ದಾವಣಗೆರೆ, ನ. 1- ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ ಹಾಗೂ ಸಾರ್ವಜನಿಕ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ 11 ದಿನಗಳ ಸಾರ್ವಜನಿಕ ವಾಲ್ಮೀಕಿ ಜಯಂತ್ಯೋತ್ಸವದ ಎರಡನೇ ದಿನವಾದ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಬೆಳಗಾವಿಯ ಶಬರಿದೇವಿ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆಯಿತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಗದಗಿನ ಶ್ರೀ ಗಾನಯೋಗಿ ಭಜನಾ ಮಂಡಳಿ ದ್ವಿತೀಯ ಮತ್ತು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಹುಚ್ಚಂಗಿದುರ್ಗ ಕೆಳಗೋಟೆ ಆಂಜನೇಯ ಭಜನಾ ಮಂಡಳಿ ತೃತಿಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ಕ್ರಮವಾಗಿ 10 ಸಾವಿರ, 5 ಸಾವಿರ ಮತ್ತು 2500 ರೂ. ನಗದು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಹಶೀಲ್ದಾರ್ ಡಾ.ಅಶ್ವತ್ಥ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ರಾಜ್ಯದ ಬೆಳಗಾವಿ, ಕೊಪ್ಪಳ, ವಿಜಯನಗರ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 22 ಕಲಾ ತಂಡಗಳು ಆಸಕ್ತಿಯಿಂದ ಭಾಗವಹಿಸಿದ್ದವು.
ಮುಖ್ಯ ಅತಿಥಿಯಾಗಿ ಎಸ್.ಎನ್.ಟಿ.ತಿಪ್ಪೇಸ್ವಾಮಿ, ಹುಚ್ಚವ್ವನಹಳ್ಳಿ ಮಂಜುನಾಥ್, ಗುಮ್ಮನೂರು ಬಸವರಾಜ್ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಶಶಿಧರ್, ಚಿನ್ನಸಮುದ್ರ ಉಮೇಶ್, ಮರುಳಸಿದ್ದಯ್ಯ ಭಾಗವಹಿಸಿದ್ದರು.