ಹರಿಹರದ ಕಾರ್ಯಕ್ರಮದಲ್ಲಿ ವರ್ತಕ ಮಹೇಂದ್ರ ಜೈನ್ ಅಭಿಮತ
ಹರಿಹರ, ಅ. 28 – ಪಾಠವನ್ನು ಕಿವಿಯಿಂದ ಆಲಿಸುವುದಕ್ಕಿಂತ ಹೃದಯದಿಂದ ಆಲಿಸಿದಾಗ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಬೆಂಗಳೂರಿನ ಮಾರುತಿ ಮೆಡಿಕಲ್ ಮಾಲೀಕ ಮಹೇಂದ್ರ ಮಣೋತ್ತರ್ ಜೈನ್ ಅಭಿಪ್ರಾಯಪಟ್ಟರು.
ನಗರದ ಕಾಳಿದಾಸ ಬಡಾವಣೆಯ ಶ್ರೀ ತಿಪ್ಪೇರುದ್ರಸ್ವಾಮಿ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಂದ ಮಾತ್ರ ರಾಷ್ಟ್ರದ ಭವಿಷ್ಯ ರೂಪಿಸಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ, ಶಿಸ್ತು ಹಾಗೂ ಸಂಯಮದಿಂದ ಪಾಠ ಕೇಳಬೇಕು ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್ ಮಾತನಾಡಿ, ಮಹೇಂದ್ರ ಜೈನ್ ಅವರು ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ನೀಡುತ್ತಿರುವುದು ಶ್ಲ್ಯಾಘನೀಯ ಕಾರ್ಯ. ಶಿಕ್ಷಕ ಶರಣ್ ಕುಮಾರ್ ಹೆಗಡೆಯವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ತಾಲ್ಲೂಕಿಗೆ ಹೆಮ್ಮೆ ತರುವಂತಹ ವಿಚಾರವಾಗಿದೆ ಎಂದು ಹೇಳಿದರು.
ಶ್ರೀ ತಿಪ್ಪೇರುದ್ರಸ್ವಾಮಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಬಿ. ರೇವಣನಾಯ್ಕ್ ಮಾತನಾಡಿ, ಶಿಕ್ಷಣದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ. ಸರಿಯಾಗಿ ಕಲಿತರೆ ಮಾತ್ರ ನಾಡನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಧೂಳಹೊಳೆ ಪ್ರೌಢಶಾಲೆ ಮುಖ್ಯಶಿಕ್ಷಕ ಶರಣ್ ಕುಮಾರ್ ಹೆಗಡೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ, ಹೊಸಪೇಟೆ ಬೀದಿ ಶಾಲೆಯ ಮುಖ್ಯಶಿಕ್ಷಕ ವೆಂಕಟೇಶ್, ಪತ್ರಕರ್ತ ಎಂ.ಚಿದಾನಂದ ಕಂಚಿಕೇರಿ, ಡಿ.ಆರ್.ಎಂ. ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಜಬಿಉಲ್ಲಾ, ಯಶಸ್ವಿನಿ ಶಿಕ್ಷಣ ಸಂಸ್ಥೆಯ ರಾಮನಗೌಡ, ಶಿಕ್ಷಕರಾದ ನಾಗರಾಜ್, ಮಂಜುನಾಥ್, ಮುರುಘರಾಜೇಂದ್ರ, ಮೃತ್ಯುಂಜಯ, ಓಂಕಾರಪ್ಪ, ಗಿರಿಜಮ್ಮ, ಉಪೇಂದ್ರ ಮತ್ತಿತರರು ಹಾಜರಿದ್ದರು.