ಕುಂಬಳೂರಿನಲ್ಲಿ ನಾಳೆ ಹನುಮಂತ ದೇವರ ತೇರು

ಕುಂಬಳೂರಿನಲ್ಲಿ ನಾಳೆ ಹನುಮಂತ ದೇವರ ತೇರು - Janathavaniಮಲೇಬೆನ್ನೂರು, ಮಾ. 7 – ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ರಥೋತ್ಸವವು ನಾಳೆ ದಿನಾಂಕ 9ರ ಗುರುವಾರ ಜರುಗಲಿದೆ. ದಿನಾಂಕ 8ರ ಬುಧವಾರ ರಾತ್ರಿ 9.30ಕ್ಕೆ ಕುದುರೆ ಉತ್ಸವದ ನಂತರ ರಾತ್ರಿ 12 ಕ್ಕೆ ಮಹಾರಥಕ್ಕೆ ಕಳಸ ಸ್ಥಾಪನೆ ಮಾಡಲಾಗುವುದು.

ದಿನಾಂಕ 9ರ ಗುರುವಾರ ಬೆಳಿಗ್ಗೆ 8.30ಕ್ಕೆ ಆನೆ ಉತ್ಸವ, ಮಧ್ಯಾಹ್ನ 12ಕ್ಕೆ ಹರಿಸೇವೆ. ಭಕ್ತಾದಿಗಳಿಂದ ಹರಕೆ, ಬಾಯಿಬೀಗ, ಕಿವಿ ಚುಚ್ಚುವುದು, ಜವಳ, ದಿಂಡು ಉರುಳು ಸೇವೆ ಸೇರಿದಂತೆ ವಿವಿಧ ಹರಕೆಗಳು ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಸಂಪ್ರದಾಯದಂತೆ ಸರಳ ರಥೋತ್ಸವ ನೆರವೇರಲಿದೆ.

ಇದೇ ದಿನ ತಡರಾತ್ರಿ (ಶುಕ್ರವಾರ ಬೆಳಗಿನ ಜಾವ) ಸ್ವಾಮಿಯ ಮಹಾರಥೋತ್ಸವವು ಶ್ರೀ ಬಸವೇಶ್ವರ ಶ್ರೀ ಬೀರಲಿಂಗೇಶ್ವರ ದೇವರಗಳೊಡಗೊಡಿ ಜರುಗಲಿದೆ.

ದಿನಾಂಕ 10ರ ಶುಕ್ರವಾರ ಬೆಳಿಗ್ಗೆ 10 ರಿಂದ 11.30ರವರೆಗೆ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿದ್ದು, ಇಡೀ ದಿನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಮಧ್ಯಾಹ್ನ 4 ಗಂಟೆಗೆ ಮುಳ್ಳೋತ್ಸವ ಇರುತ್ತದೆ. ರಾತ್ರಿ ಕಂಕಣ ವಿಸರ್ಜನೆ ನಂತರ ಓಕಳಿ, ಭೂತಗಳ ಮಣೇವು ಸೇವೆಯೊಂದಿಗೆ ಜಾತ್ರೆಗೆ ತೆರೆಬೀಳಲಿದೆ.

error: Content is protected !!