ಜಗಳೂರು ಜನರ ನನಸಾದ ಅರ್ಧ ಶತಮಾನದ ‘ಜ್ಞಾನ ಭಂಡಾರ’ದ ಕನಸು…

ಜಗಳೂರು ಜನರ ನನಸಾದ ಅರ್ಧ ಶತಮಾನದ ‘ಜ್ಞಾನ ಭಂಡಾರ’ದ ಕನಸು…

ಜಗಳೂರು ಎಂದರೇನೇ ಬರ.  ಹಿಂದುಳಿದ ತಾಲ್ಲೂಕು ಎಂಬ ಹಣೆ ಪಟ್ಟಿಯನ್ನು ಹಲವು ದಶಕಗಳ ಕಾಲ ಹೊತ್ತು ಮೆರೆದವರು ನಾವು. ಉಣಲು, ಉಡಲು ಇರುವ ಬಡತನದ ಜೊತೆಗೆ ನಾವು ಬದಲಾಗಬೇಕು ಎನ್ನುವ ಭಾವನೆಯೇ ಇಲ್ಲದ ಮಾನಸಿಕ ಬರ ನಮ್ಮನ್ನು ಇದುವರೆಗೆ ಕಾಡಿದಂತೆ ಕಾಣು ತ್ತಿದೆ. ಅದೃಷ್ಟವಶಾತ್ ಈಗ ಬದಲಾ ವಣೆಯ ಗಾಳಿ ಬೀಸುವಂತಾಗಿ ಒಂದಿಷ್ಟು ಆಶಾ ಭಾವನೆ, ಹೊಸತನ, ಹೊಸ ಆಶಾ ಕಿರಣಗಳು ಮೂಡುವಂತಾಗಿದೆ.

1965ರ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಪ್ರಕಾರ 1973ರಲ್ಲಿಯೇ ಜಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭವಾಗುತ್ತದೆ. 1975ರಲ್ಲಿ ನಾನು ಜಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿ. ಹಳ್ಳಿ ಮುಕ್ಕನಾದ ನನಗೆ ಪಠ್ಯಪುಸ್ತಕ ಗಳನ್ನು ಕೊಳ್ಳಲಾಗದ ಪರಿಸ್ಥಿತಿ. ಆಗ ನನ್ನ ಓದಿನ ದಾಹಕ್ಕೆ ತಂಪು ನೀಡಿದ ಸ್ಥಳವೆಂದರೆ ಜಗಳೂರಿನ ಗ್ರಂಥಾಲಯ. ಕಳೆದ 50 ವರ್ಷಗಳಲ್ಲಿ ನನ್ನಂತಹ ಲಕ್ಷಾಂತರ ಜನ ವಿದ್ಯಾರ್ಥಿಗಳು, ಆಸಕ್ತರು ಇದರ ಪ್ರಯೋಜನ ಪಡೆದಿರಬಹುದು.

ಎಲ್ಲವೂ ಸರಿ. ಆದರೆ ಒಂದು ವಿಪ ರ್ಯಾಸವೇನು ಗೊತ್ತೇ? ಗ್ರಂಥಾಲಯಕ್ಕೆ ಸ್ವಂತ ಅಥವಾ ಸೂಕ್ತ ಕಟ್ಟಡವಿಲ್ಲದೆ  ಅದು ಮೂಲೆ ಮುಕ್ಕಟ್ಟಿನಲ್ಲಿಯೇ  ನೆಲೆಸಿ ಅರೆ ಜೀವದಲ್ಲಿಯೇ  ಕೊಸರಿಕೊಂಡು ಸಾಗಿ ಬಂದದ್ದು!  ಅದರ ಪರಿಣಾಮ ಗ್ರಂಥಾಲ ಯದಲ್ಲಿ ಪುಸ್ತಕಗಳ ಇಳಿಕೆ ಮತ್ತು ಇರುವ ಗ್ರಂಥಗಳು ಸುಲಲಿತವಾಗಿ ಓದುಗರಿಗೆ ದೊರಕದೇ ಹೋದದ್ದು. ಗ್ರಹಣ ಹಿಡಿದ ಗ್ರಂಥಾಲಯಕ್ಕೆ ಪುನಶ್ಚೇತನ ನೀಡಬೇಕೆಂಬ ಸಂಕಲ್ಪ ದಶಕಗಳು ಸಂದರೂ ಕೂಡ ಯಾರಿಗೂ ಬಾರದೆ ಹೋಗಿದ್ದು ಮಾತ್ರ ನೋವಿನ ಸಂಗತಿ.

