ಕಾರ್ಯಕ್ಷಮತೆಗೆ ಕಿವಿ ಹಿಂಡಲೇಬೇಕೇ…

ಮಾನ್ಯರೇ, 

ಸ್ಮಾರ್ಟ್ ಸಿಟಿ, ವಿದ್ಯಾನಗರಿ ಎಂದು ಹೆಸರಾಗಿರುವ ಮಧ್ಯ ಕರ್ನಾಟಕದ ಮಹಾನಗರ ದಾವಣಗೆರೆ.  ಇಲ್ಲಿ ವೃತ್ತಿಪರ ಮತ್ತು ಸಾಮಾನ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಖಾಸಗೀ ಸಂಸ್ಥೆಗಳೇ ಹೆಚ್ಚು.  ಅಂತಹುದರಲ್ಲಿ ಕೆಲವು ವರ್ಷಗಳ ಹಿಂದೆ ಚಿಕ್ಕದಾಗಿ ಪ್ರಾರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡ ಒಂದು. ಒಂದು ನೂರು ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜಿನಲ್ಲಿ ಇವತ್ತು ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಮ್‌., ಬಿ.ಸಿ.ಎ., ಮೊದಲಾದ ಸ್ನಾತಕ ಪದವಿ ತರಗತಿಗಳು ಮತ್ತು ಎಂ.ಎ., ಎಂ.ಕಾಂ., ಎಂ.ಬಿ.ಎಗಳಂಥ ಸ್ನಾತಕೋತ್ತರ ತರಗತಿಗಳು ನಡೆಯುತ್ತಿವೆ.  ಯಾತಕ್ಕೂ ಸಾಲದ ಕನಿಷ್ಠ ಮೂಲ ಸೌಲಭ್ಯದಲ್ಲಿ ಗುಣಮಟ್ಟದ ಶಿಕ್ಷಣವನ್ನು ಈ ಸಂಸ್ಥೆ ನೀಡುತ್ತಾ ಬಂದಿದೆ.  ಶೇ.70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಿಶಿಷ್ಠ ಜಾತಿ, ಪಂಗಡ ಮತ್ತು ಹೊಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿದ್ದು ಅರ್ಧದಷ್ಟು ವಿದ್ಯಾರ್ಥಿನಿಯರೇ ಇದ್ದಾರೆ.  ಕಳೆದ ಮೂರು ವರ್ಷಗಳ ಹಿಂದೆ ಈ ಕಾಲೇಜಿನಲ್ಲಿ ಸಂಜೆ ಮಹಾವಿದ್ಯಾಲಯವಿದ್ದು ಬಿ.ಎ. ಮತ್ತು ಬಿ.ಕಾಂ ತರಗತಿಗಳಲ್ಲಿ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಹಾಸ್ಟೆಲ್‌ಗಳಲ್ಲಿ ನಿಯಮಾವಳಿ ಪ್ರಕಾರ ಇವರಿಗೆ ಸೌಲಭ್ಯಗಳಿವೆ.

ಮೊನ್ನೆ ಆ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದ ಕ್ರೀಡಾ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ, ಯುವ ರೆಡ್‌ ಕ್ರಾಸ್, ರೋವರ್ರ್ಸ್‌ ಮತ್ತು ರೇಂಜರ್ಸ್‌, ಮುಂತಾದ ಘಟಕಗಳ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.  ಕೆಲವು ವರ್ಷಗಳ ಹಿಂದೆ ನಾನಲ್ಲಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸಿದ್ದಕ್ಕೋ ಅಥವಾ ಆ ಎಲ್ಲ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಕಾರ ಣಕ್ಕೋ ನನ್ನನ್ನೂ ಅತಿಥಿಯಾಗಿ ಆಹ್ವಾನಿಸಿದ್ದರು.  ರಾಜ್ಯದ ಸಚಿವರೂ ಮತ್ತು ಆ ಕ್ಷೇತ್ರದ ಶಾಸಕರೂ ಆಗಿರುವ ಎಸ್.‌ ಎಸ್.‌ ಮಲ್ಲಿಕಾರ್ಜುನ್‌ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಬೇಕಿತ್ತು.  ಕಾರ್ಯನಿಮಿತ್ತ ಅವರಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ, ಅದೇ ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ನಂತರ ಅದೇ ಸಂಜೆ ಮಹಾವಿದ್ಯಾಲಯದ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮಗೆ ವಿದ್ಯಾರ್ಥಿಗಳಿಗಿರುವಂತೆ ಹಾಸ್ಟೆಲ್‌ ಸೌಲಭ್ಯ ಒದಗಿಸಲು ಶಿಫಾರಸು ಮಾಡುವಂತೆ ಕೋರಿ ಪ್ರಾಂಶುಪಾಲರ ಮೂಲಕ ಮನವಿ ಪತ್ರವೊಂದನ್ನು ಅವರಿಗೆ ಕೊಟ್ಟರು.  

