ದೇವಿಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಸನ್ಮಾನ ಸ್ವೀಕರಿಸಿದ ಜಗಳೂರು ಶಾಸಕ ಬಿ.ದೇವೇಂದ್ರಪ್ಪ
ಜಗಳೂರು, ಅ.10- ಕ್ಷೇತ್ರದಲ್ಲಿ ಸಾಮರಸ್ಯದ ಬದುಕು ಹಾಗೂ ಸರ್ವತೋಮುಖ ಅಭಿವೃದ್ಧಿ ನನ್ನ ಸಂಕಲ್ಪ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ದೇವಿಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಇಂದು ಹಮ್ಮಿಕೊಂಡಿದ್ದ ನೂತನ ಶಾಸಕರಿಗೆ ಅಭಿನಂದನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಸರ್ಕಾರದಿಂದ ವೇತನ ಪಡೆಯುವ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಸಾರ್ವಜನಿಕರಿಗೆ ಅಲೆದಾಡಿಸಿದರೆ ನಾನು ಅವರಿಗೆ ಖಡಕ್ ಎಚ್ಚರಿಕೆ ನೀಡುವೆ. ನಾನು ಭಾವನಾತ್ಮಕ ಜೀವಿ. ಜನರನ್ನು ಅಲೆದಾಡಿಸಿದರೆ ಸಹಿಸಲಾರೆ ಎಂದರು.
ದೇವಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ನನಗೆ ಅದ್ಧೂರಿ ಸ್ವಾಗತದೊಂದಿಗೆ ವಿಜೃಂಭಿ ಸಿದ್ದು, ಹರ್ಷತಂದಿದೆ. ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆಗಳಾದ ಶಾಲಾ ಕಟ್ಟಡ, ರಸ್ತೆ, ಸಾರಿಗೆ ಸೌಕರ್ಯ, ಕಲ್ಯಾಣಮಂಟಪ, ಹೈಟೆಕ್ ಶೌಚಾ ಲಯ, ನೀರು, ಸೂರು ಸೇರಿದಂತೆ ಸೌಲಭ್ಯಗಳನ್ನು ಹಂತಹಂತವಾಗಿ ನನ್ನ ಆಡಳಿತಾವಧಿಯಲ್ಲಿ ಈಡೇರಿಸುವೆ ಎಂದು ಹೇಳಿದರು.
ನಾನು ಕಾಂಗ್ರೆಸ್ ಸೇರಲು ರವಿಚಂದ್ರ ಕಾರಣ: ಜೆಡಿಎಸ್ ಪಕ್ಷ ತೊರೆದು ಉಸ್ತುವಾರಿ ಸಚಿವರಾದ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಪಕ್ಷದ ಬಲವರ್ಧನೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದು ಬಸವಾಪುರ ರವಿಯಣ್ಣ. ಅಂದಿನಿಂದ ಪಕ್ಷ ನಿಷ್ಠೆಯಿಂದ ಶ್ರಮಿಸಿದ ಫಲವಾಗಿ ದೈವಾ ನುಗ್ರಹದಿಂದ ಇಂದು ಶಾಸಕನಾಗಿದ್ದೇನೆ. ವ್ಯಕ್ತಿಗೆ ಒಳ್ಳೆಯದು ಬಯಸಿದವರನ್ನು ಸ್ಮರಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