ಈ ಸಮಸ್ಯೆಗೆ ಸಂಘಟನಾತ್ಮಕ ಪರಿಹಾರ ಕಂಡುಕೊಳ್ಳಬೇಕೆಂದು ನಿರ್ಧರಿಸಿದ ನಾನು ಇಲ್ಲಿನ ಎಲ್ಲಾ ಸಂಘಟನೆಗಳ ಜೊತೆ ಮಾತನಾಡಿದ್ದರ  ಫಲವಾಗಿ 2022ರ ಜುಲೈ 18ರಂದು ನಾವು ಸುಮಾರು 10 ಸಂಘಟನೆಗಳು ಒಗ್ಗೂಡಿ ಪಟ್ಟಣ ಪಂಚಾಯಿತಿಗೆ ಗ್ರಂಥಾಲಯಕ್ಕೆ ಸೂಕ್ತ ಕಟ್ಟಡ ಒದಗಿಸುವಂತೆ ಅಧಿಕೃತ ಮನವಿ ಮಾಡಿದೆವು. ನಾನು ಈ ಮನವಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳಿಗೆ, ಅಂದಿನ ಶಾಸಕರಿಗೆ, ಸಂಸದರಿಗೆ, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಹಾಗೂ ಪ್ರತಿ ಸದಸ್ಯರಿಗೂ ಪತ್ರಗಳನ್ನು ಬರೆದು ಒತ್ತಾಯಿಸಿದೆ.  ಫಲಿತಾಂಶ ಮಾತ್ರ ಶೂನ್ಯ.

ಜಗಳೂರು ಬದಲಾಗದು ಎಂದು ಚಿಂತಿಸುವ ಸಂದರ್ಭದಲ್ಲಿಯೇ ವಿಧಾನ ಸಭಾ ಚುನಾವಣೆಗಳು ಬಂದು ನಮ್ಮದೇ ನೆಲದ ಚಿಕ್ಕಮ್ಮನ ಹಟ್ಟಿ  ಬಿ. ದೇವೇಂ ದ್ರಪ್ಪನವರು ಶಾಸಕರಾಗಿ ಆಯ್ಕೆಯಾದರು. ಶಾಸಕರನ್ನು ಅಭಿನಂದಿಸಿ ಬರುವ ಎಂದು ನಾವು ಒಂದಿಷ್ಟು  ಸಾಹಿತ್ಯ, ಸಂಘಟನೆಗಳ  ಗೆಳೆಯರು ಜೂನ್ 13 ರಂದು ಅವರನ್ನು ಪ್ರವಾಸಿ ಮಂದಿರದಲ್ಲಿ  ಭೇಟಿಯಾದೆವು.  ಸುಮಾರು ಒಂದುವರೆ ಗಂಟೆಗಳ ಕಾಲ ಸಾಹಿತ್ಯಿಕ ವಿಷಯಗಳನ್ನು ಮಾತನಾಡಿ ದೇವೇಂದ್ರಪ್ಪನವರು ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡಿದರಲ್ಲದೆ ಸ್ವಯಂ ಸ್ಫೂರ್ತಿಯಿಂದ ಗ್ರಂಥಾಲಯಕ್ಕೆ ನಗರದ ಹೃದಯ ಭಾಗದಲ್ಲಿರುವ ಪಟ್ಟಣ ಪಂಚಾ ಯಿತಿಯ ಮಹಡಿ ಕಟ್ಟಡವನ್ನು ಒದಗಿಸಿ ಕೊಡುವುದಾಗಿ ವಾಗ್ದಾನ ಮಾಡಿದರು. 

