ಮಲೇಬೆನ್ನೂರು, ಆ. 31- ಕುಂಬಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಾಗೋಳ್ ಸಿದ್ಧಮ್ಮ, ಉಪಾಧ್ಯಕ್ಷರಾಗಿ ಅಂದನೂರು ನೇತ್ರಾವತಿ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿದ್ಧಮ್ಮ ಏಳು ಮತಗಳನ್ನು ಪಡೆದು ಆಯ್ಕೆಯಾದರೆ, ಪ್ರತಿ ಸ್ಪರ್ಧಿ ಎನ್. ಲೋಕೇಶ್ ಅವರು 5 ಮತಗಳೊಂದಿಗೆ ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನೇತ್ರಾವತಿ ಮತ್ತು ಕರಿಬಸಪ್ಪ ಅವರಿಗೆ ತಲಾ 6 ಮತಗಳು ಲಭಿಸಿದ್ದವು. ಆಗ ಎರಡು ಹೆಸರುಗಳನ್ನು ಬರೆದು ಹಾಕಿ ಲಾಟರಿ ಎತ್ತಿದಾಗ ನೇತ್ರಾವತಿ ಅವರಿಗೆ ಅದೃಷ್ಟ ಒಲಿದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀತಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಘದ ಸಿಇಓ ಯಶೋಧ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಚುನಾವಣೆಯ ನಂತರ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ. ಹಾಲೇಶಪ್ಪ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ಅಭಿನಂದಿಸಿದರು.