ಬೆಂಗಳೂರು, ನ. 5 – ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಅವರನ್ನು ಶನಿವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಪ್ರತಿಮಾ, ಬೆಂಗಳೂರಿನ ದೊಡ್ಡಕಲ್ಲಸಂದ್ರದ ಅಪಾರ್ಟ್ ಮೆಂಟ್ ಸಮುಚ್ಚಯದ ಫ್ಲ್ಯಾಟ್ನಲ್ಲಿ ಒಬ್ಬರೇ ವಾಸವಿದ್ದರು. ಶನಿವಾರ ರಾತ್ರಿ ಚಾಲಕ, ಪ್ರತಿಮಾ ಅವರನ್ನು ಮನೆಗೆ ಬಿಟ್ಟು ಹೋಗಿದ್ದರು. ಭಾನುವಾರ ಬೆಳಿಗ್ಗೆ ಸಹೋದರ ಕರೆ ಮಾಡಿದರೂ ಪ್ರತಿಮಾ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಸಂಬಂಧಿಕರು ಮನೆಗೆ ಬಂದು ನೋಡಿದಾಗ ಕೊಲೆ ನಡೆದಿರುವುದು ಗೊತ್ತಾಗಿದೆ.
ತನಿಖೆ ನಂತರವೇ ಸತ್ಯ ತಿಳಿಯಲಿದೆ: ಎಸ್ಸೆಸ್ಸೆಂ
ದಾವಣಗೆರೆ, ನ.5- ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರತಿಮಾ ಅವರ ಹತ್ಯೆಯ ಬಗ್ಗೆ ತನಿಖೆ ನಂತರವೇ ಸ್ಪಷ್ಟ ಕಾರಣಗಳು ತಿಳಿಯಲಿವೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹತ್ಯೆಯ ಬಗ್ಗೆ ಹಲವು ಸಂಶಯಗಳು ಇದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಕೆಲವರು ಕೌಟುಂಬಿಕ ಕಾರಣ, ಇಲಾಖೆ ವಿಚಾರ, ಮತ್ತೆ ಕೆಲವರು ಇಲಾಖೆ ಕಾರು ಚಾಲಕನನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದು ಕಾರಣ ಎಂದು ಹೇಳಲಾಗುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದರು.
ಅಕ್ರಮ ಗಣಿಗಾರಿಕೆಯ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಸಾವಿನ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾಗಿ ಹೇಳಬಹುದು ಎಂದ ಅವರು, ಶನಿವಾರ ಇಲಾಖೆಯ ವಿಡಿಯೋ ಕಾನ್ಪರೆನ್ಸ್ನಲ್ಲಿ ಪ್ರತಿಮಾ ಅವರು ಭಾಗಿಯಾಗಿದ್ದರು. ಒಳ್ಳೆಯ ಅಧಿಕಾರಿ ಎಂದು ಹೇಳಿದರು.
ಕೇಂದ್ರದಿಂದ ಅನುದಾನ ತರಲಿ : ಬಿಜೆಪಿಯವರು ಬರ ಅಧ್ಯಯನ ಪ್ರವಾಸ ಮಾಡುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ರಾಜ್ಯದ ಕಷ್ಟದ ಬಗ್ಗೆ ಹೇಳಿ ಅಗತ್ಯ ಇರುವ ಅನುದಾನ ತರಲಿ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ, ಇದೇ ಕಾರಣಕ್ಕೆ ಬರ ಅಧ್ಯಯನ ಸೇರಿದಂತೆ ಹತ್ತಾರು ಪ್ರವಾಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಅಂದರೆ ಒಂದು ಕುಟುಂಬ ಇದ್ದಂತೆ. ನಮ್ಮ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿ ಹೇಳಿದರು. ಈ ಬಗ್ಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊಲೆ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.