ದಾವಣಗೆರೆ, ಆ. 30- ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಚೆಸ್ ಪೂರಕವಾಗಿದೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಏರ್ಪಡಿಸಿದ್ದ ಇಂಟರ್ ಸ್ಕೂಲ್ ಹಬ್ ಲೆವೆಲ್ ಚೆಸ್ ಟೂರ್ನಮೆಂಟ್ನಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ದಾವಣಗೆರೆ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಜಗತ್ತು ಸ್ಪರ್ಧಾತ್ಮಕವಾಗಿದೆ. ಚದುರಂಗದಾಟವು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜೀವನಕ್ಕೆ ಅಣಿಗೊಳಿಸಲು ಸಹಾಯಕವಾಗಿದೆ. ಚದುರಂಗದಾಟ ಸಾವಿರಾರು ವರ್ಷಗಳಿಂದ ಪೂರ್ವಜರು ಆಡಿಕೊಂಡು ಬರುತ್ತಿದ್ದು, ಇಂತಹ ಕ್ರೀಡೆಗಳು ಇನ್ನು ಉನ್ನತ ಮಟ್ಟಕ್ಕೆ ಪ್ರೋತ್ಸಾಹ ಸಿಕ್ಕು ಮಕ್ಕಳು ಬೆಳೆಯುವಂತಾಗಲಿ ಎಂದು ವಿದ್ಯಾರ್ಥಿಗಳನ್ನು ಕುರಿತು ಹಿತನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಟಿ. ಯುವರಾಜ್ ಹಾಗೂ ಅಮೃತ ವಿದ್ಯಾಲಯಂ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಎನ್. ಪ್ರತಿಭಾ, ಉಪ ಪ್ರಾಂಶುಪಾಲ ಪ್ರತೀಕ್ ಶೆಟ್ಟಿ ಹಾಗೂ ಅಮೃತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಸಿ. ವಿವೇಕ್, ಆಡಳಿತಾಧಿಕಾರಿ ನಂದೀಶ್ ರಾವ್ ಪುತ್ಲಿ, ಫಿಸಿಕಲ್ ಡೈರೆಕ್ಟರ್ಗಳಾದ ಕುಮಾರಸ್ವಾಮಿ, ಮೇಘರಾಜ್, ಸಂತೋಷ್ಕುಮಾರ್, ಹೇಮಂತ್, ಶ್ವೇತಾ ಉಪಸ್ಥಿತರಿದ್ದರು.