ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು.  ನೀರಿನ ಅವಶ್ಯಕತೆ ಇರುವ ಭಾಗಕ್ಕೆ ಮಾತ್ರ ನೀರು ಹರಿಸಬೇಕು. ಇಲ್ಲವಾದರೆ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತದೆ.

ಇಂದು ರಾತ್ರಿ ನೀರು ನಿಲುಗಡೆ ಮಾಡಲಾಗುವುದು ಎಂದು ಭದ್ರಾ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಸುಜಾತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂದಿನಿಂದಲೇ ನೀರು ನಿಲುಗಡೆ ಮಾಡಿದ್ರೆ ಕಾಳು ಕಟ್ಟುವ ಹಂತದಲ್ಲಿರುವ ಶೇಕಡ 30ರಷ್ಟು ಭತ್ತದ ಬೆಳೆ ಹಾನಿಯಾಗುತ್ತದೆ. ಆದ್ದರಿಂದ ಇಂದು ನೀರು ನಿಲುಗಡೆ ಮಾಡದೆ, ಈ ತಿಂಗಳ ಅಂತ್ಯದವರೆಗೆ ಕಾಳು ಕಟ್ಟುವ ಅಂತದಲ್ಲಿರುವ ಶೇಕಡ 30 ರಷ್ಟು ಭತ್ತದ ಬೆಳೆಗೆ ಮಾತ್ರ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಕೋರಿದೆ. 

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವಾಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ  ಅಧ್ಯಕ್ಷ  ಲೋಕಿಕೆರೆ ನಾಗರಾಜ್,   ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ  ಕೊಳೇನಹಳ್ಳಿ ಬಿ. ಎಂ ಸತೀಶ್,  ರೈತ ಮುಖಂಡರಾದ ಆಲೂರು ನಿಂಗರಾಜ್, ಅಣಜಿ ಗುಡ್ಡೇಶ್, ಕಕ್ಕರಗೊಳ್ಳ ಕಲ್ಲಿಂಗಪ್ಪ, ಕೆ. ಎಸ್. ಮೋಹನ್, ಕೊಂಡಜ್ಜಿ ಪರಮೇಶ್ವರಪ್ಪ ಮುದೇಗೌಡ್ರ ಮುಂತಾದವರು ಉಪಸ್ಥಿತರಿದ್ದರು .

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ. ವೆಂಕಟೇಶ್, ಇನ್ನೆರಡು ದಿನ ನೀರು ಹರಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಮತ್ತು ಅವಶ್ಯಕತೆ ಕಂಡುಬಂದರೆ, ಐಸಿಸಿ ಅಧ್ಯಕ್ಷ ಸಚಿವ ಮಧು ಬಂಗಾರಪ್ಪನವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು ಎಂದು  ಬಿಜೆಪಿ ಮುಖಂಡರು ತಿಳಿಸಿದ್ದಾರೆ.

error: Content is protected !!