ಪ್ರಾಂಶುಪಾಲರನ್ನು ವಿಚಾರಿಸಲಾಗಿ, ಇಲಾಖೆಯ ಅಧಿಕಾರಿಗಳ ಪ್ರಕಾರ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ರಾತ್ರಿ 9 ಗಂಟೆಯವರೆಗೆ ಒಳಗೆ ಬರುವ ಮತ್ತು ಊಟ ಮಾಡುವ ಅವಕಾಶವಿದ್ದು, ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಲ್ಲಿ ರಾತ್ರಿ ೮ಕ್ಕೆ ಸಮಯ ಮುಗಿಯುತ್ತದೆ.  ಕಾಲೇಜು ಮುಗಿ ಯುವ ಸಮಯ ರಾತ್ರಿ 9 ಗಂಟೆಗೆ.  ಆ ಸಮಯ ದಲ್ಲಿ ವಿದ್ಯಾರ್ಥಿನಿಯರು ಕಾಲೇಜಿನಿಂದ ಹಾಸ್ಟೆ ಲ್‌ಗೆ ಬರಲು ಭದ್ರತಾ ಸಮಸ್ಯೆ ಇರುವ ಕಾರಣಕ್ಕೆ ಅವಕಾಶ ನೀಡಲಾಗಿಲ್ಲ ಎನ್ನುವುದು.  ಕೇಳಿ ನಿಜಕ್ಕೂ ದಂಗು ಬಡಿದಂತಾಯಿತು.  ಮಹಿಳೆ ಯರು ರಾತ್ರಿ ನಿರ್ಭಯದಿಂದ ಓಡಾಡುವಂತಹ ಆಡಳಿತ ವ್ಯವಸ್ಥೆ ಇರಬೇಕು ಎಂದು ಕನಸಿದ ರಾಷ್ಟ್ರದಲ್ಲಿ, ಸಮಾನ ಅವಕಾಗಳು ಮೂಲಭೂತ ಹಕ್ಕಾಗಿರುವ ದೇಶದಲ್ಲಿ, ಪುಕ್ಕಟೆಯಾಗಿ ಮಹಿಳೆಯರು ರಸ್ತೆ ಸಾರಿಗೆ ಬಸ್ಸಿನಲ್ಲಿ ದಿನದ 24 ಗಂಟೆಗಳ ಕಾಲ ಓಡಾಡುವ ಸೌಲಭ್ಯವಿರುವ ರಾಜ್ಯದಲ್ಲಿ ಸಾಮಾನ್ಯ ಪದವಿಯೊಂದನ್ನು ಆರಸಿ ಹಗಲು ದುಡಿದು ಸಂಜೆ ಒಂದಷ್ಟು ತರಗತಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಸಲ್ಲದ ಕಾರಣ ದಿಂದ 3 ವರ್ಷಗಳಿಂದ ಹಾಸ್ಟೆಲ್‌ ಸೌಲಭ್ಯವನ್ನು ನಿರಾಕರಿಸಲಾಗಿದೆ ಎಂದರೆ ಏನೆನ್ನಬೇಕು?                        

ಪ್ರಾಥಮಿಕ ಶಿಕ್ಷಣದಿಂದ ಉನ್ನತಶಿಕ್ಷಣಕ್ಕೆ ಕಾಲಿರಿಸುವ ವಿದಾರ್ಥಿಗಳ ಅನಪಾತ(ಜಿಇಆರ್) ಇವತ್ತು ಶೇ. 26ರ ಆಸುಪಾಸು ಇದ್ದು ಅದನ್ನು ಮುಂದಿನ 2035ರ ಹೊತ್ತಿಗೆ ಶೇ.50ಕ್ಕೆ ತಲುಪಿಸಬೇಕೆಂಬುದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಉದ್ದೇಶ.  ಇದರ ಒಂದು ಭಾಗವಾಗಿ ಹಿಂದಿನ ಸರ್ಕಾರ ರಾಜ್ಯದ ಎಲ್ಲ ಮಹಾ ನಗರಪಾಲಿಕೆಗಳಿರುವ ನಗರಗಳ ಸಾಮಾನ್ಯ ಪದವಿ ಕಾಲೇಜುಗಳಲ್ಲಿ ಸಂಜೆ ಮಹಾ ವಿದ್ಯಾಲಯಗಳನ್ನು ಆರಂಭಿಸಿತು.  ಆರ್ಥಿಕವಾಗಿ ಅನುಕೂಲವಿರದ ಪೋಷಕರ ಮಕ್ಕಳು ಹಗಲು ಅಂಗಡಿ ಮುಂಗಟ್ಟುಗಳಲ್ಲಿ ಕೆಲಸಮಾಡಿ ಸಂಜೆ ಪದವಿ ತರಗತಿಗಳಿಗೆ ಹಾಜರಾಗಿ ಪದವಿ ಪಡೆಯುವ ಮತ್ತು ಆ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶ ಅವರದಾಯಿತು.  ಲಭ್ಯ ಮಾಹಿತಿ ಪ್ರಕಾರ ಹಾಲಿ 9 ನಗರಗಳಲ್ಲಿ ಇಂಥ ವ್ಯವಸ್ಥೆ ಇದ್ದು ಸಾವಿರಾರು ಪದವಿ ಆಕಾಂಕ್ಷಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.  ಅದರಲ್ಲಿ ಶೇ. 50ರಷ್ಟು ವಿದ್ಯಾರ್ಥಿನಿಯರಿದ್ದು ಅಂಥವರಲ್ಲಿ ದಾವಣಗೆರೆಯ ಸಂಜೆ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯರೂ ಕೂಡ ಒಬ್ಬರು.          

