ಗಾಂಧಿ ಹತ್ಯೆಗಿಂತ ಘೋರ, ಕ್ರೂರ ಗಾಂಧಿ ತತ್ವಗಳ ಹತ್ಯೆ

ಗಾಂಧಿ ಹತ್ಯೆಗಿಂತ ಘೋರ, ಕ್ರೂರ ಗಾಂಧಿ ತತ್ವಗಳ ಹತ್ಯೆ

ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಹೆಚ್.ದೇವರಾಜ್ ಅಭಿಮತ

ದಾವಣಗೆರೆ, ಆ. 22- ಮಹಾತ್ಮ ಗಾಂಧೀಜಿಯವರ ಹತ್ಯೆಗಿಂತ ಘೋರ ಹಾಗೂ ಕ್ರೂರ ಗಾಂಧೀಜಿಯವರ ತತ್ವಾದರ್ಶಗಳನ್ನು ನಾವು ಪಾಲಿಸದೇ ಇರುವುದು, ಇದರಿಂದಾಗಿ ನಾವು ಬೆಳಕಿನಿಂದ ಕತ್ತಲೆಯಡೆಗೆ ಸಾಗುವ ಪ್ರಮೇಯ ಬಂದರೂ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತನೆ ನಡೆಸುವ ಅನಿವಾರ್ಯತೆಯಿದೆ ಎಂದು ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಹೆಚ್.ದೇವರಾಜ್ ತಿಳಿಸಿದರು.

ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,     1857 ರಿಂದ ಪ್ರಾರಂಭವಾದ ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮದಿಂದ ಹಿಡಿದು 1947 ರವರೆಗೆ ಸುಮಾರು 90 ವರ್ಷಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಹನೀಯರು ತಮ್ಮ ಬಲಿದಾನವನ್ನು ಮಾಡಿದ್ದಾರೆ. ಈ ಎಲ್ಲರ ತ್ಯಾಗ, ಬಲಿದಾನದ ಫಲ ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ. ಪ್ರಾಣ ತ್ಯಾಗ ಮಾಡಿದ ಮಹನೀಯರುಗಳ ತ್ಯಾಗ, ಬಲಿದಾನ ವ್ಯರ್ಥ ಆಗಬಾರದು ಎಂಬುದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಂಡು ರಾಷ್ಟ್ರ ಕಟ್ಟುವ ಕಾಯಕದಲ್ಲಿ ಕೈಜೋಡಿಸಬೇಕಾಗಿದೆ. 

ಸ್ವಾತಂತ್ರ್ಯ ನಮಗೆ ಮೂಲಭೂತ ಹಕ್ಕುಗಳನ್ನಷ್ಟೇ ನೀಡಿಲ್ಲ ಬದಲಾಗಿ ಮೂಲಭೂತ ಕರ್ತವ್ಯಗಳನ್ನೂ ಸಹ ನೀಡಿದೆ. ನಾವಿಂದು ಸ್ವಾತಂತ್ರ್ಯದ ಹೆಸರಿನಲ್ಲಿ ಮೂಲಭೂತ ಹಕ್ಕುಗಳ ಬಗ್ಗೆಯಷ್ಟೇ ಮಾತನಾಡುತ್ತಿದ್ದೇವೆ. ಆದರೆ ಮೂಲಭೂತ ಕರ್ತವ್ಯಗಳ ಬಗ್ಗೆ ಮರೆಯುತ್ತಿದ್ದೇವೆ.ಮೂಲಭೂತ ಕರ್ತವ್ಯಗಳನ್ನು ಸರಿಯಾಗಿ ಪರಿಪಾಲನೆ ಮಾಡಿದ್ದೇ ಆದರೆ ಮೂಲಭೂತ ಹಕ್ಕುಗಳು ತನ್ನಿಂತಾನೇ ಅನುಷ್ಟಾನವಾಗುತ್ತವೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯವನ್ನು ಸ್ವೇಚ್ಚೆ ಎಂದು ಭಾವಿಸಬಾರದು ಎಂದರು.

ಕಳೆದ 76 ವರ್ಷಗಳಲ್ಲಿ ದೇಶದಲ್ಲಿ ಏನಾಗಿದೆಯೋ  ಅದಕ್ಕೆ ನಾವು ಉತ್ತರದಾಯಿ ಗಳಷ್ಟೇ ಅಲ್ಲ, ಭವಿಷ್ಯದ ಭಾರತ ಹೇಗಿರಬೇ ಕೆಂಬುದಕ್ಕೆ ಹೊಣೆಗಾರರೂ ಹೌದು. ಭಾರತ ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ 5 ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ 3 ನೇ ಸ್ಥಾನಕ್ಕೇರುವ ಎಲ್ಲಾ ಲಕ್ಷಣಗಳಿವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಭಾರತೀಯರು ಎಂದು ಎದೆಯುಬ್ಬಿಸಿ ನಡೆಯುವ ಸಂದರ್ಭ 76 ವರ್ಷಗಳ ನಂತರ ದೊರ ಕಿರುವುದು ಸೌಭಾಗ್ಯವೇ ಸರಿ ಎಂದರು.

ಇದೇ ಸಂದರ್ಭದಲ್ಲಿ ಅಶಕ್ತರಿಗೆ ಲಯನ್ಸ್ ಕ್ಲಬ್ ವತಿಯಿಂದ ಆಹಾರ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.

ಧ್ಜಜಾರೋಹಣ ಸಂದರ್ಭದಲ್ಲಿ ಲಯನ್ಸ್ ಡಿಸ್ಟ್ರಿಕ್ಟ್ ಮಾಜಿ ಗೌರ್ನರ್ ಹೆಚ್.ಎನ್.ಶಿವಕುಮಾರ್. ಡಾ.ಜಿ.ಶಿವಲಿಂಗಪ್ಪ, ವಲಯ ಚೇರ್ಮನ್ ದಿಳ್ಳೆಪ್ಪ, ಕ್ಲಬ್ ಕಾರ್ಯ ದರ್ಶಿ ಡಾ.ಜಿ.ಎನ್.ಹೆಚ್.ಕುಮಾರ್, ಖಜಾಂಚಿ ಶೀತಲ್‌ ಕುಮಾರ್, ಸುದರ್ಶನ್, ಎಲ್.ಎಸ್.ಪ್ರಭುದೇವ್, ಮಹೇಂದ್ರ ಕುಮಾರ್, ಡಿ.ವಿ.ಗಿರೀಶ್., ಶಿವಶಂಕರ್,  ಬಸವರಾಜ್, ಮಾಜಿ ಕಮಾಂಡೆಂಟ್ ಮಹಾಲಿಂಗಪ್ಪ, ಸೇವಾದಳದ ಬಸವರಾಜಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!