ಮಲೇಬೆನ್ನೂರು, ಆ. 30- ಜಿಗಳಿ ಗ್ರಾ.ಪಂ. ಕಛೇರಿ ಆವರಣದಲ್ಲಿ ಬುಧವಾರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ `ಗೃಹಲಕ್ಷ್ಮಿ’ ಯೋಜನೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಅಧಿಕಾರಿಗಳಾದ ಬಿಇಒ ಹನುಮಂತಪ್ಪ ಅವರು, ಮನೆಯ ಯಜಮಾನಿಗೆ ಆರ್ಥಿಕ ಸಬಲತೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ `ಗೃಹಲಕ್ಷ್ಮಿ’ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ಅವರ ಖಾತೆಗೆ ನೀಡಲಿದೆ.
ಈ ಯೋಜನೆಯ ಸಫಲತೆ ಮನೆಯ ಯಜಮಾನಿಗೆ ಸಿಗುವುದರಿಂದ ಮನೆಯ ನಿರ್ವಹಣೆ ಸೇರಿದಂತೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಹನುಮಂತಪ್ಪ ತಿಳಿಸಿದರು.
ಪಿಡಿಓ ಉಮೇಶ್ ಮಾತನಾಡಿ, ಜಿಗಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 1600ಕ್ಕೂ ಹೆಚ್ಚು ಫಲಾನುಭವಿಗಳಿದ್ದು, ಈಗಾಗಲೇ ಸಾವಿರಕ್ಕೂ ಹೆಚ್ಚು ನೋಂದಣಿ ಮಾಡಿಸಿಕೊಂಡಿ ದ್ದಾರೆಂಬ ಮಾಹಿತಿ ಇದೆ. ಕೆಲವರ ರೇಷನ್ ಕಾರ್ಡ್ಗೆ ಆಧಾರ್ ಕಾರ್ಡ್ ಲಿಂಕ್ ಆಗದ ಕಾರಣ ನೋಂದಣಿ ವಿಳಂಬವಾಗಿದೆ. ಗೃಹಲಕ್ಷ್ಮಿ ನೋಂದಣಿಗೆ ಕಾಲಮಿತಿಯಿಲ್ಲ. ಎಲ್ಲಾ ಫಲಾನುಭವಿ ಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಈಗಾಗಲೇ 4 ಗ್ಯಾರಂಟಿಗಳ್ನು ಈಡೇರಿಸಿದೆ. `ಯುವನಿಧಿ’ ಗ್ಯಾರಂಟಿ ಯೋಜನೆಯೂ ಶೀಘ್ರ ಜಾರಿ ಬರಲಿದ್ದು, ಗ್ಯಾರಂಟಿ ಯೋಜನೆಗಳಿಂದ ಎಲ್ಲಾ ಜನರಿಗೆ ಅನುಕೂಲವಾಗಲಿದೆ ಎಂದರು.
ಗ್ರಾ.ಪಂ. ಉಪಾಧ್ಯಕ್ಷ ವೈ. ಚೇತನ್ಕುಮಾರ್, ಗ್ರಾ.ಪಂ. ಸದಸ್ಯ ಡಿ.ಎಂ. ಹರೀಶ್, ಎಸ್ಡಿಎಂಸಿ ಮಾಜಿ ಅಧ್ಯಕ್ಷರಾದ ಎಕ್ಕೆಗೊಂದಿ ರುದ್ರಗೌಡ, ಜಿ.ಪಿ. ಹನುಮಗೌಡ, ಪತ್ರಕರ್ತ ಪ್ರಕಾಶ್ ಅವರುಗಳು ಮಾತನಾಡಿ, ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಫಲಾನುಭವಿ ಶ್ರೀಮತಿ ಹುಸೇನ್ ಬಿ ಮಾತನಾಡಿ, ಬಡವರಿಗೆ ಆಸರೆ ಈಗುವ ಗ್ಯಾರಂಟಿ ಯೋಜನೆಗಳನ್ನು ನೀಡಿದ ಸರ್ಕಾರಕ್ಕೆ ಎಲ್ಲರೂ ಚಿರಋಣಿಯಾಗಿರಬೇಕೆಂದರು.
ಗ್ರಾ.ಪಂ. ಅಧ್ಯಕ್ಷೆ ಜಿ. ಬೇವಿನಹಳ್ಳಿಯ ಶ್ರೀಮತಿ ರೂಪಾ ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಸದಸ್ಯರಾದ ಎನ್.ಎಂ. ಪಾಟೀಲ್, ಶ್ರೀಮತಿ ಕರಿಯಮ್ಮ, ಶ್ರೀಮತಿ ಕವಿತಾ ಮಾಕನೂರು ಶಿವು, ಶ್ರೀಮತಿ ರೇಣುಕಮ್ಮ ಮಡಿವಾಳರ ರಂಗಪ್ಪ, ಎಂ.ದೇವರಾಜ್, ಶ್ರೀಮತಿ ಜಯಮ್ಮ ರಂಗನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ವಿ. ನಾಗರಾಜ್, ಜಿ.ಆರ್. ಹಾಲೇಶ್ ಕುಮಾರ್, ಪೂಜಾರ್ ನಾಗರಾಜ್, ವಿಜಯಭಾಸ್ಕರ್, ಗ್ರಾ.ಪಂ. ಕಾರ್ಯದರ್ಶಿ ಸುಜಾತ, ಬಿ. ಮೌನೇಶ್, ಪ್ರಕಾಶ್, ಮುತ್ತು, ಬಸವರಾಜಯ್ಯ, ರಂಗನಾಥ್ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.