ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಪ್ರಸ್ತಾವನೆ

ದಾವಣಗೆರೆ, ಫೆ. 6 – ಸಮೀಪದ ತೋಳಹುಣಸೆಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗಾಗಿ ಪ್ರಸ್ತಾವನೆ ಕಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ದೇಶದ ವಿವಿಧೆಡೆ ಏಳು ಬೃಹತ್ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಬಜೆಟ್ ಮಂಡನೆ ಸಂದರ್ಭದಲ್ಲಿ ಪ್ರಕಟಿಸಿದ್ದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಏಕಗವಾಕ್ಷಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಂಜಾರ್ ಗಾರ್ಮೆಂಟ್ಸ್‌ನ ಮಾಲೀಕರಾದ ಮಂಜುನಾಥ ನಾಯ್ಕ, ತೋಳಹುಣಸೆಯಲ್ಲಿ ಈಗ ಮುಚ್ಚಿರುವ ಎಲ್ಲಮ್ಮ ಮಿಲ್‌ನ 138.14 ಎಕರೆ ಜಾಗ ಈಗ ಖಾಲಿ ಉಳಿದಿದೆ. ಈ ಜಾಗವು ರಾಷ್ಟ್ರೀಯ ಜವಳಿ ನಿಗಮದ ವಶದಲ್ಲಿದೆ. ಖಾಲಿ ಇರುವ ಈ ಜಾಗವನ್ನು ಬಳಸಿಕೊಂಡು ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲು ಅವಕಾಶವಿದೆ ಎಂದು ಹೇಳಿದರು.

ಇದಕ್ಕೆ ಸಮ್ಮತಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ ಸ್ಥಾಪಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಮಂಜುನಾಥ ನಾಯ್ಕ, ದಾವಣಗೆರೆ ಈ ಹಿಂದೆ ಕರ್ನಾಟಕದ ಮ್ಯಾಂಚೆಸ್ಟರ್ ಎಂಬ ಹೆಗ್ಗಳಿಕೆ ಹೊಂದಿತ್ತು. ತೋಳಹುಣಸೆಯಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಯಾದರೆ ಆ ಹೆಗ್ಗಳಿಕೆ ಮತ್ತೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲಮ್ಮ ಮಿಲ್‌ನ 138.14 ಎಕರೆ ಜಾಗ ಖಾಲಿ ಇದೆ. ಇದನ್ನು ರಾಷ್ಟ್ರೀಯ ಜವಳಿ ನಿಗಮ ನಿರ್ವಹಿಸುತ್ತಿದೆ. ಪ್ರತಿ ವರ್ಷ ಖಾಲಿ ಜಾಗವನ್ನು ಕಾಯಲಿಕ್ಕಾಗಿಯೇ 34-35 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ ಈ ಜಾಗವನ್ನು ಉತ್ಪಾದನೆಗೆ ಬಳಸಿಕೊಂಡರೆ ವೆಚ್ಚ ಮಾಡುವುದು ತಪ್ಪಲಿದೆ ಎಂದರು. ಖಾಲಿ ಇರುವ ಎಲ್ಲಮ್ಮ ಮಿಲ್ ಜಾಗವನ್ನು ಬಳಸಿಕೊಳ್ಳುವ ಬಗ್ಗೆ ಲೋಕಸಭೆಯ ಸ್ಥಾಯಿ ಸಮಿತಿಯಲ್ಲೂ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿವೆ ಎಂದವರು ಹೇಳಿದರು.

ಜವಳಿ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಈ ಹಿಂದೆಯೇ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪ್ರಹ್ಲಾದ್ ಜೋಷಿ ಹಾಗೂ ಸದಾನಂದ ಗೌಡ ಅವರ ಜೊತೆ ಉದ್ಯಮಿಗಳು ಚರ್ಚಿಸಿದ್ದೆವು. ಜಿಲ್ಲಾ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಂಡ ನಂತರವೇ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದರು. ಅದರಂತೆ ಏಕಗವಾಕ್ಷಿ ಸಭೆಯಲ್ಲಿ ಪ್ರಸ್ತಾವನೆ ಕಳಿಸಲು ಸಮ್ಮತಿಸುವುದರೊಂದಿಗೆ ಈ ದಿಸೆಯಲ್ಲಿ ಮೊದಲ ಹೆಜ್ಜೆ ಇಡಲಾಗಿದೆ ಎಂದು ಹೇಳಿದರು.

error: Content is protected !!