ಹೂವಿನಹಡಗಲಿ ವಲಯ ಆರ್‍ಎಫ್‍ಓ ಎ.ರೇಣುಕಮ್ಮಗೆ ಮುಖ್ಯಮಂತ್ರಿ ಪದಕ

ಹೂವಿನಹಡಗಲಿ ವಲಯ  ಆರ್‍ಎಫ್‍ಓ ಎ.ರೇಣುಕಮ್ಮಗೆ ಮುಖ್ಯಮಂತ್ರಿ ಪದಕ

ಹರಪನಹಳ್ಳಿ, ಅ.5- ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ, ರಾಜ್ಯ ಸರ್ಕಾರ ತಾಲ್ಲೂಕು ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ ಅವರ ಧರ್ಮಪತ್ನಿ ಹಡಗಲಿ ವಲಯ ಅರಣ್ಯಾಧಿಕಾರಿ ರೇಣುಕಮ್ಮ ಎ. ಅವರಿಗೆ 2021ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದೆ.

ಎ.ರೇಣುಕಮ್ಮ ಅವರು ಸದ್ಯ ಹಡಗಲಿ ತಾಲ್ಲೂಕಿನ ವಲಯ ಅರಣ್ಯಾಧಿಕಾರಿಯಾಗಿದ್ದಾರೆ. ಈ ಹಿಂದೆ ಇವರು ಕೂಡ್ಲಿಗಿ ತಾಲ್ಲೂಕಿನ ವಲಯ ಅರಣ್ಯಾಧಿಕಾರಿಯಾಗಿದ್ದಾಗ ಅಲ್ಲಿ ಅರಣ್ಯ ಪ್ರದೇಶದಲ್ಲಿ ಮರಳು ದಂಧೆ ಮತ್ತು ಅಕ್ರಮ ಕಡಿತಲೆ ತಡೆದು ಒಟ್ಟು 157 ಅರಣ್ಯ ಪ್ರಕರಣಗಳನ್ನು ದಾಖಲಿಸಿ, ಅದರಲ್ಲಿ 92 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ.

ಕೂಡ್ಲಿಗಿ ವಲಯದಲ್ಲಿದ್ದ ವಿದ್ಯುತ್ ಸಮಸ್ಯೆಯನ್ನು ಅಧಿಕಾರಿ ಗಳೊಂದಿಗೆ ಮಾತನಾಡಿ, ಬೆಳಗಿನ ಸಮಯ 6 ಗಂಟೆ ಬದಲಾಯಿಸಿ ರೈತರ ಮೇಲೆ ಆಗುತ್ತಿದ್ದ ಕರಡಿ ದಾಳಿಯನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇದಲ್ಲದೇ ಕೂಡ್ಲಿಗಿ ಅರಣ್ಯ ವಲಯದಲ್ಲಿ ಅತಿಕ್ರಮಣವನ್ನು ತೆರವುಗೊಳಿಸಿ ಉತ್ತಮ ನೆಡುತೋಪು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಕೂಡ್ಲಿಗಿ ವಲಯದ ಪ್ರತಿಯೊಂದು ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡುವ ಮೂಲಕ ಕೂಡ್ಲಿಗಿ ವಲಯದಲ್ಲಿ ದಿಟ್ಟತನದಿಂದ ಕಾರ್ಯನಿರ್ವಹಿಸಿದ್ದಕ್ಕಾಗಿ ಅಂದಿನ ಶಾಸಕರು `ಒನಕೆ ಓಬವ್ವ’ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದ್ದರು.

error: Content is protected !!