ಶಿವಮೊಗ್ಗ, ಸೆ.3- ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಬಹಳ ಕಡಿಮೆ ಇರುವುದರಿಂದ ನಾಲೆಗಳಿಗೆ ಆನ್ ಅಂಡ್ ಆಫ ಕ್ರಮದಡಿ ನೀರನ್ನು ಹರಿಸಿ, ಬೇಸಿ ಗೆಗೂ ನೀರನ್ನು ಉಳಿಸಬೇಕೆಂದು ಆಗ್ರಹಿಸಿ, ಭದ್ರಾವತಿ ತಾಲ್ಲೂಕಿನ ರೈತರು ಬಿಆರ್ಪಿಯಲ್ಲಿರುವ ಭದ್ರಾ ಎಸ್ಇ ಕಚೇರಿ ಎದುರು ಧರಣಿ ನಡೆಸಿದ್ದಾರೆ. ನಾಲೆಗಳಿಗೆ ಸತತ 100 ದಿನ ನೀರು ಹರಿಸುವುದನ್ನು ಹಿಂತೆಗೆದುಕೊಂಡು ಆನ್ ಅಂಡ್ ಆಫ್ ಕ್ರಮದಡಿ ನೀರು ಬಿಡುವ ತೀರ್ಮಾನ ಕೈಗೊಳ್ಳಬೇಕೆಂದು ಧರಣಿ ನಿರತ ರೈತರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಜಲಾಶಯಗಳ ಒಳಹರಿವು ಕುಸಿತವಾಗಿದೆ. ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇದೆ. ಇರುವ ನೀರನ್ನು ಸದ್ಬಳಕೆ ಮಾಡಿಕೊಂಡು ಜನ, ಜಾನುವಾರುಗಳು, ತೋಟದ ಬೆಳೆಗಳಿಗೆ ನೀರು ಉಳಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ರೈತರ ರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಸರ್ಕಾರ ತೆಗೆದುಕೊಳ್ಳದಿದ್ದರೆ, ರೈತರನ್ನು ಸಾವಿನ ತವಡೆಗೆ ನೂರಿದಂತಾಗುತ್ತದೆ.
ಜಲಾಶಯದಲ್ಲಿ ಈಗ 163.11 ಅಡು ನೀರಿದ್ದು, ಸತತ 100 ದಿನ ನೀರು ಹರಿಸುವುದರಿಂದ ಬೇಸಿಗೆ ಸಮಯಕ್ಕೆ ನೀರಿಲ್ಲದಂತಾಗಿ, ತೋಟದ ಬೆಳೆಗಳು ನಾಶವಾಗುತ್ತವೆ. ಆದ್ದರಿಂದ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭದ್ರಾವತಿ ಭಾಗದ ರೈತರು ಆಗ್ರಹಿಸಿ, ಧರಣಿ ನಡೆಸುತ್ತಿದ್ದಾರೆ.