ದಾವಣಗೆರೆ, ಅ.3- ಬರದ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಬರ ಪರಿಹಾರದ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ಕೇಂದ್ರದ ಮೇಲೆ ಆರೋಪ ಹೊರಿಸುತ್ತಾ, ರೈತರ-ಜನಸಾಮಾನ್ಯರ ಬವಣೆಯನ್ನು ಆಲಿಸಿ, ಸಂತೈಸುವ ಸೌಜನ್ಯತೆ ಮೆರೆದಿಲ್ಲ. ಕನಿಷ್ಠ ಮಾನವೀಯತೆ ಇಲ್ಲದ ದುಷ್ಟ ಸರ್ಕಾರ ಇದಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಆರೋಪಿಸಿದೆ.
ಜಿಲ್ಲಾಧಿಕಾರಿ ಕಚೇರಿಗೆ ಇಂದು ತೆರಳಿದ ಬಿಜೆಪಿ ನಿಯೋಗ ಹಲವಾರು ಬೇಡಿಕೆಗಳ ಮನವಿ ಸಲ್ಲಿಸಿತು. ರಾಜ್ಯ ಸರ್ಕಾರ ಭೀಕರ ಬರದಿಂದ ಹಾನಿಯಾಗಿರುವ ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸಬೇಕು. ಭೂಮಿ ಉಳಿಮೆ, ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ವೆಚ್ಚ, ರೈತನ ಶ್ರಮ ಎಲ್ಲವನ್ನೂ ಲೆಕ್ಕ ಹಾಕಿ ಪ್ರತಿ ಎಕರೆಗೆ ಬೆಳೆ ನಷ್ಟದ ಪ್ರಮಾಣ ಆಂದಾಜಿಸಬೇಕು. ಜಿಲ್ಲೆಯಲ್ಲಿ ಪ್ರತಿ ಎಕರೆಗೆ ಪ್ರತಿ ಹಂಗಾಮಿಗೆ 30 ಸಾವಿರ ಪರಿಹಾರ ಕೊಡಬೇಕು.
ಬರದ ಹೊತ್ತಿನಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಲು ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಿ ತಾಲ್ಲೂಕುವಾರು ಮತ್ತು ಗ್ರಾಮ ಪಂಚಾಯಿತಿವಾರು ಗುರಿ ನಿಗದಿಪಡಿಸಬೇಕು. ಈ ಯೋಜನೆ ಅನುಷ್ಠಾನದಲ್ಲಿ ನಿಯಮಗಳನ್ನು ಸಡಿಲಗೊಳಿಸಿ, ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು. ವೈಯ ಕ್ತಿಕ ಕಾಮಗಾರಿಗಳಿಗೆ ಕುಟುಂಬದ ಯಾರಾದರೊಬ್ಬರು ಜಾಬ್ ಕಾರ್ಡ್ ಹೊಂದಿರಬೇಕು, ಮನರೇಗದಡಿಯಲ್ಲಿ ಈ ಹಿಂದೆ ಕೆಲಸ ಮಾಡಿರಬೇಕು, ಸಣ್ಣ, ಅತಿ ಸಣ್ಣ ರೈತ ರಾಗಿರಬೇಕು ಎಂಬ ನಿಯಮಗಳನ್ನು ಸಡಿಲಗೊಳಿಸಬೇಕು .
ಬೆಳೆ ಇಲ್ಲದೇ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆ ಕ್ಷೀಣವಾಗಿದೆ. ಇದರಿಂದಾಗಿ ಹೈನೋದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ಇದರ ನಷ್ಟದ ಪ್ರಮಾಣವನ್ನು ಪ್ರತ್ಯೇಕವಾಗಿ ಅಂದಾಜಿಸಿ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಯಲ್ಲಿ ನಿರತರಾಗಿರುವ ರೈತರಿಗೆ ಪ್ರತ್ಯೇಕವಾಗಿ ಪರಿಹಾರ ನೀಡಬೇಕು.
ಮೊದಲೇ ನೀರಿನ ಬರ ಅದರ ಜೊತೆಗೆ ವಿದ್ಯುತ್ ಅಭಾವ ಮತ್ತು ಕಣ್ಣು ಮುಚ್ಚಾಲೆ ಯಿಂದ ರೈತರ ಬದುಕು ಹೈರಾಣಾಗಿದೆ. 2 ವಾರದ ಹಿಂದೆಯೇ ರೈತರಿಗೆ ನಿರಂತರ 5 ತಾಸು ತ್ರೀಫೇಸ್ ವಿದ್ಯುತ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಸೂಚಿಸಿದ್ದರೂ, ರೈತರ ಬವಣೆ ತಪ್ಪಿಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ನಿಯೋಗದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಮುಖಂಡರಾದ ಕೊಳೇನಹಳ್ಳಿ ಬಿ.ಎಂ ಸತೀಶ್, ಧನಂಜಯ ಕಡ್ಲೇಬಾಳು, ಬಾತಿ ರೇವಣಸಿದ್ದಪ್ಪ, ಬಿ.ಕೆ.ಶಿವಕುಮಾರ್, ಹೆಬ್ಬಾಳು ಮಹೇಂದ್ರ, ಕುಂದುವಾಡದ ಗಣೇಶಪ್ಪ, ಕುಂದುವಾಡದ ಪುನೀತ್ ಆರುಂಡಿ, ಅಣಬೇರು ಶಿವಪ್ರಕಾಶ್, ಅಥಿತ್ ಅಂಬರ್ಕರ್, ವಾಸನ ಬಸವರಾಜ, ಕಡ್ಲೇಬಾಳು ಬಿ.ಎಲ್.ಚಂದ್ರು ಮತ್ತಿತರರು ಭಾಗವಹಿಸಿದ್ದರು.