ಬಡ ವಿದ್ಯಾರ್ಥಿಗಳ‌ ಶೈಕ್ಷಣಿಕ ಪ್ರೋತ್ಸಾಹಕ್ಕೆ ಬದ್ಧ

ಬಡ ವಿದ್ಯಾರ್ಥಿಗಳ‌ ಶೈಕ್ಷಣಿಕ ಪ್ರೋತ್ಸಾಹಕ್ಕೆ ಬದ್ಧ

ಜಗಳೂರು ಶಾಸಕ ಬಿ.ದೇವೇಂದ್ರಪ್ಪ

ಜಗಳೂರು, ಅ.10- ತಾಲ್ಲೂಕಿನಲ್ಲಿ ಬಡ ಮಕ್ಕಳ ಶಿಕ್ಷಣದ ಪರವಾಗಿರುವ ಸಂಘ, ಸಂಸ್ಥೆಗಳಿಗೆ ಕೈಜೋಡಿಸುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.

ಪಟ್ಟಣದ ಪ್ರೇರಣಾ ಸಮಾಜ ಸೇವಾ ಸಂಸ್ಥೆಯ ಸಭಾಂಗಣದಲ್ಲಿ ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್ (ದಾವಣಗೆರೆ), ಬ್ರೆಡ್ ಸಂಸ್ಥೆ (ಬೆಂಗಳೂರು), ಸಿಎಸ್ ಯೋಜನೆ ಜಗಳೂರು, ಶಾಲಾ ಮತ್ತು ಸಾಕ್ಷರತಾ ಇಲಾಖೆ  ಇವರುಗಳ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಮಕ್ಕಳ ಹಕ್ಕುಗಳ ಕ್ಲಬ್ ನ ಸಮಾವೇಶ ಹಾಗೂ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಕಡುಬಡತನ ಕುಟುಂಬದಲ್ಲಿ ಜನಿಸಿ ಶಿಕ್ಷಣಕ್ಕೆ ಹಂಬಲಿಸುತ್ತಿರುವ  ಮಕ್ಕಳನ್ನು ಗುರುತಿಸಿ ವಿವಿಧ  ಸಂಘ, ಸಂಸ್ಥೆಗಳು ಮುಖ್ಯವಾಹಿನಿಗೆ ತರಬೇಕಿದೆ. ನಾನೂ ಕೂಡ ಕುಗ್ರಾಮದಲ್ಲಿ ಜನಿಸಿ ಸಂಕಷ್ಟದ ಮಧ್ಯೆ ಶಿಕ್ಷಣ ಪಡೆದ ಫಲವಾಗಿ ಇಂದು ಶಾಸಕನಾಗಿರುವೆ. ಬಡಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಪರಿಕರಗಳನ್ನು, ಸಮವಸ್ತ್ರವನ್ನು  ನನ್ನ ವೈಯಕ್ತಿಕವಾಗಿ ವಿತರಿಸುವೆ ಎಂದು ತಿಳಿಸಿದರು.

ವಿದ್ಯಾರ್ಥಿ ದೆಸೆಯಿಂದಲೇ ಶಿಕ್ಷಕರ ಮಾರ್ಗ ದರ್ಶನದಿಂದ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯ ವಾಗಿ ಭಾಗವಹಿಸಿ  ನೈತಿಕ ಶಿಕ್ಷಣ, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ದೇಶದ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.

ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ `ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ’ ಎಂಬ ಹಾಡು, ಬಸವಣ್ಣ, ಸರ್ವಜ್ಞರ ವಚನ, ಶ್ಲೋಕಗಳೊಂದಿಗೆ ಮಕ್ಕಳಿಗೆ 40 ನಿಮಿಷಗಳ ಕಾಲ ನೈತಿಕ ಶಿಕ್ಷಣದ ಪಾಠ ಹೇಳಿ, ಮಕ್ಕಳಲ್ಲಿ ಸ್ಪೂರ್ತಿ ತುಂಬಿದರು.

ಬಿಇಓ‌ ಹಾಲಮೂರ್ತಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳಿಗೆ ಶಾಲಾ ಅಂಗಳದಲ್ಲಿ ನಡೆಯುವ   ಪಠ್ಯೇತರ ಚಟುವಟಿಕೆಗಳು ಸೂಕ್ತ ವೇದಿಕೆಯಾಗುತ್ತವೆ. ವಿದ್ಯಾರ್ಥಿಗಳ ಪ್ರತಿಭೆ ಕಮರದಂತೆ ಪ್ರೊತ್ಸಾಹಿಸಬೇಕು ಎಂದರು.

ಡಾನ್ ಬಾಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಜೇಕಬ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಗೌರವ ಮನ್ನಣೆಗಾಗಿ ಕಲಿಕಾ ಚಟುವಟಿಕೆಗಳ ಪ್ರಬುದ್ಧತೆಗಾಗಿ ದಸರಾ ರಜೆ ಅವಧಿಯಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜ್ಞಾನ ತರಂಗಿಣಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಎಸ್.ಅರವಿಂದನ್ ಮಾತನಾಡಿ, ಮಕ್ಕಳ‌ ಹಕ್ಕುಗಳು, ಮಕ್ಕಳ ಲಾಲನೆ , ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ನಿಷೇಧ, ಕಡ್ಡಾಯ ಮತ್ತು ಉಚಿತ ಶಿಕ್ಷಣ,ಬಾಲಕಾರ್ಮಿಕ ನಿಷೇಧ, ಮಕ್ಕಳ ರಕ್ಷಣಾ ಕಾಯ್ದೆಗಳ ಸಮಗ್ರ ಮಾಹಿತಿಗಳಿಗಾಗಿ  ಇಂತಹ ಶಿಬಿರಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರೇರಣಾ ಟ್ರಸ್ಟ್ ನ ಫಾದರ್ ಸಿಲ್ವೆಸ್ಟರ್,ಡಾನ್ ಬಾಸ್ಕೋ ಶಾಲೆಯ ವಿದೇಶಿ ಯಾತ್ರಿಕ ಜಾನಾ, ದುರುಗಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತೇಶ್, ಬಿಆರ್ ಸಿ ಡಿಡಿ ಹಾಲಪ್ಪ, ದೈಹಿಕ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ, ಫಾದರ್ ಎಜೆ, ರೊನಾಲ್ಡ್, ಪಿಎಸ್ ಐ ಸಾಗರ್  ಮುಂತಾದವರು ಇದ್ದರು.

error: Content is protected !!