ಭದ್ರಾ ಪದವಿ ಕಾಲೇಜಿನ ಸಮಾರಂಭದಲ್ಲಿ ಡಾ. ಕೆ.ಎಸ್.ಶ್ರೀಧರ್
ದಾವಣಗೆರೆ, ಸೆ. 26- ಇಂದಿನ ತಂತ್ರ ಜ್ಞಾನದ ಆವಿಷ್ಕಾರ ಯುಗದಲ್ಲಿ ಆಧುನಿಕ ಬದುಕಿನ ಶೈಲಿಯೇ ಬದಲಾಗಿದೆ. ಅದ ರಲ್ಲೂ ಚಾಟ್ ಜಿ.ಪಿ.ಟಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿಯಂತಹ ನೂತನ ತಂತ್ರಜ್ಞಾನ ದಿಂದಾಗಿ ಇಂದು ಸಾಕಷ್ಟು ಜನರು ನಿರುದ್ಯೋ ಗಿಗಳಾಗಿದ್ದಾರೆ. ಮಾನವನ ವ್ಯಕ್ತಿತ್ವಗಳು ಕಳಚಿ ಬೀಳುತ್ತಿವೆ. ಇಂತಹ ಸಂದರ್ಭದಲ್ಲಿ ಪಡೆದ ಜ್ಞಾನ ಹೊಸ ಆವಿಷ್ಕಾರ ಹಾಗೂ ಅನ್ವೇಷಣೆಗಳತ್ತ ಸಾಗಬೇಕಾಗಿದೆ. ಹಾಗೆಯೇ ಸಾಧಕರಾಗಲು ಪ್ರತಿಯೊಬ್ಬರ ವೈಯಕ್ತಿಕ ಭಿನ್ನತೆಗಳನ್ನು ಅರ್ಥ ಮಾಡಿಕೊಂಡಾಗ ಯಶಸ್ಸು ಗಳಿಸಲು ಸಾಧ್ಯ ಎಂದು ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಛೇರ್ಮನ್ ಪ್ರೊ. ಡಾ. ಕೆ.ಎಸ್. ಶ್ರೀಧರ್ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭದ್ರಾ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಭದ್ರಾ ಸ್ನಾತಕೋತ್ತರ ಕೇಂದ್ರದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಬದುಕಿನ ಏರು-ಪೇರುಗಳನ್ನು ಎದುರಿಸಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಜಗತ್ತಿನ ಅತಿದೊಡ್ಡ ಸಂಪತ್ತು ಎಂದರೆ ಬುದ್ದಿವಂತಿಕೆ ಹಾಗೂ ಅತಿ ದೊಡ್ಡ ಆಯುಧ ಎಂದರೆ ತಾಳ್ಮೆ, ಜ್ಞಾನವೆಂಬುದೇ ಶಕ್ತಿ ಎಂದರು. ಇವತ್ತಿನ ಕಂಪ್ಯೂಟರ್ ಹಾಗೂ ತಂತ್ರಜ್ಞಾನ ಸಮಾಜಕ್ಕೆ ಬೇಕಾಗುವ ಅಂಶಗಳನ್ನು ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕರು ದೇಶಕ್ಕೆ ಏನಾದರೂ ಸೇವೆಯನ್ನು ಸಲ್ಲಿಸಬೇಕೆಂದು ಶ್ರೀಧರ್ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರೊ.ಸಿ.ಹೆಚ್. ಮುರುಗೇಂದ್ರಪ್ಪ ಮಾತನಾಡಿ, ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿ ಯನ್ನು ಅರಿತು ಬದುಕಬೇಕು ಹಾಗೂ ಸಾಮಾಜಿಕ ಕಾಳಜಿ, ಸಾಮಾಜಿಕ ಬದ್ಧತೆ ಇರಬೇಕೆಂದರು. ವಿದ್ಯಾರ್ಥಿಗಳಲ್ಲಿ ಸೃಜನ ಶೀಲ ಮನೋ ಭಾವನೆ ಅತ್ಯವಶ್ಯಕವೆಂದು ಹೇಳುವುದರ ಮೂಲಕ ಪ್ರತಿಯೊಬ್ಬ ವಿದ್ಯಾ ರ್ಥಿಯಿಂದ ಉತ್ತಮ ಸಂದೇಶ ಸಮಾಜಕ್ಕೆ ಹೋಗಬೇಕು ಎಂದು ಕರೆ ನೀಡಿದರು.
ಭದ್ರಾ ಪದವಿ ಕಾಲೇಜು ಹಾಗೂ ಭದ್ರಾ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಪ್ರೊ. ಟಿ. ಮುರುಗೇಶ್ ಮಾತನಾಡಿ, ಗುರು ಇಲ್ಲದೆ ಗುರಿ ಸಾಧಿಸಲು ಸಾಧ್ಯವಿಲ್ಲ, ನಡೆ-ನುಡಿ ಸಂಸ್ಕೃತಿ ಪರಂಪರೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದ್ದರೂ ಪ್ರಸ್ತುತ ದಿನಗಳಲ್ಲಿ ಗುರುವಿಗೆ ಸಿಕ್ಕ ಗೌರವ, ಘನತೆಗಳು ಕ್ಷೀಣಿಸುತ್ತಿರುವುದು ಆಘಾತ ಕಾರಿ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು.
ಭದ್ರಾ ಎಜುಕೇಷನ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಸಂಕೇತ್ ಉಪಸ್ಥಿತರಿದ್ದರು. ಉಪನ್ಯಾಸಕ ಆರ್.ಕೆ. ಬಸವನಗೌಡ ಅವರು ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದಿಸಿದರು.
ಭಾಗ್ಯ ಸ್ವಾಗತಿಸಿದರು. ಕೆ.ಆರ್. ಕವನ ನಿರೂಪಿಸಿದರು. ನಮಿತಾ ವಂದಿಸಿದರು.