ಹರಪನಹಳ್ಳಿ, ಆ. 31- ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ತಿಳಿಸಿದರು.
ತಾಲ್ಲೂಕಿನ ನಿಚ್ಚವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಡಬಗೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಯನ್ನು ಹೊರ ತೆಗೆಯಲು ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಮುಖಂಡ ವೈ.ಡಿ. ಅಣ್ಣಪ್ಪ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಮುಂದಿನ ಭವಿಷ್ಯ ಉಜ್ವಲಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ್ ಸಂಗಪ್ಪನವರ್ ಮಾತನಾಡಿ, ಇಂದಿನ ಸಿನಿಮಾ, ಧಾರಾವಾಹಿಗಳಿಂದಾಗಿ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ ಮರೆಯಾಗುತ್ತಿದ್ದು, ಮಕ್ಕಳ ಮೂಲಕ ಅವುಗಳನ್ನು ಉಳಿಸುವ ಸಲುವಾಗಿ ಸರ್ಕಾರ ಪ್ರತಿಭಾ ಕಾರಂಜಿ ಜಾರಿಗೆ ತಂದಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕೊಟ್ರಯ್ಯ, ಗ್ರಾ.ಪಂ. ಅಧ್ಯಕ್ಷ ಕೆ. ಆನಂದಪ್ಪ, ಪಿಡಿಓ ಅಂಜಿನಪ್ಪ, ಮುಖಂಡರಾದ ಪ್ರಶಾಂತ್ ಪಾಟೀಲ್, ಪರಶುರಾಮಪ್ಪ, ಭೀಮಪ್ಪ, ಕೆಂಚಪ್ಪ, ಸಿಆರ್ಪಿ ಅಬ್ದುಲ್ ಸಲಾಂ, ಶ್ರೀಕಾಂತ್, ಪದ್ಮಲತಾ, ರಾಮಪ್ಪ, ಬಂದಮ್ಮ, ಮುಖ್ಯ ಶಿಕ್ಷಕ ಎ.ಹೆಚ್. ಕೊಟ್ರೇಶ್, ಶಿಕ್ಷಕರಾದ ಬಿ. ಜಕಣಾಚಾರಿ, ಕೆ. ರತ್ನಮ್ಮ, ಜಿ. ಬಸವರಾಜ್, ಕೆ. ಮೌನೇಶಚಾರಿ, ಕೆ.ಎಸ್. ಕುಮಾರಸ್ವಾಮಿ ಸೇರಿದಂತೆ ಇತರರು ಇದ್ದರು.