ಹೊಸ ಶಿಕ್ಷಣ ನೀತಿಯ ಪೂರ್ಣಾನುಷ್ಠಾನಕ್ಕೆ ಮುಂದಾದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯದಲ್ಲಿ, ಕ್ಲಬ್ಬು ಪಬ್ಬು, ಬಾರು, ರೆಸ್ಟೋರೆಂಟ್‌ಗಳಲ್ಲಿ ಹೆಣ್ಣು-ಗಂಡೆನ್ನದೆ ರಾತ್ರಿ ೧೨ರವರೆಗೆ ಮೋಜು ಮಸ್ತಿಗೆ ಅವಕಾಶವಿರುವ ನಗರಗಳಲ್ಲಿ, ಈ ವಿದ್ಯಾರ್ಥಿನಿಯರಿಗೇಕೆ ಈ ದುಃಸ್ಥಿತಿ?  ಹಾಸ್ಟೆಲ್ಗಳಿಂದಾಗಿ ಕಾಲೇಜುಗಳಿ ವೆಯೋ ಕಾಲೇಜುಗಳಿಗಾಗಿ ಹಾಸ್ಟೆಲುಗಳಿವೆಯೋ ತಿಳಿಯದಾಗಿದೆ.  ಇದೇ ಪರಿಸ್ಥಿತಿ ಉಳಿದ 8 ನಗರಗಳಲ್ಲಿಯೂ ಇರಬಹುದೇನೋ. ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಚಾಟಿ ಬೀಸುವವರಾರು.  ಚಾಟಿ ಬೀಸಿ ಕೆಲಸ ಮಾಡಿಸುವುದೇ ಕಾರ್ಯಕ್ಷಮತೆಯೇ? ಹೀಗಾ ದರೆ ಓದಿದ ವಿದ್ಯೆಗೆ, ಪಡೆದ ಸರ್ಕಾರಿ ಹುದ್ದೆಗೆ ಸಂದ ಬೆಲೆಯೇನು?  ಕೊನೇ ಪಕ್ಷ ತಮ್ಮ ಮಕ್ಕಳೇ ಈ ದುಃಸ್ಥಿತಿಗೊಳಗಾಗಿದ್ದಿದ್ದರೆ ಇವರಿಗೇನೆನ್ನಿಸು ತ್ತಿತ್ತು ?  ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಇಂಥ ವಿಪ ರ್ಯಾಸಗಳತ್ತ ಗಮನಕೊಡ ಬೇಕಿದೆ.  ಕಾಲೇಜಿನ ವೇಳಾಪಟ್ಟಿಯಲ್ಲಿ ಹೊಂದಾಣಿಕೆ ಮಾಡಿಯೋ, ರಜಾದಿನಗಳಂದು ತರಗತಿ ನಡೆಸಿಯೋ, ಕೊನೆಯ ಪಾಳಿಯಾಗಿ ರಾತ್ರಿ 9 ಗಂಟೆಗೆ ಕಾಲೇಜಿ ನಿಂದ ಹಾಸ್ಟೆಲ್‌ಗಳ ಮಾರ್ಗದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ವ್ಯವಸ್ಥೆ ಮಾಡಿಯೋ ಈ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡ ಬೇಕಿದೆ.  ಸಂವಿಧಾನದತ್ತ ಅವರ ಮೂಲಭೂತ ಹಕ್ಕುಗಳಿಗೆ ನ್ಯಾಯ ಒದಗಿಸಬೇಕಿದೆ. 


– ಡಾ ಜಿ. ಎನ್.‌ ಮಲ್ಲಿಕಾರ್ಜುನಪ್ಪ, ವಿಶ್ರಾಂತ ಗ್ರೇಡ್-‌1 ಪ್ರಾಂಶುಪಾಲರು, ಕಾಲೇಜು ಶಿಕ್ಷಣ ಇಲಾಖೆ. 94490 77003

error: Content is protected !!