ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ
ಹರಪನಹಳ್ಳಿ ತಾಲ್ಲೂಕು ಕಸಾಪ ಕಾರ್ಯಕ್ರಮ
ಹರಪನಹಳ್ಳಿ, ಜೂ. 13- ಅಂಕ ಅಧಾರಿತ ಶಿಕ್ಷಣಕ್ಕಿಂತ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯತೆ ಇದೆ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವರಸದ್ಯೋ ಜಾತ ಶಿವಚಾರ್ಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ತೆಗ್ಗಿನ ಮಠದ ಕಟ್ಟಿ ಸೇತುರಾಮ ಚಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶ್ರೀ ಚೂರನೂರು ಹಿರೇಮಠದ ಚನ್ನಬಸಯ್ಯ ಮತ್ತು ದೇವೀರಮ್ಮ ದತ್ತಿ, ಅಧ್ಯಕ್ಷರು ಶ್ರೀ ತೆಗ್ಗಿನ ಮಠ ಆರ್ಟ್ ಎಜುಕೇಶಷನಲ್ ಸೊಸೈಟಿ ದತ್ತಿ, ಶ್ರೀ ಟಿ.ಎಂ. ಸೋಮಲಿಂಗಯ್ಯ ದತ್ತಿ, ಶ್ರೀಮತಿ ಎಂ.ಪಿ.ಎಂ. ಶಾಂತಮ್ಮ ಬಸವನಗೌಡ್ರು ದತ್ತಿ, ಲಿಂ. ತೆಗ್ಗಿನ ಮಠದ ಶ್ರೀ ಚನ್ನವೀರಪ್ಪಯ್ಯ ಶಾಸ್ತ್ರೀಗಳು ಮತ್ತು ಕುಟುಂಬ ವರ್ಗದ ದತ್ತಿ, ಶ್ರೀ ಕೆ.ಎಂ.ಗುರುಸಿದ್ದಯ್ಯ ಮತ್ತು ಶ್ರೀಮತಿ ಕೆ.ಎಂ. ಗಿರಿಜಮ್ಮ ಜ್ಞಾಪಕಾರ್ಥ ಗುರುಗಿರಿ ದತ್ತಿ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಕನ್ನಡ ಕೇವಲ ವರ್ಣ ಮಾಲೆ ಅಲ್ಲ. ಸಾಹಿತ್ಯ, ಸಂಸ್ಕೃತಿ ಭಾಷೆಯ ಪ್ರತೀಕವಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ರಾಜ್ಯ ಅದು ಕರ್ನಾಟಕ. ಕರ್ನಾಟಕ ಮತ್ತು ತಮಿಳುನಾಡಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದರೆ ಹೊರ ದೇಶಕ್ಕೆ ಹೋಗುವ ಅವಶ್ಯಕತೆ ಇಲ್ಲ ಅಷ್ಟೊಂದು ಸಮೃದ್ಧವಾಗಿದೆ. ಪ್ರಕೃತಿಯನ್ನು ನೋಡಿದರೆ ಇಲ್ಲಿಯೇ ಇರ ಬೇಕು ಎನ್ನಿಸುತ್ತದೆ. ನಮ್ಮ ನಾಡು, ನಮ್ಮ ನುಡಿ ಯನ್ನು ಬೆಳೆಸುವ ಕೆಲಸ ಯುವ ಸಮುದಾಯ ದಿಂದ ಆಗಬೇಕು. ಗಂಗರು, ಚಾಲುಕ್ಯರು, ಹೊಯ್ಸಳರು ಸೇರಿದಂತೆ ಅನೇಕ ರಾಜರು ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡರು. ಭವ್ಯ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತು ವಿಶಾಲವಾದ ಆಲದ ಮರವಿದ್ದಂತೆ ಎಂದರು.
