ಮೋದಿ ಆಗಮನ : ನಾಯಕ ಸಮಾಜ ಪ್ರತಿಭಟನೆ

ದಾವಣಗೆರೆ, ಮಾ. 23- ಚಿತ್ರದುರ್ಗದಲ್ಲಿ ಮದಕರಿ ನಾಯಕರ ಥೀಮ್‌ಪಾರ್ಕ್‌ ನಿರ್ಮಾ ಣಕ್ಕೆ ಕಳೆದ ಚುನಾವಣೆಯಲ್ಲಿ ನೂರು ಕೋಟಿ ಅನುದಾನ ನೀಡುವುದಾಗಿ ಘೋಷಿಸಿ, ಮತ್ತೊಮ್ಮೆ ಚುನಾವಣೆ ಬಂದರೂ ಕಾರ್ಯಪ್ರವೃತ್ತರಾಗದ ಬಿಜೆಪಿ ವಿರುದ್ಧ `ಬೇಡರ ಕಿವಿಯಲ್ಲಿ ಕಮಲ’ ಎಂಬ ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದು ನಾಯಕ ಸಮುದಾಯದ ಯುವ ಮುಖಂಡ ಅಂಜುಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಮ್ಮ ಸಮುದಾಯದ ನಾಯಕ ಬಿ. ಶ್ರೀರಾಮಲು ಅವರನ್ನು ಕೇವಲ ಚುನಾವಣೆ ಗಳಲ್ಲಿ ಸ್ಟಾರ್ ಕ್ಯಾಂಪೇನ್‌ಗಾಗಿ ಬಳಸಿಕೊಂಡು ಆಶ್ವಾಸನೆ ನೀಡಿದಂತೆ ಉಪ ಮುಖ್ಯಮಂತ್ರಿ ಸ್ಥಾನ ನೀಡದೇ ಸಮುದಾಯಕ್ಕೆ ಅನ್ಯಾಯವೆ ಸಗಿದ್ದಾರೆ ಎಂದು ಅವರು ದೂರಿದರು.

ನಾಡಿದ್ದು ದಿನಾಂಕ 25ರಂದು ನಗರದಲ್ಲಿ ನಡೆಯುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಆಗಮಿಸುವ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ಸಮುದಾಯದಿಂದ ನಗರದ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಅಂದು ಮಧ್ಯಾಹ್ನ 1 ಗಂಟೆಗೆ ಕಿವಿಯಲ್ಲಿ ಕಮಲ ಮುಡಿಯುವ ಮುಖಾಂತರ ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಎಂ. ಚನ್ನಬಸಪ್ಪ, ಟಿ.ಎಸ್‌ ಕರಿಯಪ್ಪ, ದೇವರಾಜ್‌ ಕಾಟೇಹಳ್ಳಿ, ಅಜಯ್‌ ಮದಕರಿ, ರವಿಕಿರಣ್‌, ಪ್ರವೀಣ್‌ ಕುಮಾರ ನಾಯಕ ಮತ್ತಿತರರಿದ್ದರು.

error: Content is protected !!