ದಾವಣಗೆರೆ, ನ.12- ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿ ನೀಡುವ ಕುರಿತು ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ನೀಡಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ಕರ್ನಾಟಕ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಭರತ್ ಎಸ್.ಮೈಲಾರ್ ಆಗ್ರಹಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ.ಭಕ್ತವತ್ಸಲ ಆಯೋಗವನ್ನು ಸಂವಿಧಾನದ 73ನೇ ತಿದ್ದುಪಡಿ ನಿರ್ದೇಶನದಂತೆ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶಗಳ ನಿರ್ದೇಶನದಂತೆ ನೇಮಕ ಮಾಡಿದ್ದು, ಆಯೋಗ ನೀಡಿದ ವರದಿಯ ಪ್ರಮುಖ ಅಂಶಗಳನ್ನು ತಿರಸ್ಕಾರ ಮಾಡಿರುವುದ ರಿಂದ ಹಿಂದುಳಿದ ಜಾತಿಗಳಲ್ಲಿಯೇ ಅತಿ ಹಿಂದುಳಿದ ಜಾತಿಗಳು ರಾಜಕೀಯ ಅಧಿಕಾರ ಪಡೆದುಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಹೇಳಿದರು.
ಅತಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿ ಕಿತ್ತುಕೊಂಡು ಹಿಂದುಳಿದ ಜಾತಿಗಳಲ್ಲಿ ಬಲಿಷ್ಠತೆ ಹೊಂದಿರುವ ಜಾತಿಗಳು ಅಧಿಕಾರ ಪಡೆದುಕೊಳ್ಳುತ್ತಿವೆ. ಆದ್ದರಿಂದ ಸರ್ಕಾರವು ನ್ಯಾ.ಭಕ್ತವತ್ಸಲರ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದರು.
ಒಕ್ಕೂಟದ ಅಧ್ಯಕ್ಷ ಎಸ್.ಟಿ. ಶ್ರೀನಿವಾಸ್, ಕಾರ್ಯಾಧ್ಯಕ್ಷರುಗಳಾದ ಎಸ್.ಎಂ. ಸುರೇಶ್, ಎಸ್. ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಬಿ. ಗುತ್ತೂರು, ಚಂದ್ರಪ್ಪ, ಹನುಮಂತರಾಜು, ಭೋಜರಾಜು, ಗುರುಸಿದ್ದಪ್ಪ, ಸಿದ್ದೇಶ್ವರ್, ದೇವೇಂದ್ರಪ್ಪ, ಏಕಾಂತಪ್ಪ, ಮಂಜು ಪತ್ರಿಕಾಗೋಷ್ಠಿಯಲ್ಲಿದ್ದರು.