ಜಗಳೂರು, ಸೆ.22- ತಾಲ್ಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬಂಟನಹಳ್ಳಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ಗಳನ್ನು ಗ್ರಾಮಸ್ಥರು ವಶಪಡಿಸಿಕೊಂಡು ತಹಶೀಲ್ದಾರ್ ಗೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ಚಿಕ್ಕಬಂಟನಹಳ್ಳಿ ಗ್ರಾಮದ ಬಳಿ ಇರುವ ಹಳ್ಳದಲ್ಲಿ ಭೀಮಕ್ಕ ಹಂದಿ ಹುಳಿಯಾರ್ ಬಸಪ್ಪ ಎಂಬುವವರಿಗೆ ಸೇರಿದ ಸರ್ವೆ ನಂಬರ್ 9/1ಎ ಮತ್ತು 9/1ಎ ಸೇರಿದ 3ಎಕರೆ ಮತ್ತು 4 ಎಕರೆ ಜಮೀನುಗಳ ಮಾರ್ಗದಲ್ಲಿ ಕಳೆದ ವಾರದಿಂದ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿರುವುದನ್ನು ಕಂಡ ಗ್ರಾಮಸ್ಥರು ಮಧ್ಯರಾತ್ರಿ ಮರಳು ತುಂಬಿದ ಟ್ರ್ಯಾಕ್ಟರ್ಗಳನ್ನು ತಡೆದು ತಹಶೀಲ್ದಾರ್ ಗೆ ಒಪ್ಪಿಸಿದ್ದಾರೆ.
ಸುಮಾರು ದಿನಗಳಿಂದ ಮರಳು ಸಾಗಾಣಿಕೆ ಯಾಗಿರುವುದು ಗ್ರಾಮ ಸ್ಥರಿಗೆ ಕಂಡುಬಂದಿದ್ದು, ಗುರುವಾರ ಮಧ್ಯ ರಾತ್ರಿ ಮರುಳ ಸಾಗಾಣಿಕೆ ಮಾಡುತ್ತಿದ್ದ ಕೆಎ 17 ಜೆಡಿ 4381 ಸೇರಿದಂತೆ ಮೂರು ಟ್ರ್ಯಾಕ್ಟರ್ ಗಳನ್ನು ಹಿಡಿದು ನಂತರ ನಾಡ ಕಚೇರಿ ಮುಂಭಾಗ ಧರಣಿ ನಡೆಸಿದರು.
ಸ್ಥಳಕ್ಕೆ ತಹಶೀಲ್ದಾರ್ ಅರುಣ್ ಕುಮಾರ್ ಕಾರಗಿ ಭೇಟಿ ನೀಡಿ, ಹಳ್ಳದ ಸುತ್ತ ಎರಡು ಕಿಮೀ ವ್ಯಾಪ್ತಿ ಸರ್ವೆ ಮಾಡಿ ಹದ್ದುಬಸ್ತು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಕೀರ್ತಿ, ಗ್ರಾಮಲೆಕ್ಕಾಧಿಕಾರಿ ಸುರೇಶ್ ಸೇರಿದಂತೆ ಇತರರು ಇದ್ದರು.