ಬೋನಿನಲ್ಲಿ ಬಂಧಿಯಾದ ರೌಡಿ ಕೋತಿ

ಬೋನಿನಲ್ಲಿ ಬಂಧಿಯಾದ ರೌಡಿ ಕೋತಿ

ದಾವಣಗೆರೆ, ಆ. 24- ಅದು ರೌಡಿ ಕೋತಿ, ಸಿಕ್ಕ ಸಿಕ್ಕವರ ಮೇಲೆ ಎಗರುತ್ತಾ ಕಚ್ಚಿ, ದೂಡಿ ಹೋಗು ತ್ತಿತ್ತು, ಕೋತಿಯ ಉಪಟಳಕ್ಕೆ ಜನರು ಬೇಸತ್ತು ಹೋಗಿದ್ದರು, ನಿನ್ನೆ ಬೋನಿನೊಳಗೆ ಬಂದು ಜಸ್ಟ್ ಮಿಸ್ ಆಗಿ ತಪ್ಪಿಸಿಕೊಂಡು ಹೋಗಿದ್ದ ಕೋತಿ ಇಂದು ಬೋನಿಗೆ ಬಿದ್ದು ಲಾಕ್ ಆಗಿದೆ.

ಹೌದು.. ಈ ಘಟನೆ ನಡೆದಿದ್ದು ಹಳೇ ಕುಂದುವಾಡದಲ್ಲಿ. ಇಪ್ಪತ್ತಕ್ಕೂ ಹೆಚ್ಚು ಜನರಿಗೆ, ಮಕ್ಕಳಿಗೆ ಕಚ್ಚಿ ಘಾಸಿಗೊಳಿಸಿತ್ತು. ಮಕ್ಕಳು ಶಾಲೆಗೆ ಹೋಗಲು, ವಾಪಸ್ ಮನೆಗೆ ತೆರಳಲು ಭಯಪಡುತ್ತಿದ್ದರು. ಕೋತಿ ಬೈಕ್ ಸವಾರರನ್ನೆ ಹೆಚ್ಚು ಟಾರ್ಗೆಟ್ ಮಾಡುತ್ತಿತ್ತು. ಬೈಕ್ ನಲ್ಲಿ ಹೋಗುತ್ತಿದ್ದವರ ಹೆಗಲ ಮೇಲೆ ಓಡಿ ಬಂದು ಕೂತು ಕಚ್ಚುತ್ತಿತ್ತು, ಇದರಿಂದ ಹೆದರಿ ಎಷ್ಟೊ ಜನ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದರು, ನಿಂತಿದ್ದ ಬೈಕ್ ಗಳನ್ನು ಕಾಲಿನಿಂದ ದೂಡಿ ಬೀಳಿಸುತ್ತಿತ್ತು. ಮುಷ್ಯನ ಕೀಟಲೆಯಿಂದ ಜನರು ಬೇಸತ್ತು ಹೋಗಿದ್ದರು. 

ಈ ಹಿನ್ನೆಲೆ ಜನರು ಅರಣ್ಯ ಇಲಾಖೆ ಉಪಸಂರಕ್ಷಣಾ ಅಧಿಕಾರಿ ಶಶಿಧರ್ ಅವರಿಗೆ ದೂರು ನೀಡಿದ್ದರು. ದೂರು ಹಿನ್ನಲೆ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆ ನಾಲ್ಕೈದು ದಿನದಿಂದ ಬೋನಿಟ್ಟು ಕಾದಿತ್ತು, ಬೋನಿನೊಳಗೆ ಬಾಳೆಹಣ್ಣು, ಬಿಸ್ಕೆಟ್ ಇಡಲಾಗಿತ್ತು, ನಿನ್ನೆ ಬಾಳೆಹಣ್ಣು ತಿನ್ನುತ್ತಾ ಬೋನಿನೊಳಗೆ  ಕೋತಿ ಹೋಗಿತ್ತು, ಆದರೆ ಕೂಡಲೇ ಎಚ್ಚೆತ್ತ ಕೋತಿ ಲಾಕ್ ಬೀಳುವ ಮೊದಲೇ ಎಸ್ಕೇಪ್ ಆಗಿ ಓಡಿ ಹೋಗಿತ್ತು.

ಮತ್ತೆ ಇಂದು ಬೆಳಿಗ್ಗೆ ಅರಣ್ಯ ಇಲಾಖೆಗೆ ಕರೆ ಮಾಡಿ ಹೆಚ್ಚಿನ ಸಿಬ್ಬಂದಿ ಕಳುಹಿಸುವಂತೆ ಮನವಿ ಮಾಡಿದ ಹಿನ್ನೆಲೆ ಕೋರಿಕೆಗೆ ಸ್ಪಂದಿಸಿದ ಇಲಾಖೆ, ನಾಲ್ಕು ಜನರ ತಂಡವನ್ನು ಕಳುಹಿಸಿತ್ತು, ಒಂದು ಬಾರಿ ತಪ್ಪಿಸಿಕೊಂಡು ಹೋಗಿದ್ದರಿಂದ ಆ ಒಂದು ಸ್ಥಳದಲ್ಲಿ ಕೋತಿ ಸುಳಿದಿರಲಿಲ್ಲ. ಹೀಗಾಗಿ ಇನ್ನೊಂದು ಪ್ರದೇಶದಲ್ಲಿ ಬೋನಿಟ್ಟು ಮತ್ತೆ ಹಣ್ಣುಗಳನ್ನು ಇಟ್ಟು ಜೊತೆಗೆ ಮಿರರ್ ಇಡಲಾಗಿತ್ತು. ಇಂದು ಕೋತಿಗೆ ಗ್ರಹಚಾರ ಬೋನಿನ ಮೂಲಕ ಕಾದು ಕೂತಿತ್ತೇನೋ, ಹಣ್ಣು ತಿನ್ನುತ್ತಾ ಬೋನಿನ ಒಳಗೆ ಹೋದ ತಕ್ಷಣ ಸಿಬ್ಬಂದಿ ಬೋನ್ ಲಾಕ್ ಮಾಡಿದ್ದು, ಕೊನೆಗೂ ಮುಷ್ಯ ಬೋನಿಗೆ ಬಿದ್ದಿದೆ. 

ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆಗೆ ಹಳೇ ಕುಂದುವಾಡ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ಇನ್ನೂ ಸೆರೆಸಿಕ್ಕ ಕೋತಿಯನ್ನು ಕಾಡಿಗೆ ಬಿಡಲು ಸಿದ್ಧತೆ ನಡೆಸಲಾಗಿದೆ, ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಇದಾಯಿತ್, ಹರೀಶ್, ಮರುಳಸಿದ್ದಪ್ಪ, ದೇವರಾಜ್, ಶರಣಪ್ಪ ಸೇರಿದಂತೆ ಮತ್ತಿತರರು  ಭಾಗಿಯಾಗಿದ್ದರು..

error: Content is protected !!