ವಕೀಲರು ಸದಾ ಅಧ್ಯಯನ ನಿರತರಾಗಿರಬೇಕು

ವಕೀಲರು ಸದಾ ಅಧ್ಯಯನ ನಿರತರಾಗಿರಬೇಕು

`ವಕೀಲ ಸಂರಕ್ಷಣಾ ಮಸೂದೆ’ ಕರಡಿನ ರೂವಾರಿ ಕೆ. ಕೋಟೇಶ್ವರರಾವ್ ಆಶಯ

ದಾವಣಗೆರೆ, ಅ. 29- `ವಿದ್ವತ್‍ಪೂರ್ಣ’ ಎಂಬ ವಿಶೇಷಣದ ಗೌರವಕ್ಕೆ ಪಾತ್ರರಾಗಿರುವ ವಕೀಲರು ಸದಾ ಅಧ್ಯಯನ ನಿರತ ವಿದ್ಯಾರ್ಥಿಗಳಾಗಿರಬೇಕು. ನ್ಯಾಯವಾದಿ ಅಧ್ಯಯನವನ್ನು ನಿಲ್ಲಿಸಿದ ದಿನವೇ ಆತನಲ್ಲಿರುವ `ವಕೀಲ’ ಸತ್ತು ಹೋಗುತ್ತಾನೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಸದಸ್ಯ, ಹಿರಿಯ ವಕೀಲ ಹಾಗೂ `ವಕೀಲ ಸಂರಕ್ಷಣಾ ಮಸೂದೆ’ ಕರಡಿನ ರೂವಾರಿ ಕೆ. ಕೋಟೇಶ್ವರರಾವ್ ಪುನರ್‍ ಪ್ರತಿಪಾದಿಸಿದರು.

ನಗರದ ವಕೀಲರ ಸಂಘದಲ್ಲಿ ನಿನ್ನೆ ಏರ್ಪಡಿಸಿದ್ದ ಸಿಓಪಿ ಮತ್ತು ವಕೀಲ ಸಂರಕ್ಷಣಾ ಕಾಯ್ದೆಯ ಕುರಿತು ನಡೆದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ  ಅವರು ಮಾತನಾಡಿದರು.   

ಕಾನೂನು ಕಾಲೇಜಿನಲ್ಲಿ ಸಂಪಾದಿಸುವ ಜ್ಞಾನ ಶೇ. ಒಂದು ಮಾತ್ರ. ಉಳಿದ ಶೇ. 99ನ್ನು ವಕೀಲರ ವೃತ್ತಿಯಲ್ಲಿ ನಿರತರಾಗಬೇಕಾದಾಗ ಕಲಿಯಬೇಕಾಗುತ್ತದೆ. ಪ್ರಾಮಾಣಿಕತೆಯನ್ನು ರೂಢಿಸಿಕೊಂಡು ಸತತ ಓದಿನಿಂದ ಕಾನೂನುಗಳ ಮೇಲೆ ಹಿಡಿತ ಮತ್ತು ಪ್ರಭುತ್ವ ಸಾಧಿಸಿ, ಪ್ರತಿಭೆ-ಪಾಂಡಿತ್ಯಗಳ ಮೂಲಕ ನ್ಯಾಯಾಲಯದಲ್ಲಿ ವಾದಿಸಿ, ತಮ್ಮ ಕಕ್ಷಿದಾರರಾಗಿ ಅನುಕೂಲವಾಗುವ ಆದೇಶವನ್ನು ನ್ಯಾಯಾಲಯಗಳಲ್ಲಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದೇಶಾದ್ಯಂತ ವಕೀಲರ ಮೇಲೆ ಹಲ್ಲೆಯ ಪ್ರಕರಣಗಳು ಹಾಗೂ ಪೊಲೀಸ್ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿದ್ದು, ಅವುಗಳಿಂದ ವಕೀಲರನ್ನು ರಕ್ಷಿಸುವುದೇ, ವಕೀಲರ ಸಂರಕ್ಷಣಾ ಕಾಯಿದೆಯ ಉದ್ದೇಶ. ತಾವು ಸರ್ಕಾರಕ್ಕೆ ಸಲ್ಲಿಸಿರುವ ಕರಡು ಪ್ರತಿಯ ಕನ್ನಡ ಭಾಷಾಂತರ ನಡೆಯುತ್ತಿದ್ದು, ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿರುವ ಭರವಸೆ ಇದೆ. ಮುಖ್ಯಮಂತ್ರಿಯವರು ಈ ಮಸೂದೆಗೆ ಬೆಂಬಲ ವ್ಯಕ್ತಪಡಿಸಿರುವುದನ್ನು ಅವರು ಸಭೆಯ ಗಮನಕ್ಕೆ ತಂದರು. 

