ಸಮಾಜ ಸುಧಾರಣೆಗೆ ಕನಕದಾಸರಿಂದ ಸತತ ಯತ್ನ

ಸಮಾಜ ಸುಧಾರಣೆಗೆ ಕನಕದಾಸರಿಂದ ಸತತ ಯತ್ನ

ಹೊನ್ನಾಳಿಯಲ್ಲಿ ಭಕ್ತ ಕನಕದಾಸರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಹೊನ್ನಾಳಿ, ಫೆ.3 – ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಸಂತೋಷದಿಂದ ಲೋಕಾರ್ಪಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಕನಕದಾಸ ವೃತ್ತದಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಕುರುಬ ಸಂಘದ ವತಿಯಿಂದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂ ಕುಗಳ ಕುರುಬ ಸಮಾಜದವರು ಮತ್ತು ಇತರೆ ಎಲ್ಲಾ ಸಮಾಜದವರು ಜೊತೆಗೂಡಿ ಶ್ರೀ ಭಕ್ತ ಕನಕದಾಸರ ಕಂಚಿನ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿ ದ್ದು ನಿಜಕ್ಕೂ ಶ್ಲ್ಯಾಘನೀಯವೆಂದರು.

ಕನಕದಾಸರು ಆಕಸ್ಮಿಕವಾಗಿ ಕುರುಬ ಸಮಾಜದಲ್ಲಿ ಜನಿಸಿದ್ದರೂ ಕುರುಬ ಸಮಾಜದ ವ್ಯಕ್ತಿಯಾಗದೇ ವರ್ಗ-ಜಾತಿ-ಮೌಢ್ಯ ರಹಿತ ಸಮಾಜ ನಿರ್ಮಾಣಕ್ಕಾಗಿ ತಮ್ಮ ಆಸ್ತಿ-ಕುಟುಂಬ ತ್ಯಜಿಸಿ ಸಮಾಜ ಸುಧಾರಕರಾಗಿ, ಸಮ-ಸಮಾಜ ನಿರ್ಮಾ ಣಕ್ಕಾಗಿ ಅವಿರತ ಶ್ರಮಿಸಿದ್ದರು. ಹಲವಾರು ರಾಮಧಾನ್ಯಚರಿತೆ, ಮೋಹನತರಂಗಿಣಿ, ಹರಿ ಭಕ್ತದಾಸ ಹಲವಾರು ಕೃತಿಗಳನ್ನು ರಚಿಸುವ ಮೂಲಕ ಸಮಾಜವನ್ನು ಸುಧಾ ರಣೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಯೂ ಸತತ ಪ್ರಯತ್ನ ಮಾಡಿದ್ದರು ಎಂದರು.

ಬಸವಾದಿ ಶರಣರು ಕಾಯಕ ದಾಸೋಹ ಸಂಸ್ಕೃತಿಯನ್ನು ಸಮಾಜಕ್ಕೆ ಪರಿಚಯಿಸಿದರು. ಬುದ್ಧ, ಬಸವ, ಅಂಬೇ ಡ್ಕರ್, ಗಾಂಧಿ ಮುಂತಾದವರು ಮನುಷ್ಯ ರಾಗುವಂತೆ ಬೋಧನೆ ಮಾಡಿದ್ದರು.

ಕುವೆಂಪುರವರ ಉಕ್ತಿಯಂತೆ ಮನುಷ್ಯ ಹುಟ್ಟುವಾಗ ವಿಶ್ವಮಾನವರಾಗಿ ರುತ್ತಾನೆ ನಂತರ ಬೆಳೆಯುತ್ತಾ ಜಾತಿ ವ್ಯವಸ್ಥೆಯಡಿ ಸಿಲುಕಿ ಅಲ್ಪಮಾನವನಾಗುತ್ತಿ ದ್ದಾನೆ. ಭಕ್ತ ಕನಕದಾಸರ ಪ್ರತಿಮೆ ನಿರ್ಮಾಣ ಮಾಡುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸುಧಾರಣೆತರುವ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕು ಎಂದು ಕರೆ ನೀಡಿದರು.

15 ವರ್ಷಗಳ ಹಿಂದೆ ಹೊನ್ನಾಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕನಕಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭವನ್ನು ಮೆಲುಕು ಹಾಕಿದರು.