ನೀರಾವರಿ ನಾಡಾಗಲಿದೆ: 57 ಕೆರೆ ತುಂಬಿಸುವ ಯೋಜನೆಯಡಿ 11 ಕೆರೆಗಳಿಗೆ ನೀರು ಬಂದಿದ್ದು, 5 ಕಿ.ಮೀ ದೂರ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡು ಎಲ್ಲಾ ಕೆರೆಗಳು ಭರ್ತಿಯಾಗಲಿವೆ. ಅಲ್ಲದೇ, ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡಿದೆ. ಬರದ ನಾಡು ನೀರಾವರಿ ನಾಡಾಗಲಿದೆ ಎಂದು ಶಾಸಕರು ತಿಳಿಸಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ರಾಜ್ಯದಲ್ಲಿ ಬರಗಾಲ ದೊಡ್ಡ ಸವಾಲಾಗಿ ಎದುರಾಗಿದೆ. ಹಿಂಗಾರು ಮಳೆಯಾದರೂ ರೈತರನ್ನು ಕೈ ಹಿಡಿಯಬೇಕಿದೆ. 10 ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ನರೇಗಾ ಯೋಜನೆಯನ್ನು ಮಾನದಂಡಗಳೊಂದಿಗೆ ಸಂಪೂರ್ಣ ಕುಂಠಿತಗೊಳಿಸಿದೆ. ಸುಳ್ಳಿನ ಪ್ರಚಾರದ ಅಬ್ಬರದಲ್ಲಿ ರಾಜ್ಯದಲ್ಲಿನ ಕೂಲಿಕಾರ್ಮಿಕ, ರೈತರನ್ನು, ಯುವಕರನ್ನು ಕಂಗಾಲುಗೊಳಿಸಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷ ಕೊಟ್ಟ ಮಾತಿನಂತೆ ಆರ್ಥಿಕ ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡಿಕೊಂಡು 76000 ಕೋಟಿ ತೆರಿಗೆ ಹಣ ಸಂಗ್ರಹಿಸಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರಮಾಡುತ್ತಿದ್ದ ಬಿಜೆಪಿ ಪಕ್ಷದವರಿಗೆ ತಕ್ಕ ಪಾಠ ಕಲಿಸಿದೆ ಎಂದು ತಿಳಿಸಿದರು.
ಮುಖಂಡ ಬಸವಾಪುರ ರವಿಚಂದ್ರ ಮಾತನಾಡಿ, 2018 ರಿಂದ ದೇವಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅಭಿವೃದ್ದಿ ಮರೀಚಿಕೆಯಾಗಿದೆ. ಗ್ರಾಮ ಪಂಚಾಯಿತಿ ಅನುದಾನ ಮಾತ್ರ ಬಳಕೆಯಾಗಿದೆ. ಬಡ ಕೂಲಿ ಕಾರ್ಮಿಕರಿಗೆ ವರದಾನವಾಗಿದ್ದ ನರೇಗಾ ಯೋಜನೆಯನ್ನು ಹಿಂದಿನ ಶಾಸಕರು ಸ್ಥಗಿತಗೊಳಿಸಿದ್ದರು ಎಂದು ದೂರಿದರು.
ಜೆಡಿಎಸ್ ಮುಖಂಡರು ಸುಳ್ಳಿನ ರಾಜಕಾರಣ ಮಾಡುವುದಲ್ಲದೆ, ಸೊಸೈಟಿಯಲ್ಲಿ ಬೇನಾಮಿ ಸಾಲ ಸೃಷ್ಠಿಸಿ ಶೇ. 12 ರಷ್ಟು ಬಡ್ಡಿಯೊಂದಿಗೆ ನವೀಕರಣಗೊಳಿಸಿ ಅವ್ಯವಹಾರ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸೇಬುಹಣ್ಣಿನ ಮಾಲೆಹಾಕಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಮೆದಗಿನಕೆರೆ ವೀರಣ್ಣ, ವಕೀಲ ಪ್ರಕಾಶ್, ರುದ್ರಸ್ವಾಮಿ, ರಾಮರೆಡ್ಡಿ, ಸಣ್ಣಸೂರಜ್ಜ,ಬಿ. ಮಹೇಶ್ವರಪ್ಪ, ಗೌಸ್ ಪೀರ್, ಪಲ್ಲಾಗಟ್ಟೆ ಶೇಖರಪ್ಪ, ರುದ್ರೇಶ್, ಗ್ರಾ.ಪಂ.ಸದಸ್ಯರಾದ ನಾಗರಾಜ್, ಕರಿಬಸಮ್ಮ, ಚೌಡಮ್ಮ, ತಿಪ್ಪಕ್ಕ, ಗುರುಸ್ವಾಮಿ ಮುಂತಾದವರು ಇದ್ದರು.