ಹರಿಹರ, ಸೆ. 28 – ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ರಾಜ್ಯದಾದ್ಯಂತ ವಿವಿಧ ಸಂಘಟನೆಯವರು ಕರ್ನಾಟಕ ಬಂದ್ಗೆ ಕರೆ ಕೊಟ್ಟಿರುವುದನ್ನು ಬೆಂಬಲಿಸಿ ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹರಿಹರ ಬಂದ್ ಮಾಡಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿಯನ್ನು ಅರ್ಪಿಸಲಾಗುತ್ತದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ, ಫುಟ್ ಪಾತ್ ವ್ಯಾಪಾರಿಗಳ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಜಯ ಕರ್ನಾಟಕ ಸಂಘಟನೆ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಹೋಟೆಲ್ ಮತ್ತು ಬೇಕರಿ ಉತ್ಪನ್ನಗಳ ಸಂಘ, ಡಿಎಸ್ಎಸ್ ಸಂಘಟನೆಗಳು ಸೇರಿದಂತೆ 15 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲವನ್ನು ನೀಡಿವೆ.
ನಗರದ ಎಲ್ಲಾ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಬಂದ್ ಗೆ ಬೆಂಬಲ ನೀಡುವಂತೆ ಕರೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ದೂಡಾ ಮಾಜಿ ಸದಸ್ಯ ಹೆಚ್. ನಿಜಗುಣ, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಸಿದ್ದಲಿಂಗಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ, ಕರ್ನಾಟಕ ರಕ್ಷಣಾ ವೇದಿಕೆಯ ರಮೇಶ್ ಮಾನೆ, ಪ್ರೀತಂ ಬಾಬು, ಇಲಿಯಾಸ್ ಆಹ್ಮದ್ ಜಯ ಕರ್ನಾಟಕ ಸಂಘಟನೆಯ ಗೋವಿಂದ್, ಮಂಜುನಾಥ್ ಶಬರೀಶ್, ಡಿಎಸ್ಎಸ್ ಸಂಘಟನೆಯ ಶ್ರೀನಿವಾಸ್, ಶ್ರೀನಿವಾಸ್, ಶಶಿನಾಯ್ಕ್, ಕಾಳಿ ಪ್ರಸಾದ್, ಪ್ರಕಾಶ್ ಇತರರು ಹಾಜರಿದ್ದರು.