ವಕೀಲರನ್ನು ಹಲ್ಲೆಗಳಿಂದ ರಕ್ಷಿಸುವ ಕಾನೂನುಗಳು ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಜಾರಿಯಲ್ಲಿವೆ. ರಾಜಸ್ಥಾನ ರಾಜ್ಯದಲ್ಲಿ ಈ ಬಗೆಯ ಕಾಯ್ದೆ ಈಗಾಗಲೇ ಅಸ್ತಿತ್ವದಲ್ಲಿದೆ ಎಂದವರು ವಿವರಿಸಿದರು.

ದೇಶದ ವಿವಿಧ ನ್ಯಾಯಾಲಯಗಳಲ್ಲಿ ಈಗ ಸುಮಾರು 17 ಲಕ್ಷ ವಕೀಲರು ವೃತ್ತಿ ನಿರತರಾಗಿದ್ದು, ಇವರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ವಕೀಲರು ಇದ್ದಾರೆ ಎಂದು ಕೋಟೇಶ್ವರರಾವ್ ಮಾಹಿತಿ ನೀಡಿದರು. 

ಕೊರೊನಾ ಮಾರಿಯ ಸಂದರ್ಭದಲ್ಲಿ ಮೃತರಾದ ಸುಮಾರು 320 ವಕೀಲರಿಗೆ ಪರಿಷತ್ತು ಧನ ಸಹಾಯ ನೀಡಿತ್ತು ಎಂದರು.  

ವಕೀಲರ ಸಂಘಗಳಿಗೆ ಸರ್ಕಾರ ನೀಡುತ್ತಿದ್ದ ವಾರ್ಷಿಕ ಪುಸ್ತಕ ಹಾಗೂ ಪೀಠೋಪಕರಣ ಅನುದಾನ ಈಚಿನ ವರ್ಷಗಳಲ್ಲಿ ನಿಲ್ಲಿಸಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್ ಮಾತನಾಡಿ, ವಕೀಲರ ಪರಿಷತ್ತಿನ ಹಲವಾರು ಪಾರದರ್ಶಕ ಕಾರ್ಯಗಳಿಗೆ ಸಾಕ್ಷಿಯಾಗಿರುವ ಕೋಟೇಶ್ವರರಾವ್ ಅವರು ವಕೀಲರ ಸಂರಕ್ಷಣಾ ಕಾಯ್ದೆಯನ್ನು ರೂಪಿಸಿದವರು ಮತ್ತು ರಾಜ್ಯದ ಯಾವುದೇ ಭಾಗದಲ್ಲಿ ವಕೀಲರಿಗೆ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಹೋರಾಡುವ ವ್ಯಕ್ತಿಯಾಗಿದ್ದಾರೆ ಎಂದು ಶ್ಲ್ಯಾಘಿಸಿದರು. 

ವೇದಿಕೆಯಲ್ಲಿ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್. ಬಸವರಾಜ್, ಸಹಕಾರ್ಯದರ್ಶಿ ಎ.ಎಸ್. ಮಂಜುನಾಥ್, ಜಗಳೂರು ವಕೀಲರ ಸಂಘದ ಅಧ್ಯಕ್ಷ ಓಂಕಾರೇಶ್ವರ,  ಕಾರ್ಯಕಾರಿ ಸಮಿತಿ ಸದಸ್ಯರಾದ ಸಂತೋಷ್‍ಕುಮಾರ್ ಜಿ.ಜೆ, ಚೌಡಪ್ಪ, ನೀಲಕಂಠಯ್ಯ ಕೆ.ಎಂ., ಆರ್.ಭಾಗ್ಯಲಕ್ಷ್ಮಿ, ನಾಗರಾಜ್ ಎಲ್., ಚೌಡಪ್ಪ ಎಂ., ರಾಘವೇಂದ್ರ ಎಂ. ಮತ್ತು  ಇತರರು ಉಪಸ್ಥಿತರಿದ್ದರು.

error: Content is protected !!