ಅಸ್ಪೃಶ್ಯತೆ ನಿವಾರಣೆಗೆ ಸಂಕಲ್ಪ ಅಗತ್ಯ

ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ಅಭಿಮತ

ಜಗಳೂರು, ಏ.5- ಅಸ್ಪೃಶ್ಯತೆ ಆಚರಿಸಿದಲ್ಲಿ ಕಠಿಣ  ಕಾನೂನು ಕ್ರಮಗಳು ಜಾರಿಯಲ್ಲಿದ್ದರೂ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾದನೀಯ.  ಅದರ ನಿವಾರಣೆಗಾಗಿ ಸಂಕಲ್ಪ ಅಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ  ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಾಧನ ಕಲಾತಂಡ ಇವರುಗಳ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಅಸ್ಪೃಶ್ಯತಾ ನಿವಾರಣಾ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಂದೋಲನದ ಮೂಲಕ ಜಾಗೃತಿ ಮೂಡಿಸಿದಾಗ ಮಾತ್ರ ಅಸ್ಪೃಶ್ಯತೆ ತೊಲಗಿಸಲು  ಸಾಧ್ಯ. ಸಾಮಾಜಿಕ ಕಾರ್ಯಕ್ರಮಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ಮಾತ್ರ ಸಮಾಜಕ್ಕೆ ಅಂಟಿಕೊಂಡಿರುವ ಅಸ್ಪೃಶ್ಯತೆ, ಜಾತಿ ಪದ್ದತಿ ಕಳಂಕಗಳನ್ನು ಹೋಗಲಾಡಿ ಸಬಹುದು. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿ ಯುವ ಸಮೂಹ ಜಾಗೃತರಾಗಿ ಸಂವಿಧಾನದ ಆಶಯಗಳನ್ನು ಈಡೇರಿಸಬೇಕು. ಅಸ್ಪೃಶ್ಯತೆ ನಿವಾರಣೆಗಾಗಿ ಸಂಕಲ್ಪ ಮಾಡಬೇಕು ಎಂದರು.

ದಲಿತ ಸಂಘಟನೆ ಒಕ್ಕೂಟದ ಅಧ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ, ದಲಿತರ ಮೇಲಿನ ದೌರ್ಜನ್ಯ  ನಿರ್ಮೂಲನೆ, ಮಹಿಳೆಯರ ಮೇಲಿನ ಅತ್ಯಾಚಾರ ತಡೆ, ಶೋಷಣೆ ಮುಕ್ತ ಸಮಾಜಕ್ಕೆ ಜಾಗೃತಿ ಅಗತ್ಯ  ಎಂದರು.

ಎಐಎಸ್‌ಎಫ್‌ ರಾಜ್ಯ ಸಹಕಾರ್ಯದರ್ಶಿ  ಮಾದಿಹಳ್ಳಿ ಮಂಜಪ್ಪ ಮಾತನಾಡಿ, ದೇಶದಲ್ಲಿ ಶ್ರೇಷ್ಠ ಗ್ರಂಥ ಸಂವಿಧಾನವಾಗಿದ್ದು, ಸಂವಿಧಾನದ ಉಳಿವಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ದಲಿತ ಸಮುದಾಯದಲ್ಲಿ ಜನಿಸಿರುವುದು ಶಾಪಗ್ರಸ್ತವಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಪ್ರಭಾರಿ  ಪ್ರಾಂಶುಪಾಲ ವಾಮದೇವಪ್ಪ, ಉಪನ್ಯಾಸಕರಾದ ಶಶಿಕಲಾ, ಅಜ್ಜಯ್ಯ, ಸಂತೋಷ್ , ಕಲಾ ತಂಡದ ಪರಶುರಾಮ್, ನಾಗರಾಜ್, ಶಶಿಕಲಾ ಭಾಗವಹಿಸಿದ್ದರು. ಸಾಧನ ಕಲಾ ತಂಡದ ಗ್ಯಾಸ್ ಓಬಣ್ಣ ನೇತೃತ್ವದಲ್ಲಿ  ಜಾಗೃತಿ ಗೀತೆಗಳು ಹಾಗೂ ಅಸ್ಪೃಶ್ಯತೆ ನಿವಾರಣೆ ಜಾಗೃತಿ ನಾಟಕ ಅಭಿನಯಿಸಲಾಯಿತು.

error: Content is protected !!