ಗಾಂಧಿನಗರದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಜೆಡಿಎಸ್ ಎಸ್ಸಿ ಘಟಕ ಮನವಿ

ದಾವಣಗೆರೆ, ಜು.5- ಗಾಂಧಿ ನಗರದಲ್ಲಿ ಆಗಬೇಕಿರುವ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳುವಂತೆ ಜಿಲ್ಲಾ ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಸಿ. ಅಂಜಿನಪ್ಪ ಕಡತಿ ಅವರು ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ವ್ಯವ ಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ಗಾಂಧಿನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್‌ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನವು ಸಂಪೂರ್ಣ ಶಿಥಿಲಗೊಂಡಿದ್ದು, ನೂತನ ಮಾದರಿ ಕಟ್ಟಡ ನಿರ್ಮಿಸಿ ಕೊಡಬೇಕು. ವ್ಯಾಯಾಮ ಶಾಲೆ ಹಾಗೂ ವಾಚನಾಲಯ ಕಟ್ಟಡ ಬೀಳುವ ಹಂತದಲ್ಲಿದ್ದು, ಅದನ್ನು ಸಂಪೂರ್ಣ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಬೇಕು. ಅಂಬೇಡ್ಕರ್ ಪಾರ್ಕ್ ಬಳಿ ಹಳೇ ಬಸ್‌ ನಿಲ್ದಾಣವಿದ್ದು, ಅದನ್ನು ಕೆಡವಿ, ಸ್ಮಾರ್ಟ್ ಸಿಟಿ ಬಸ್‌ ನಿಲ್ದಾಣ ಮಾಡಬೇಕು.

ಕಡ್ಲೆಭಟ್ಟಿಯಿಂದ ಗಾಂಧಿನಗರ ಪೊಲೀಸ್ ಠಾಣೆಯವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಬಾಕ್ಸ್ ಚರಂಡಿ, ಮಾದರಿ ಫುಟ್‌ಪಾತ್‌ಗಳನ್ನು ನಿರ್ಮಿಸ ಬೇಕು. ಹುಲಿಗೆಮ್ಮ ದೇವಸ್ಥಾನದಿಂದ ರುದ್ರಭೂಮಿ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಫುಟ್‌ಪಾತ್‌ಗಳನ್ನು ನಿರ್ಮಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಂಜಿನಪ್ಪ, ಮಂಜುನಾಥ್, ಡಿ. ಮಲ್ಲಿಕಾರ್ಜುನ್, ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.

error: Content is protected !!