ಪಕ್ಷ ಸಂಘಟನೆಗಾಗಿ ಮಹಿಳೆಯರಿಗೆ ಸೂಕ್ತ ಸ್ಥಾನ ಅಗತ್ಯ

ಜಗಳೂರು, ಜೂ.25- ಪಕ್ಷ ಸಂಘಟನೆಗಾಗಿ ಮಹಿಳೆಯರಿಗೆ ಸೂಕ್ತ ಸ್ಥಾನ ಮಾನ ಅಗತ್ಯ. ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಮಹಿಳೆಯರು ಯಾವುದೇ ರಂಗದಲ್ಲಿ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾ ಮಾಲತೇಶರಾವ್ ಜಾಧವ್ ಹೇಳಿದರು.

ಜಗಳೂರು ಪಟ್ಟಣದ ಕಾಂಗ್ರೆಸ್ ಮುಖಂಡ ಸುಧೀರ್ ರೆಡ್ಡಿ ನಿವಾಸದಲ್ಲಿ ಇಂದು ಆಯೋಜಿಸಿದ್ದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಗಳೂರು ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷರಾಗಿ ಟಿ.ಕೆಂಚಮ್ಮ ಧನ್ಯಕುಮಾರ್, ಅರಸೀಕೆರೆ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಬಾಯಿ ಅವರುಗಳಿಗೆ ಆದೇಶದ ಪ್ರತಿ ವಿತರಿಸಿ ಅವರು ಮಾತನಾಡಿದರು.

ಬಿಜೆಪಿಯವರು ಯಾವುದೇ ಸಾಧನೆಯಿಲ್ಲದೆ ಸುಳ್ಳು ಪ್ರಚಾರವನ್ನು ಮಾಡಿ ಅಧಿಕಾರ ಗಿಟ್ಟಿಸಿಕೊಂಡರು. ಕೊರೊನಾದಂತಹ ಸಂಕಷ್ಟದ ದಿನಗಳಲ್ಲಿ ಕೇವಲ ಪ್ರಚಾರಕ್ಕಾಗಿ ಪ್ಯಾಕೇಜ್ ಘೋಷಿಸಿದ್ದಾರೆಯೇ ವಿನಃ ಯಾವೊಬ್ಬ ರೈತರಿಗೆ, ಮಹಿಳೆಯರಿಗೆ, ಜನ ಸಾಮಾನ್ಯರಿಗೆ ತಲುಪಲೇ ಇಲ್ಲ. ಇಂತಹ ಸುಳ್ಳು ಪ್ರಚಾರಗಳ ವಿರುದ್ಧ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಸರ್ಕಾರದ ವೈಫಲ್ಯವನ್ನು ತಳಮಟ್ಟದಲ್ಲಿ ಪ್ರಚಾರ ಮಾಡಿ ಸಂಘಟನೆ ಮಾಡುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.

ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮಾತನಾಡಿ, ಈ ಹಿಂದೆ ಸಾಕಷ್ಟು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜನರ ಬಾಗಿಲಿಗೆ ನೀಡಿತ್ತು. ಆದರೆ ಇದನ್ನು ಹೇಳಿಕೊಳ್ಳುವಲ್ಲಿ ನಾವುಗಳು ಎಡವಿದ ಪರಿಣಾಮ ಅಧಿಕಾರವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಯಾಗಿದೆ. ಮುಂದಿನ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ನೂತನ ಪದಾಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡು ಪಕ್ಷ ಸಂಘಟನೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಜಿ.ಪಂ. ಮಾಜಿ ಅಧ್ಯಕ್ಷೆ ನಾಗರತ್ನಮ್ಮ  ಮಲ್ಲೇಶಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಜಿಲ್ಲಾ ಎಸ್ಸಿ ಉಪಾಧ್ಯಕ್ಷ ಜಿ.ಹೆಚ್.ಶಂಭುಲಿಂಗಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಗೀತಾ ಪಾಟೀಲ್, ಆಶಾ, ತಾಲ್ಲೂಕು ಎಸ್ಟಿ ಘಟಕದ ಅಧ್ಯಕ್ಷ ಬಿ.ಲೋಕೇಶ್, ಎಸ್ಸಿ ಘಟಕದ ಅಧ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ್, ಮುಖಂಡರಾದ ಜೆ.ವಿ.ಸುದೀರ್, ಸಿ.ತಿಪ್ಪೇಸ್ವಾಮಿ, ಹೆಚ್.ಎಸ್.ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಜಾಂಉಲ್ಲಾ, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಟಿ.ಕೆಂಚಮ್ಮ ಧನ್ಯಕುಮಾರ್, ಸಾಮಾಜಿಕ ಜಾಲತಾಣದ ಸಂಚಾಲಕ ರಮೇಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

error: Content is protected !!