ಉಲ್ಲಾಸ್ ನವ ಭಾರತ ಸಾಕ್ಷರತೆ : 15 ವರ್ಷ ಮೇಲ್ಪಟ್ಟವರಿಗೆ ಮೂಲಭೂತ ಶಿಕ್ಷಣ

ಉಲ್ಲಾಸ್ ನವ ಭಾರತ ಸಾಕ್ಷರತೆ : 15 ವರ್ಷ ಮೇಲ್ಪಟ್ಟವರಿಗೆ ಮೂಲಭೂತ ಶಿಕ್ಷಣ

ದಾವಣಗೆರೆ, ಅ. 12 – ಉಲ್ಲಾಸ್ ನವ ಭಾರತ ಸಾಕ್ಷರತಾ ಕಾರ್ಯಕ್ರಮ ಯೋಜನೆಯು ಶಾಲೆಗೆ ಹೋಗುವ ಅವಕಾಶವನ್ನು ಕಳೆದುಕೊಂಡಿರುವ 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರಿಗೆ, ನಾಗರಿಕರಿಗೆ ಮೂಲಭೂತ ಶಿಕ್ಷಣ, ಆರ್ಥಿಕ ಸಾಕ್ಷರತೆ ಮತ್ತು ನಿರ್ಣಾಯಕ ಜೀವನ ಕೌಶಲ್ಯಗಳನ್ನು ಕಲ್ಪಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಲ್ಲಾಸ್-ನವ ಭಾರತ ಸಾಕ್ಷರತೆ ಕಾರ್ಯಕ್ರಮ ಅನುಕೂಲಕ್ಕಾಗಿ ಕಾರ್ಯಪಡೆ ರಚಿಸುವ ಕುರಿತು ಇಂದು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಉಲ್ಲಾಸ್-ನವ ಭಾರತ್ ಸಾಕ್ಷರತಾ ಕಾರ್ಯಕ್ರಮದ ಬಗ್ಗೆ ಎಲ್ಲಾ ಪಾಲುದಾರರು ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಸಾಕ್ಷರತಾ ದಿನವನ್ನು ಆಚರಿಸಲು 2023 ರ ಸೆ. 1 ರಿಂದ ಸೆ. 8 ರವರೆಗೆ ಸಾಕ್ಷರತಾ ಸಪ್ತಾಹವನ್ನು ನಡೆಸಲಾಗಿದೆ. ಈ ನಿಟ್ಟಿನಲ್ಲಿ ಕ್ರಿಯಾತ್ಮಕ ಸಾಕ್ಷರತೆಗಾಗಿ ನೈಜ-ಜೀವನದ ಕಲಿಕೆ ಮತ್ತು ಕೌಶಲ್ಯಗಳು ಹಾಗೂ ಸ್ಥಳೀಯ ಶಾಲೆಗಳಲ್ಲಿ ಸಾಕ್ಷರತೆಯ ಮೌಲ್ಯಮಾಪನ ಪ್ರದರ್ಶಿಸಲಾಗುತ್ತದೆ.

ಸಾಕ್ಷರತೆ ಎನ್ನುವುದು ಓದುವುದು, ಬರೆಯುವುದು ಮತ್ತು ಸಂಖ್ಯಾಶಾಸ್ತ್ರವಲ್ಲ. ಇದು ವೃತ್ತಿಪರ ಕೌಶಲ್ಯಗಳು, ಡಿಜಿಟಲ್ ಸಾಕ್ಷರತೆ, ಕಾನೂನು ಸಾಕ್ಷರತೆ ಮತ್ತು ದೈನಂದಿನ ಕೌಶಲ್ಯಗಳ ಸಂಪೂರ್ಣ ಜೀವನ ಕೌಶಲ್ಯತೆ ಹೆಚ್ಚಿಸುವ ಕಲಿಕೆ ಆಗಿದೆ. 

ಇದು ಶಾಲೆಗೆ ಹೋಗುವ ಅವಕಾಶವನ್ನು ಕಳೆದುಕೊಂಡಿರುವ 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರಿಗೆ ನಾಗರಿಕರಿಗೆ ಮೂಲಭೂತ ಶಿಕ್ಷಣ, ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ ಮತ್ತು ನಿರ್ಣಾಯಕ ಜೀವನ ಕೌಶಲ್ಯಗಳನ್ನು ನೀಡುತ್ತದೆ. ಸ್ವಯಂ ಸೇವಕತ್ವದ ಮೂಲಕ ಇದನ್ನು ಕಾರ್ಯಗತಗೊಳಿಸಲಾಗುವುದು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ.76 ರಷ್ಟು ಸಾಕ್ಷರತೆಯ ಪ್ರಮಾಣ ಇದೆ.

ಒಟ್ಟು 14433 ಭೌತಿಕ ಗುರಿಯಲ್ಲಿ 9374 ಅನಕ್ಷರಸ್ಥರನ್ನು ಸಮೀಕ್ಷೆಯಲ್ಲಿ ಗುರುತಿಸಿ, ಕಲಿಕೆಯಲ್ಲಿ ತೊಡಗಿಸಿಕೊಂಡು ಡಯಟ್ `ಮೂಲಕ ಪರೀಕ್ಷೆ ಮತ್ತು ಮೌಲ್ಯಮಾಪನ ಆಯೋಜಿಸಿ ಉತ್ತೀರ್ಣರಾಗಿರುತ್ತಾರೆ. ಬಾಕಿ ಉಳಿದ 5059 ಅನಕ್ಷರಸ್ಥರನ್ನು 2023-24ನೇ ಸಾಲಿನಲ್ಲಿ ಸಮೀಕ್ಷೆ ಮೂಲಕ ಗುರುತಿಸಿಕೊಂಡು ತಾಲ್ಲೂಕುವಾರು ಕಲಿಕಾ ಕೇಂದ್ರಗಳ ಮೂಲಕ ಅನಕ್ಷರಸ್ಥರನ್ನು ಕಲಿಕೆಯಲ್ಲಿ ತೊಡಗಿಸಿ ಇವರಿಗೆ ಜನವರಿ 2024ರಲ್ಲಿ ಪರೀಕ್ಷೆ ನಡೆಸಲಾಗುವುದು ಎಂದರು.

ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ, ಡಯಟ್ ಪ್ರಾಂಶುಪಾಲರಾದ ಗೀತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಷಣ್ಮುಖಪ್ಪ.ಎಸ್ ಪಿಯು ಡಿಡಿ ಕೆ ಸಿದ್ದಪ್ಪ, ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಮಹೇಶಪ್ಪ ಹೆಚ್. ದೊಡ್ಡಮನಿ ಉಪಸ್ಥಿತರಿದ್ದರು.

error: Content is protected !!