ಐದು ದಶಕಗಳ ಸಮಸ್ಯೆಯ ಪರಿಹಾರಕ್ಕೆ ಅವರು ತೆಗೆದುಕೊಂಡಿದ್ದು ಕೇವಲ ಐದು ನಿಮಿಷ ಮಾತ್ರ.  ಅಂದು ನಮಗೆಲ್ಲ ಆದ ಸಂತೋಷ ಅಷ್ಟಿಷ್ಟಲ್ಲ. ಶಾಸಕರು ತಕ್ಷಣ ಕಾರ್ಯೋನ್ಮುಖರಾಗಿ ಕಾನೂನಾತ್ಮಕ ಅಡೆತಡೆಗಳನ್ನು ಬಗೆಹರಿಸಿ ಜುಲೈ 2 ರಂದು ಕಟ್ಟಡವನ್ನು ಗ್ರಂಥಾಲಯಕ್ಕೆ ಹಸ್ತಾಂತರಿಸುವ ಕೆಲಸ ಮಾಡಿದರು.  ಆ ಕಟ್ಟಡ ಆಧುನಿಕ ಗ್ರಂಥಾಲಯದ ಎಲ್ಲ ಸೌಲಭ್ಯಗಳೊಂದಿಗೆ ಈಗ ನಳನಳಿಸುವಂತಾಗಿದ್ದು ಶಿಕ್ಷಕರ ದಿನಾಚರಣೆ  ದಿನ.  

ಜಗಳೂರಿನ ಗ್ರಂಥಾಲಯದಲ್ಲಿ ಸುಮಾರು 22 ಸಾವಿರ ಪುಸ್ತಕಗಳಿವೆ, ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಸಾಹಿತ್ಯದ ಎಲ್ಲಾ ಪ್ರಕಾರಗಳಾದ ಜಾನಪದ, ಕಥೆ, ಕವನ, ಲೇಖನ, ಕಾದಂಬರಿ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ವೈಚಾರಿಕ ಸಾಹಿತ್ಯ, ವಚನ ಸಾಹಿತ್ಯ, ಧರ್ಮ ಗ್ರಂಥಗಳಲ್ಲದೆ ಯುವ ಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೂಡಲು ಬೇಕಾದ ಎಲ್ಲಾ ಪುಸ್ತಕಗಳು ಲಭ್ಯವಿವೆ. ವಿಶಾಲವಾದ ಕಟ್ಟಡದಲ್ಲಿ ಉತ್ತಮ ಪರಿಸರದಲ್ಲಿ, ಗ್ರಂಥಾಲಯ ಮೈದಾಳಿದೆ. ಚಿತ್ರಕಲೆಯ ಮೂಲಕ ಬಿಡಿಸಿರುವ ಗೋಡೆ ಚಿತ್ರಗಳು  ಮಹನೀಯರ ಭಾವಚಿತ್ರಗಳು ಎಲ್ಲರ ಗಮನ ಸೆಳೆದಿವೆ.  ವಾಚನಾಲಯಕ್ಕೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.  ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲಾಗಿದ್ದು ಅದರಲ್ಲಿ 10 ಲಕ್ಷ ಪುಸ್ತಕಗಳನ್ನು ಆಸಕ್ತರು ಉಚಿತವಾಗಿ ಓದಬಹುದಾಗಿದೆ. 

ಜಗಳೂರಿನಲ್ಲಿ ಗ್ರಂಥಾಲಯ ಆಧು ನೀಕರಣ ಗೊಳ್ಳಲು ಗ್ರಂಥಾಲಯ ಅಧಿ ಕಾರಿ   ಎಚ್. ಪಿ. ಶರಣಪ್ಪ, ಜಿಲ್ಲಾ ಉಪ ನಿರ್ದೇಶಕ  ಪಿ. ಆರ್. ತಿಪ್ಪೇಸ್ವಾಮಿ  ಶ್ರಮ ಅಪಾರವಾದದ್ದು. ಪಟ್ಟಣ ಪಂಚಾಯಿತಿ, ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಗ್ರಂಥಾ ಲಯ ಇಲಾಖೆ,   ಶಾಸಕರು ,ಸಂಘಟನೆಗಳ ಆಶಯಕ್ಕೆ  ತಕ್ಷಣ  ಸ್ಪಂದಿಸಿ ನೆರವಾದುದಕ್ಕೆ  ಅವರೆಲ್ಲರಿಗೆ ಕೃತಜ್ಞತೆ ಸಲ್ಲುತ್ತದೆ. ಅಂತೆಯೇ ಎಲ್ಲ  ಸಂಘಟನೆಗಳಿಗೆ ಅಭಿನಂದನೆಗಳನ್ನು ಹೇಳಬೇಕಾಗುತ್ತದೆ.


ಎನ್ ಟಿ. ಎರ್ರಿಸ್ವಾಮಿ, ನಿವೃತ್ತ ಕೆನರಾ ಬ್ಯಾಂಕ್ ಡಿ.ಎಂ.,  ಜಗಳೂರು.  

error: Content is protected !!