ಜಗಳೂರು, ಏ.26- ಉತ್ತಮ ವ್ಯಕ್ತಿತ್ವವುಳ್ಳ ಶಾಸಕ ಎಸ್.ವಿ.ರಾಮಚಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಹೆಸರಾಂತ ಚಿತ್ರ ನಟ ಸುದೀಪ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತದ ವರೆಗೆ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ಪರ ಅದ್ಧೂರಿ ರೋಡ್ ಶೋ ನೊಂದಿಗೆ ಮತ ಯಾಚಿಸಿದರು.
ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ: ನಾನು ಸಿನಿಮಾ ಚಿತ್ರೀಕರಣದಲ್ಲಿ ತಲ್ಲೀನನಾಗಿದ್ದೆ. ಇದೀಗ ಬಹುದಿನಗಳ ನಂತರ ರೋಡ್ ಶೋ ನಲ್ಲಿ ಭಾಗವ ಹಿಸಿರುವುದು ಸಂತಸ ತಂದಿದೆ. ನಿಮ್ಮ ಪ್ರೀತಿ, ಅಭಿಮಾನಕ್ಕೆ ಚಿರ ಋಣಿ ಯಾಗಿರುವೆ ಎಂದರು.
ನನಗೆ ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ. ಎಸ್.ವಿ.ರಾಮಚಂದ್ರ ಅವರು ಉತ್ತಮ ಆತ್ಮೀಯ ಒಡನಾಡಿಯಾಗಿದ್ದಾರೆ. ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು. ನಾನು ಇನ್ನೊಮ್ಮೆ ಆಗಮಿಸಿ ಸಂಭ್ರಮ ಆಚರಿಸೋಣ ಎಂದರು.
ಸುದೀಪ್ ಅವರು ಹೆಲಿಕ್ಯಾಪ್ಟರ್ ನಿಂದ ಇಳಿದು ತೆರೆದ ವಾಹನಕ್ಕೆ ಆಗಮಿಸುತ್ತಿದ್ದಂತೆ ಹೂವಿನಮಾಲೆ, ಸೇಬು ಹಣ್ಣಿನ ಮಾಲೆ ಹಾಕಿ ಸ್ವಾಗತಿಸಿದರು. ಆಗ ಕಿಕ್ಕಿರಿದ ಸಂಖ್ಯೆಯ ಅಭಿಮಾನಿಗಳು ವಾಹನದ ಸುತ್ತಲೂ ಸುದೀಪ್ ಭಾವಚಿತ್ರ, ಬಾವುಟಗಳೊಂದಿಗೆ ಮುಗಿಬಿದ್ದರು.
ಕಿಚ್ಚ ಕಿಚ್ಚ ಎಂಬ ಘೋಷಣೆಗಳು ಮೊಳಗಿದವು. ಸುದೀಪ್ ಕೈಬೀಸುತ್ತಿದ್ದಂತೆ ಸೇಬು ಹಣ್ಣಿನ ಹಾರದಲ್ಲಿರುವ ಹಣ್ಣುಗಳನ್ನು ಎಸೆದು ಅಭಿಮಾನಿಗಳು ಸಂಭ್ರಮಿಸಿದರು. ಸುದೀಪ್ ಅವರೂ ಅಭಿಮಾನಿಗಳ ಜೈಕಾರಕ್ಕೆ ಸಾಥ್ ನೀಡಿದರು. ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿ, ಹರ್ಷೋದ್ಘಾರ ವ್ಯಕ್ತಪಡಿಸಿದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಕ್ಷೇತ್ರದಲ್ಲಿ ಸುದೀಪ್ ಅಭಿಮಾನಿಗಳು ಹೆಚ್ಚಿದ್ದಾರೆ. ಕಿಚ್ಚನ ಅಭಿಮಾನಿ ಬಳಗದ ಬಹುದಿನ ಗಳ ಒತ್ತಾಸೆಯಂತೆ ಸುದೀಪ್ ಅವರನ್ನು ಇಂದಿನ ಚುನಾವಣೆ ಪ್ರಚಾರದ ರೋಡ್ ಶೋನಲ್ಲಿ ಆಹ್ವಾನಿಸಿರುವೆ. ಅವರೂ ನನ್ನ ಮೇಲಿನ ಆತ್ಮೀಯತೆಯಿಂದ ಇಂದು ಆಗಮಿಸಿದ್ದಾರೆ. ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ಜನರು ಆಗಮಿಸಿರುವುದು ನನಗೆ ಗೆಲುವಿನ ವಿಶ್ವಾಸ ಹೆಚ್ಚಿಸಿದೆ. ಕ್ಷೇತ್ರದ ಮತದಾರರ ಆಶೀರ್ವಾದ ನನ್ನ ಮೇಲಿದೆ. ಕಮಲದ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಉಸ್ತುವಾರಿ ಆರುಂಡಿ ನಾಗರಾಜ್, ಶಾಸಕರ ಪತ್ನಿ ಇಂದಿರಾ ರಾಮಚಂದ್ರ, ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಮುಖಂಡರಾದ ಸೊಕ್ಕೆ ನಾಗರಾಜ್, ಬಿಸ್ತುವಳ್ಳಿ ಬಾಬು ಭಾಗವಹಿಸಿದ್ದರು.