ರಾಣೇಬೆನ್ನೂರಿನಲ್ಲಿ ಮುಖ್ಯಮಂತ್ರಿ ಚಂದ್ರು
ರಾಣೇಬೆನ್ನೂರು, ಮಾ.31- ಅತ್ಯಾಚಾರಿ ಗಳು, ಕೊಲೆಗಡುಕರು, ಭ್ರಷ್ಟಾಚಾರಿಗಳಂತ ವರನ್ನು ಹೊರತುಪಡಿಸಿ ಸರಳ ಸಜ್ಜನಿಕೆಯ ಯಾವುದೇ ಜಾತಿ, ಧರ್ಮದವರು ಬಂದರೂ ಆಮ್ ಆದ್ಮಿ ಪಕ್ಷಕ್ಕೆ ಸ್ವಾಗತವಿದೆ. ಈ ವಿಧಾನಸಭೆ ಚುನಾವಣೆಗೆ ಅಂತಹವರನ್ನು ಹುಡುಕಿ ಪಕ್ಷ ಟಿಕೆಟ್ ಕೊಡುತ್ತದೆ ಎಂದು ಪಕ್ಷದ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ನೀತಿ ಸಂಹಿತೆಯಿಂದಾಗಿ ಪೋಸ್ಟ್ ಸರ್ಕಲ್ನಲ್ಲಿ ನಡೆಯಬೇಕಿದ್ದ ಬಹಿರಂಗ ಸಭೆಯನ್ನು ರದ್ದು ಪಡಿಸಿ ಹೋಟೆಲ್ ಹಾಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಇಂತಹ ಚಾರಿತ್ರ್ಯ ಉಳ್ಳವರು, ಪಕ್ಷದಲ್ಲಿ ರುವುದು ಗೊತ್ತಾದರೆ ಅವರನ್ನ ಪಕ್ಷದಿಂದ ಹೊರ ಹಾಕಲು ಹಿಂದೇಟು ಹಾಕುವುದಿಲ್ಲ. ಹೀನ ಚಾರಿತ್ರ್ಯ ದವರ ಆಡಳಿತಕ್ಕೆ ಬೇಸರ ಹೊಂದಿರುವ ರಾಜ್ಯದ ಜನ ನಮಗೆ ಬೆಂಬಲ ಕೊಡಬಹುದು ಎನ್ನುವ ನಂಬುಗೆ ನಮ್ಮದಾಗಿದ್ದು, ಅಧಿಕಾರಕ್ಕೆ ಬಂದರೆ ನಮ್ಮ ಹತ್ತು ಅಂಶಗಳ ಗ್ಯಾರಂಟಿ ಜೊತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಆದ್ಯತೆ ಕೊಡುವುದಾಗಿ ಚಂದ್ರು ತಿಳಿಸಿದರು.
ಸಿದ್ದೇಶ್ವರ ದೇವಸ್ಥಾನದಿಂದ ನೂರಾರು ಕಾರ್ಯಕರ್ತರ ಜೊತೆ ಹೊರಟ ಬೈಕ್ ರಾಲಿ ಶ್ರೀ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಇಲ್ಲಿನ ಅಧಿಕೃತ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ, ರಾಜು ಕಾಳೇರ ಮತ್ತು ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.