ನಿವೃತ್ತ ಕನ್ನಡ ಉಪನ್ಯಾಸಕ ಎಂ.ಪಿ.ಎಂ. ಶಾಂತವೀರಯ್ಯ ಅವರು ಜ್ಯೋತಿಷ್ಯ ಮತ್ತು ವೈದಿಕ, ಕಾಯಕ ಮತ್ತು ಧರ್ಮ, ವೈಚಾರಿಕತೆ ಮತ್ತು ಧರ್ಮ ನೈಜ ಸಮಾಜವಾದದ ಪರಿ ಕಲ್ಪನೆ ವಿಷಯ ಕುರಿತು ಉಪನ್ಯಾಸ ನೀಡುತ್ತಾ, ಕಾಯಕ ನಮ್ಮ ಬದುಕಿನ ಉಸಿರಾದರೆ, ಜ್ಞಾನ ತಂತಾನೇ ವೃದ್ಧಿಗೊಂಡು ಶರಣನಾಗಿಸುತ್ತದೆ. ಕಾಯಕ ಮನುಷ್ಯನ ದೈಹಿಕ ಹಾಗೂ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ. ಜಾತಿ, ವರ್ಗ, ವರ್ಣ, ಲಿಂಗಬೇಧವಿಲ್ಲದೇ ಶೋಷಣೆ ರಹಿತವಾದ ಸಮಾಜ ಕಟ್ಟುವಲ್ಲಿ ಬಸವಣ್ಣನವರ ಪಾತ್ರ ಬಹುಮುಖ್ಯವಾಗಿದೆ. ಕಾಯಕ ಜೀವಿಗಳ ಪರವಾಗಿ ಬಸವಣ್ಣನವರು ಧರ್ಮ ಸ್ಥಾಪಿಸಿದರು. ಸಮಾಜವನ್ನು ತಿದ್ದುವಲ್ಲಿ ಕಲೆ, ಸಾಹಿತ್ಯ, ಜಾನಪದ, ಜ್ಯೋತಿಷ್ಯ ಮತ್ತು ವೈದಿಕ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ತೆಗ್ಗಿನಮಠ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಮಾತನಾಡಿ, ಭಾರತೀಯ ವೈದಿಕ ಜ್ಯೋತಿಷ್ಯವು ಅತ್ಯಂತ ಪ್ರಾಚೀನ ಮತ್ತು ಹಳೆಯ ಜ್ಯೋತಿಷ್ಯ ವ್ಯವಸ್ಥೆ ಯಾಗಿದ್ದು, ಭವಿಷ್ಯ ವಾಣಿಗಳು ಅತ್ಯಂತ ನಿಖರ ವೆಂದು ನಂಬಲಾಗಿದೆ. ಭಾರತೀಯ ವೈದಿಕ ಜ್ಯೋತಿಷ್ಯದಲ್ಲಿ ನಕ್ಷತ್ರಗಳನ್ನು, ಗ್ರಹಗಳ ಚಲನೆ ಯನ್ನು ಅಳೆಯುವ ಸ್ಥಿರ ಎನ್ನಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚಂಗೆಪ್ಪ ಮಾತನಾಡಿ, ಕನ್ನಡದ ಬಗ್ಗೆ ನಮಗೆ ಗೌರವ, ಪ್ರೀತಿ, ಅಭಿಮಾನವಿರ ಬೇಕು. ಇತರೆ ಭಾಷೆಗಳನ್ನು ಕಲಿತು ಜಾಣರಾಗ ಬೇಕು. ಕನ್ನಡ ಸಾಹಿತ್ಯ ಪರಿಷತ್ತು ಸತ್ಯ, ಶುದ್ಧ, ನಿಷ್ಟೆ, ಪ್ರಾಮಾಣಿಕ ಕಾಯಕ ಮಾಡುವ ಮೂಲಕ ನಮ್ಮ ಬದುಕು ಹಸನುಗೊಳಿಸುವ ಕೆಲಸ ಮಾಡುತ್ತದೆ ಎಂದರು.
ತೆಗ್ಗಿನಮಠದ ಜ್ಞಾನ ಗಂಗೋತ್ರಿ ಆಡಳಿತಾಧಿಕಾರಿ ಪ್ರತೀಕ್ ಟಿ.ಎಂ. ಕಟ್ಟಿ, ಸೇತುರಾಮಚಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಭಾರಿ ಪ್ರಾಂಶುಪಾಲ ಸಿ.ಎಂ. ವೀರೇಶ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತಳವಾರ ಚಂದ್ರಪ್ಪ, ಕಸಾಪ ಗೌರವ ಕಾರ್ಯದರ್ಶಿಗಳಾದ ಆರ್. ಪದ್ಮರಾಜ್ ಜೈನ್, ಜಿ.ಮಹಾದೇವಪ್ಪ, ಗೌರವ ಕೋಶಾ ಧ್ಯಕ್ಷ ಕೆ. ರಾಘವೇಂದ್ರ ಶೆಟ್ಟಿ, ಉಪನ್ಯಾಸಕ ಟಿ.ಎಚ್. ಗಿರೀಶ್ ಉಪಸ್ಥಿತರಿದ್ದರು.