ಸಿರಿಗೆರೆ, ಜು. 14- ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಘರ್ಷ ಸಹಜ. ಆದರೆ ಮನುಷ್ಯನ ಮನಸ್ಸಿ ನಲ್ಲೂ ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳಿರುತ್ತವೆ. ಒಳ್ಳೆಯದನ್ನು ಆರಿಸಿಕೊಳ್ಳುವ ಸಾತ್ವಿಕ ಬುದ್ದಿ, ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇಂದು ಸಿರಿಗೆರೆಯ ಶ್ರೀ ಗುರು ಶಾಂತೇಶ್ವರ ದಾಸೋಹ ಭವನದಲ್ಲಿ ಏರ್ಪಾಡಾಗಿದ್ದ `ಮರಣವೇ ಮಹಾನವಮಿ’ ನಾಟಕ ಪ್ರದರ್ಶನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಚಲ ನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ವಾತಾ ವರಣ ಸೃಷ್ಟಿಸುವುದರಲ್ಲಿ ಮಠಗಳ ಪಾತ್ರ ದೊಡ್ಡದು ಎಂದರು.
ಸಿರಿಗೆರೆ ಬೃಹನ್ಮಠವು ಅನ್ನ, ಅಕ್ಷರ ದಾಸೋಹದ ಜೊತೆಗೆ ಅನೌಪಚಾರಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ. ನಾಟಕ, ನೃತ್ಯ, ಸಂಗೀತ, ಕ್ರೀಡೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಡುತ್ತಿದೆ. ನಗರಗಳಲ್ಲಿ ದೊರೆ ಯುವ ಸೌಲಭ್ಯಗಳನ್ನು ಗ್ರಾಮೀಣ ಮಕ್ಕಳಿಗೆ ನೀಡುತ್ತಿ ರುವುದು ಶ್ಲ್ಯಾಘನೀಯ. ಇಲ್ಲಿ ಕಲಿತ ವಿದ್ಯಾರ್ಥಿಗಳು ಶಾಲೆ, ಗುರುಗಳ ಬಗ್ಗೆ ಕೃತಜ್ಞತಾ ಭಾವ ಹೊಂದಿರಬೇಕು ಎಂದರು.
ಜೀವನದಲ್ಲಿ ಸವಾಲುಗಳೆಂಬ ಕತ್ತಿಗಳು ಮನಸ್ಸಿನ ಮೇಲೆ ಘಾಸಿ ಮಾಡಿದಾಗ ವಿಚಲಿತರಾಗಬಾರದು. ಧೈರ್ಯದಿಂದ ಮುನ್ನಡೆಯುವುದನ್ನು ರೂಢಿಸಿಕೊಳ್ಳಬೇಕು.
– ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ
ಪಠ್ಯಪುಸ್ತಕ, ತರಗತಿ ಕೋಣೆಗಳಾಚೆ ಸಿಗುವುದು ನಿಜವಾದ ಶಿಕ್ಷಣ. ಇಂದಿನ ವಿದ್ಯಾರ್ಥಿಗಳು ಪರಿಸರದಲ್ಲಿರುವ ಮಣ್ಣು, ನೀರು, ಗಾಳಿಯ ಬಗ್ಗೆ ಸೂಕ್ಷ್ಮ ಗ್ರಾಹಿಗಳಾಗಬೇಕು.
– ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಬರೆದಿರುವ ಮರಣವೇ ಮಹಾನವಮಿ, ವಿಶ್ವಬಂಧು ಮರುಳಸಿದ್ಧ, ಶರಣಸತಿ ಲಿಂಗಪತಿ ಈ ಮೂರೂ ನಾಟಕಗಳು ಕನ್ನಡ ರಂಗಭೂಮಿಯ ಶ್ರೇಷ್ಠ ನಾಟಕಗಳು. ಈ ಮೂರೂ ನಾಟಕಗಳನ್ನು ನಿರ್ದೇಶನ ಮಾಡುವ ಭಾಗ್ಯ ನನಗೆ ದೊರಕಿದೆ.
– ಮಾಲತೇಶ ಬಡಿಗೇರ, ರಂಗ ನಿರ್ದೇಶಕ
ಶಾಲಾ ಶಿಕ್ಷಣದಿಂದ ಪದವಿ, ಉದ್ಯೋಗ, ಉತ್ತಮ ಸಂಬಳ ಪಡೆಯಬಹುದು. ಆದರೆ ಕಲೆ, ಸಾಹಿತ್ಯವು ವ್ಯಕ್ತಿತ್ವ ಕಟ್ಟಿಕೊಡುತ್ತದೆ. ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದ ಯಾವುದೇ ಕೆಲಸಗಳು ಒಳ್ಳೆಯ ಫಲಿತಾಂಶ ನೀಡುತ್ತವೆ.
– ಪ್ರಕಾಶ್ ಬೆಳವಾಡಿ, ನಟ, ನಿರ್ದೇಶಕ, ಬೆಂಗಳೂರು.
ಭಾರತೀಯ ರಂಗಭೂಮಿಯ ಹೆಸರಾಂತ ಕಲಾವಿದರಾದ ಪ್ರಕಾಶ್ ಬೆಳವಾಡಿ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಎಸ್.ಬಿ. ರಂಗನಾಥ್, ಆಡಳಿತಾಧಿಕಾರಿ ಡಾ. ಎಚ್.ವಿ. ವಾಮದೇವಪ್ಪ, ಸಂಗೀತಗಾರ ತೋಟಪ್ಪ ಉತ್ತಂಗಿ, ರಂಗಕರ್ಮಿ ಮಾಲತೇಶ ಬಡಿಗೇರ, ಕಲಾ ಸಂಘದ ರಾಜಶೇಖರಯ್ಯ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ವಚನ ಗಾಯನ, ವಚನ ನೃತ್ಯ, ಮಲ್ಲಕಂಬ ಪ್ರದರ್ಶನ ನಡೆಯಿತು. ಬನವಾಸಿ ದೇವರಾಜ್ ಸ್ವಾಗತಿಸಿದರು. ಸಾರ್ಥವಳ್ಳಿ ಗಣೇಶ್ ವಂದಿಸಿದರು.
ಕಾರ್ಯಕ್ರಮದ ನಂತರ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ರಚಿಸಿ, ಮಾಲತೇಶ ಬಡಿಗೇರ ನಿರ್ದೇಶಿಸಿದ ‘ಮರಣವೇ ಮಹಾನವಮಿ’ ನಾಟಕ ಪ್ರದರ್ಶನಗೊಂಡಿತು.