ವೀರಸಂಗೊಳ್ಳಿರಾಯಣ್ಣ ವೃತ್ತದಿಂದ 101 ಪೂರ್ಣಕುಂಭ ಹೊತ್ತ ಮಹಿಳೆಯರು ಶ್ರೀ ಭಕ್ತಕನಕದಾಸ ವೃತ್ತದಲ್ಲಿ ನೂತನವಾಗಿ ಉದ್ಘಾಟನೆಗೊಳ್ಳಲಿರುವ ಪ್ರತಿಮೆಯವರೆಗೆ ಮೆರವಣಿಗೆ ನಡೆಸಿದರು.

ಕುರುಬ ಸಮಾಜದವತಿಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಅವಳಿ ತಾಲ್ಲೂಕುಗಳ ಎಲ್ಲಾ ಸಮಾಜಗಳ ಅಧ್ಯಕ್ಷರುಗಳನ್ನು ಮತ್ತಿತರ ಗಣ್ಯಮಾನ್ಯರನ್ನು ಸನ್ಮಾನಿಸಲಾಯಿತು.

ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಿ.ಸಿದ್ದಪ್ಪ ಮಾತನಾಡಿ, ಸುಮಾರು 10 ಲಕ್ಷ ರೂ.ಗಳ ವೆಚ್ಚದ ಶ್ರೀ ಭಕ್ತ  ಕನಕದಾಸರ ಕಂಚಿನ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಉದ್ಘಾಟಿಸಬೇಕೆಂಬುದು ನಮ್ಮೆಲ್ಲರ ಕನಸಾಗಿದ್ದತು ಅದು ಇಂದು ನೆರವೇರಿದ್ದಕ್ಕಾಗಿ ಸಂತಸ ಹಂಚಿಕೊಂಡರು.

ಬೆಂಗಳೂರಿನ ನಟರಾಜ್ ಎಂಟರ್‍ಟೈನರ್ಸ್ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು. ಸಮಾಜಬಾಂಧವರು ಬೆಳ್ಳಿಗದೆ ಮತ್ತು ಕರಿ ಕಂಬಳಿ ಹೊದಿಸಿ ವಿಶೇಷವಾಗಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಸಕ ಡಿ.ಜಿ.ಶಾಂತನಗೌಡ ವಹಿಸಿದ್ದರು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್‍ಸಾಬ್, ಶಾಸಕ ಬಸವಂತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಎಂ.ಎಲ್.ಸಿ. ಆರ್.ಪ್ರಸನ್ನಕುಮಾರ್, ಹೊನ್ನಾಳಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್.ಪಾಲಾಕ್ಷಪ್ಪ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಮರಿಕನ್ನಪ್ಪ, ಇನ್ಸೈಟ್ಸ್ ಸಂಸ್ಥೆಯ ಅಧ್ಯಕ್ಷ ಜಿ.ಬಿ.ವಿನಯ್‍ಕುಮಾರ್, ಕುರುಬ ಸಮಾಜದ ಮುಖಂಡರಾದ ಎಚ್.ಎ.ಉಮಾಪತಿ, ಎಚ್.ಬಿ.ಶಿವಯೋಗಿ, ದಿಡಗೂರು ಪಾಲಾಕ್ಷಪ್ಪ, ಎಂ.ರಮೇಶ್, ಮರುಳಸಿದ್ದಪ್ಪ, ಪುರಸಭಾ ಸದಸ್ಯ ಎಂ.ರಮೇಶ್, ಮುಖಂಡರಾದ ಡಾ.ಈಶ್ವರ್ ನಾಯ್ಕ್, ಹೊದಿಗೆರೆ ರಮೇಶ್, ಎಚ್.ಎಸ್.ರಂಜಿತ್, ಎಚ್.ಡಿ.ವಿಜೇಂದ್ರಪ್ಪ, ಶ್ರೀನಿವಾಸ್, ವಿನಯ್, ರಾಜು ಕಣಗಣ್ಣಾರ್, ಮನು ವಾಲಜ್ಜಿ, ಪ್ರಶಾಂತ್ ಬಣ್ಣಜ್ಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!